ಬಳ್ಳಾರಿ, 01 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ವ್ಯಾಜ್ಯಗಳಿಗೆ ಮಧ್ಯಸ್ಥಿಕೆ ಎಂಬುದು ಕಕ್ಷಿದಾರರಿಗೆ ಸಂಜೀವಿನಿಯಾಗಿದೆ ಎಂದು ನ್ಯಾಯಮೂರ್ತಿ ಆರ್.ನಟರಾಜ್ ಅವರು ಹೇಳಿದ್ದಾರೆ.
ತಾಳೂರು ರಸ್ತೆಯ ಜಿಲ್ಲಾ ನ್ಯಾಯಾಲಯ ಸಂಕೀರ್ಣದ 1 ನೇ ಮಹಡಿಯ ಸಭಾಂಗಣದಲ್ಲಿ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ನ್ಯಾಯಾಂಗ ಅಧಿಕಾರಿಗಳು ಮತ್ತು ನ್ಯಾಯಾಧೀಶರಿಗೆ ಆಯೋಜಿಸಿದ್ದ ‘ಮಧ್ಯಸ್ಥಿಕೆ’ ಕುರಿತು ಒಂದು ದಿನದ ಪುನಶ್ಚೇತನ ತರಬೇತಿ ಕಾರ್ಯಕ್ರಮವನ್ನು ವರ್ಚುವಲ್ ಮುಖಾಂತರ ಉದ್ಘಾಟಿಸಿ ಅವರು ಮಾತನಾಡಿದರು.
ದಿನೇ ದಿನೇ ನ್ಯಾಯಾಲಯಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಎಲ್ಲಾ ವ್ಯಾಜ್ಯಗಳನ್ನು ನ್ಯಾಯಾಧೀಶರು ಬಗೆಹರಿಸುವುದು ಸಾಧ್ಯವಾಗದಿಲ್ಲ. ಹಾಗಾಗಿ ‘ಮಧ್ಯಸ್ಥಿಕೆ' ಮುಖಾಂತರ ಪ್ರಕರಣಗಳನ್ನು ಸಂಧಾನದ ಮೂಲಕ ಬಗೆಹರಿಸಿಕೊಂಡಲ್ಲಿ ಸಮಾಜದಲ್ಲಿ ನೆಮ್ಮದಿಯ ವಾತಾವರಣ ರೂಪುಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ನ್ಯಾಯಾಧೀಶರು ‘ಮಧ್ಯಸ್ಥಿಕೆ'ಯ ಬಗ್ಗೆ ತರಬೇತಿ ಮೂಲಕ ಅದರ ಸುಕ್ಷತೆ ಅರಿತುಕೊಳ್ಳುವುದು ಅವಶ್ಯಕ ಎಂದರು.
ಬಳ್ಳಾರಿ ಜಿಲ್ಲೆಯ ಪ್ರಾಧಿಕಾರದ ಅಧ್ಯಕ್ಷರೂ ಆದ ಕೆ.ಜಿ.ಶಾಂತಿ ಅವರು ಮಾತನಾಡಿ, ಮಧ್ಯಸ್ಥಿಕೆಯು ನ್ಯಾಯಾಧೀಶರ ಕೌಶಲ್ಯಗಳನ್ನು ಹೆಚ್ಚಿಸುವ ಒಂದು ಕ್ರಿಯೆಯಾಗಿದೆ ಎಂದು ಹೇಳಿದರು.
ಕೊಪ್ಪಳ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಚಂದ್ರಶೇಖರ್.ಸಿ ಅವರು ಮಾತನಾಡಿ, ನ್ಯಾಯಾಧೀಶರು ರಾಜಿಯಾಗಬಹುದಾದ ಗುಣಗಳಿರುವ ವ್ಯಾಜ್ಯಗಳನ್ನು ಗುರುತಿಸಿ ಅವುಗಳನ್ನು ಮಧ್ಯಸ್ಥಿಕೆ ಕೇಂದ್ರಕ್ಕೆ ಕಳುಹಿಸಿ, ಮಧ್ಯಸ್ಥಿಕೆಯಿಂದ ಪ್ರಕರಣಗಳು ಮುಕ್ತಾಯಗೊಂಡಲ್ಲಿ ಕಕ್ಷಿದಾರರ ನಡುವೆ ಪ್ರೀತಿ, ಬಾಂಧವ್ಯ ವೃದ್ಧಿಯಾಗುವುದಲ್ಲದೇ ವೆಚ್ಚ ಮತ್ತು ಸಮಯ ಉಳಿತಾಯವಾಗುತ್ತದೆ ಎಂದು ತಿಳಿಸಿದರು.
ಕರ್ನಾಟಕ ‘ಮಧ್ಯಸ್ಥಿಕೆ' ಕೇಂದ್ರ ಬೆಂಗಳೂರಿನ ತರಬೇತುದಾರರಾದ ಗೀತಾದೇವಿ ಎಂ.ಪಾಪಣ್ಣ, ‘ಮಧ್ಯಸ್ಥಿಕೆ'ದಾರರಾದ ಜಯಕೀರ್ತಿ ಎಂ.ಸಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ಬಳ್ಳಾರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್. ಹೊಸಮನೆ ಅವರು ಗಣ್ಯರನ್ನು ಸ್ವಾಗತಿಸಿದರು.
ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಾಂತೇಶ ದರಗಡ್ ಅವರು ಕಾರ್ಯಕ್ರಮ ವಂದಿಸಿದರು. ಬಳ್ಳಾರಿ ಸಿಜೆಎಂ ಇಬ್ರಾಹಿಂ ಮುಜಾವರ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಾಗಾರದಲ್ಲಿ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ನ್ಯಾಯಾಂಗ ಅಧಿಕಾರಿಗಳು, ನ್ಯಾಯಾಧೀಶರು ಹಾಗೂ ಇತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್