ಬೆಂಗಳೂರು, 09 ಆಗಸ್ಟ್ (ಹಿ.ಸ.) :
ಆ್ಯಂಕರ್ : ಧರ್ಮಸ್ಥಳ ಎಂಬ ಶ್ರದ್ಧಾ ಕೇಂದ್ರದ ವಿರುದ್ಧ ಎಡಪಂಥೀಯರು, ನಗರ ನಕ್ಸಲರು ಮುಗಿಬಿದ್ದಿದ್ದಾರೆ. ಈ ಸಮಾಜಘಾತುಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಬೆಂಬಲಕ್ಕೆ ನಿಂತಿದೆ ಎಂದು ರಾಜ್ಯ ಬಿಜೆಪಿ ಘಟಕ ಆರೋಪಿಸಿದೆ.
ಹಿಂದೂ ವಿರೋಧಿ ಮನಸ್ಥಿತಿ ಹೊಂದಿರುವ ಮುಖ್ಯಮಂತ್ರಿಗಳ ಹಿಂದೆ ಮುಂದೆ ಈಗ ನಗರ ನಕ್ಸಲರು ಠಳಾಯಿಸುತ್ತಿದ್ದಾರೆ. ಶವ ಹೂತಿಟ್ಟೆ ಎಂಬ ಅನಾಮಿಕನ ಆರೋಪಕ್ಕೆ ಎಸ್ಐಟಿ ರಚಿಸಿ ಎಂದು ಆರಂಭದಲ್ಲಿ ಎಡಪಂಥೀಯರು ಆಗ್ರಹಿಸಿದಾಗ ಇದಕ್ಕೆಲ್ಲಾ ಎಸ್ಐಟಿ ರಚಿಸುವ ಅಗತ್ಯವಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದ ಮುಖ್ಯಮಂತ್ರಿ ಅದರ ಮರುದಿನವೇ ನಗರ ನಕ್ಸಲರು ಹೇಳಿದವರನ್ನೇ ಎಸ್ಐಟಿ ಮುಖ್ಯಸ್ಥರನ್ನಾಗಿಸಿ ಎಸ್ಐಟಿ ರಚಿಸಿದರು. ಇದರ ಹಿಂದೆ ಹಲವರ ಒತ್ತಡವಿದೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಶಬರಿಮಲೈ, ಶನಿಶಿಂಗಾಪುರ, ಈಶಾ ಬಳಿಕ ಈಗ ಧರ್ಮಸ್ಥಳ ವಿರುದ್ಧ ಟೂಲ್ ಕಿಟ್ ಕಾರ್ಯಾಚರಿಸುತ್ತಿದೆ. ಹಿಂದೂಗಳ ಶ್ರದ್ಧಾ ಕೇಂದ್ರಗಳೇ ಅವರ ಟಾರ್ಗೆಟ್ ಆಗಿದೆ ಎಂದು ಆರೋಪಿಸಿದೆ.
ಎಸ್ಐಟಿ ತನಿಖೆಗೆ ಯಾರ ಅಭ್ಯಂತರವಿಲ್ಲದಿದ್ದರೂ, ಬುರುಡೆ ದೂರುದಾರನ ನಡವಳಿಕೆ, ಆತನ ತಾಳಮೇಳಕ್ಕೆ ಕುಣಿಯುತ್ತಿರುವ ಎಸ್ಐಟಿ, ಸುಳ್ಳು ಸುದ್ದಿಗಳು ಕ್ಷೇತ್ರದ ಭಕ್ತರನ್ನು ಆಕ್ರೋಶಿತಗೊಳಿಸುತ್ತಿದೆ. ಸರ್ಕಾರ ಇದಕ್ಕೆ ಕಡಿವಾಣ ಹಾಕದೇ ಹೋದಲ್ಲಿ ಕ್ಷೇತ್ರದ ಭಕ್ತರು ಮತ್ತಷ್ಟು ರೊಚ್ಚಿಗೇಳುವ ಅಪಾಯವಿದೆ, ಈಗಾಗಲೇ ಅಲ್ಲಲ್ಲಿ ಪ್ರತಿಭಟನೆ ಆರಂಭಗೊಂಡಿದೆ. ಮುಂದಾಗುವ ಅನಾಹುತಗಳಿಗೆ ಸರ್ಕಾರವೇ ಹೊಣೆ ಆಗಬೇಕಾದೀತು ಎಂದು ಬಿಜೆಪಿ ಎಚ್ಚರಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa