ರಾಯಚೂರು, 12 ಆಗಸ್ಟ್ (ಹಿ.ಸ.) :
ಆ್ಯಂಕರ್ : ಕೌಶಲ್ಯಾಭಿವೃದ್ಧಿ ಇಲಾಖೆಯ ವತಿಯಿಂದ 2024-25ನೇ ಸಾಲಿನಲ್ಲಿ ನೀಡುತ್ತಿರುವ ಅಭಿವೃದ್ಧಿ ವಿಷಯಾಧಾರಿತ ಉದ್ಯಮಶೀಲತಾ ಅಭಿವೃದ್ಧಿ ಕೋರ್ಸ್ಗಳ ತರಬೇತಿಗೆ ಯುವನಿಧಿ ಫಲಾನುಭವಿಗಳು ಕೌಶಲ್ಯಕರ್ ಪೋರ್ಟಲ್ನಲ್ಲಿ ನೋಂದಾಯಿಸಿಕೊಳ್ಳುವಂತೆ ಜಿಲ್ಲಾ ಕೌಶಲ್ಯ ಮಿಷನ್ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ತಿಳಿಸಿದ್ದಾರೆ.
ಯುವನಿಧಿ ಯೋಜನೆಯಡಿಯಲ್ಲಿ ನೋಂದಾಯಿಸಿಕೊಂಡ ನಿರುದ್ಯೋಗ ಭತ್ಯೆ ಪಡೆಯುತ್ತಿರುವ ಯುವಕ ಹಾಗೂ ಯುವತಿಯರಿಗೆ ಯುವನಿಧಿ ಪ್ಲಸ್ ಕಾರ್ಯಕ್ರಮದಡಿ ಕೌಶಲ್ಯ ತರಬೇತಿ ಮತ್ತು ಉದ್ಯಮಶೀಲತಾ ತರಬೇತಿಯನ್ನು ಜಿಟಿಟಿಸಿ, ಸಿಡಾಕ್, ಕರ್ನಾಟಕ ಐಟಿಐ ಉದ್ಯೋಗ ಸೋಸೈಟಿ, ಕರ್ನಾಟಕ ಜರ್ಮನ್ ಬಹು ಕೌಶಲ್ಯ ಅಭಿವೃದ್ಧಿ ನಿಗಮ, ಮೋಕ್ಷಗೊಂಡ ತರಬೇತಿ ಸಂಸ್ಥೆಗಳ ಮುಖಾಂತರ ಆಯೋಜಿಸಲು ಉದ್ದೇಶಿಸಲಾಗಿದೆ.
ಯುವನಿಧಿ ಯೋಜನೆಯಡಿಯಲ್ಲಿ ನೋಂದಾಯಿಸಿ ನೇರ ನಗದು ವರ್ಗಾವಣೆ ಮೂಲಕ ನಿರಂತರವಾಗಿ 6 ತಿಂಗಳು ನಿರುದ್ಯೋಗ ಭತ್ಯೆಯನ್ನು ಪಡೆಯುತ್ತಿರುವ ಫಲಾನುಭವಿಗಳು ಕೌಶಲ್ಯ ತರಬೇತಿ ಮತ್ತು ಉದ್ಯಮಶೀಲತಾ ತರಬೇತಿಯನ್ನು ಪಡೆಯಲು ಕೌಶಲ್ಯಕರ್ ಪೋರ್ಟಲ್ನಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳತಕ್ಕದ್ದು ಹಾಗೂ ಒಂದು ವೇಳೆ ತರಬೇತಿಯನ್ನು ಪಡೆಯಲು ಕೌಶಲ್ಯಕರ್ ಪೊರ್ಟಲ್ನಲ್ಲಿ ನೋಂದಾಯಿಸಿಕೊಳ್ಳದೆ ಇದ್ದಲ್ಲಿ ಅಂತಹ ಅಭ್ಯರ್ಥಿಗಳಿಗೆ ನಿರುದ್ಯೋಗ ಭತ್ಯೆಯನ್ನು ಸ್ಥಗಿತಗೊಳಿಸಲಾಗುವುದು.
ಯುವನಿಧಿ ಫಲಾನುಭವಿಗಳು ಯೋಜನೆಯಡಿ ಪಡೆಯುತ್ತಿರುವ ನಿರುದ್ಯೋಗ ಭತ್ಯೆಯನ್ನು ಕೌಶಲ್ಯ ತರಬೇತಿ ಮತ್ತು ಉದ್ಯಮಶೀಲತಾ ತರಬೇತಿಯನ್ನು ಪಡೆಯಲು ಕೌಶಲ್ಯಕರ್ ಪೋರ್ಟಲ್ನಲ್ಲಿ ನೋಂದಾಯಿಸಿಕೊಂಡು ತರಬೇತಿ ಪಡೆದರೆ ನಿರುದ್ಯೋಗ ಭತ್ಯೆ ತಡೆಹಿಡಿಯಲಾಗುತ್ತದೆಂದು ಭಾವಿಸಿ ಕೌಶಲ್ಯಕರ್ ಪೋರ್ಟಲ್ನಲ್ಲಿ ನೊಂದಾಯಿಸಿಕೊಳ್ಳಲು ಹಿಂಜರಿಯುತ್ತಿರುವುದಾಗಿ ತಿಳಿದು ಬಂದಿರುತ್ತದೆ. ಆದರೆ ತರಬೇತಿಯನ್ನು ಪಡೆದರೂ ಸರ್ಕಾರವು ನಿಗದಿಪಡಿಸಿರುವ ಅವಧಿಯವರೆಗೆ ನಿರುದ್ಯೋಗ ಭತ್ಯೆಯನ್ನು ಪಡೆಯಲು ಯಾವುದೇ ತೊಂದರೆಗಳು ಇರುವುದಿಲ್ಲ. ಆದ್ದರಿಂದ ಎಲ್ಲಾ ಯುವನಿಧಿ ಫಲಾನುಭವಿಗಳು ಕೌಶಲ್ಯ ತರಬೇತಿ ಮತ್ತು ಉದ್ಯಮಶೀಲತೆ ತರಬೇತಿಯನ್ನು ಪಡೆಯಲು ಕೌಶಲ್ಯಕರ್ ಪೋರ್ಟಲ್ನಲ್ಲಿ ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್