ಗದಗ, 21 ಜುಲೈ (ಹಿ.ಸ.) :
ಆ್ಯಂಕರ್ : ಕರ್ನಾಟಕ ಸರ್ಕಾರ ಜಾರಿಗೊಳಿಸಿದ ಪಂಚ ಗ್ಯಾರಂಟಿ ಯೋಜನೆಗಳನ್ನು ಮಾನವ ಹಕ್ಕುಗಳಾಗಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರು ಹೇಳಿದರು.
ನಗರದ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ವಿಶ್ವವಿದ್ಯಾಲಯಲ್ಲಿ ಸೋಮವಾರ ಏರ್ಪಡಿಸಿದ್ದ ಕವಲು ದಾರಿಯಲ್ಲಿ ಮಾನವ ಹಕ್ಕುಗಳು : ಭಾರತ ಹಾಗೂ ಪಶ್ಚಿಮ ವಿಷಯ ಕುರಿತ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಜಾರಿ ತಂದ ಪಂಚ ಗ್ಯಾರಂಟಿ ಯೋಜನೆಗಳನ್ನು ಸಂವಿಧಾನಾತ್ಮಕವಾಗಿ ಮಾನವ ಹಕ್ಕುಗಳನ್ನಾಗಿ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಇದರಿಂದಾಗಿ ಪ್ರತಿಯೊಬ್ಬರೂ ಸಹ ಗೌರವಯುತ ಜೀವನ ಸಮಾಜದಲ್ಲಿ ದೊರೆಯಲಿ ಎಂದರು.
ಬಡತನ ಎಲ್ಲಿವರೆಗೂ ಇರುವುತ್ತದೆ ಅಲ್ಲಿ ವರೆಗೂ ಮಾನವ ಹಕ್ಕುಗಳ ಬೆಲೆ ಇಲ್ಲದಂತಾಗುತ್ತದೆ. ಸರ್ಕಾರ ರಾಜ್ಯದಲ್ಲಿ ಪಂಚಗ್ಯಾರಂಟಿ ಜಾರಿ ತರುವ ಮೂಲಕ ಬಡತನ ನಿರ್ಮೂಲನೆ ಮಾಡಿದೆ. ಮಾನವ ಹಕ್ಕುಗಳ ರಕ್ಷಣೆ ಮತ್ತು ಬಲವರ್ಧನೆಗೆ ಗ್ಯಾರಂಟಿಗಳು ಪೂರಕವಾಗಿವೆ ಎಂದು ತಿಳಿಸಿದರು.
ಕಾನೂನು ನಿಯಮಗಳು, ಆಡಳಿತಾತ್ಮಕ ವಿಷಯ, ಸಂವಿಧಾನಾತ್ಮಕ ಪ್ರಜಾಪ್ರಭುತ್ವದಲ್ಲಿ ಮಾನವ ಹಕ್ಕುಗಳ ರಕ್ಷಣೆ ಜಾಗೃತಿಗಾಗಿ ಅಂತರಾಷ್ಟ್ರೀಯ ವಿಚಾರ ಸಂಕಿರಣಗಳಂತಹ ಕಾರ್ಯಕ್ರಮದ ಅಗತ್ಯವಿದೆ. ಸಮಾಜದಲ್ಲಿ ಜವಾಬ್ದಾರಿ ನಾಗರಿಕರಾಗಿ ನಾವು ನಡೆದುಕೊಳ್ಳುತ್ತಿದ್ದೇವಾ? ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಿದೆ ಎಂದು ನುಡಿದರು.
1993 ರಲ್ಲೇ ಮಾನವ ಹಕ್ಕುಗಳ ಆಯೋಗ ರಚನೆ ಮಾಡಲಾಗಿತ್ತು. ಆದರೆ, 2003 ರ ವರೆಗೂ ನಿಯಮಾವಳಿಗಳೇ ರಚನೆ ಆಗದೇ ದೇಶದ ಯಾವುದೇ ರಾಜ್ಯದಲ್ಲಿ ಮಾನವ ಹಕ್ಕುಗಳು ಜಾರಿ ಆಗಲಿಲ್ಲ. 2003 ರಲ್ಲಿ ರಾಜ್ಯ ಸರ್ಕಾರ ನಿಯಮಾವಳಿ ರಚನೆ ಮಾಡಿ ಜಾರಿ ಮಾಡಿದ ಮೊದಲ ರಾಜ್ಯ ವಾಯಿತು ಎಂದು ಹೇಳಿದರು.
ಕರ್ನಾಟಕ ರಾಜ್ಯದಲ್ಲಿ ಮಾನವ ಹಕ್ಕುಗಳ ನ್ಯಾಯಾಲಯವನ್ನು ಸ್ಥಾಪಿಸಿ, ಮಾನವ ಹಕ್ಕುಗಳ ರಕ್ಷಣೆಗೆ ಮುಂದಾಗಿದೆ. ಹಕ್ಕುಗಳ ಉಲ್ಲಂಘನೆ ಗಳನ್ನು ತಡೆದು ಮೂಲಭೂತ ಹಕ್ಕುಗಳ ರಕ್ಷಣೆಯೇ ನ್ಯಾಯಾಲಯ ಉದ್ದೇಶವಾಗಿದೆ. ಕಾಲ ಕಾಲಕ್ಕೆ ಮಾನವ ಹಕ್ಕುಗಳು ಬದಲಾವಣೆಯಾಗಿವೆ. ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುನ್ನು ಹಕ್ಕುಗಳ ಮೂಲಕ ನೀಡಲಾಗಿದೆ. ಅದರಂತೆ ಶೈಕ್ಷಣಿಕ ಹಕ್ಕು, ಜೀವಿಸುವ ಹಕ್ಕು, ಆರೋಗ್ಯದ ಹಕ್ಕುಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
ನಾಗರಿಕ ಸಮಾಜ ನಿರ್ಮಾಣದಲ್ಲಿ ಜನರ ಮೂಲಭೂತ ಹಕ್ಕುಗಳ ಮಹತ್ವ ಸಾರಬೇಕಿದೆ. ಮಾನವ ಹಕ್ಕುಗಳ ಪಾಲನೆಯಿಂದ ಸಾಮಾಜಿಕ ಕ್ರಾಂತಿ ಜರುಗಿದೆ ಎಂದು ಮಾನವ ಹಕ್ಕುಗಳ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಕಾನೂನು ಆಯೋಗದ ಅಧ್ಯಕ್ಷ ಡಾ. ಅಶೋಕ ಇಂಚಿಗೇರಿ ಮಾತನಾಡಿ, ನಿಜವಾದ ಮನುಷ್ಯರಾಗುವುದೇ ಮಾನವ ಹಕ್ಕಿನ ರಕ್ಷಣೆ ಆಗಿದೆ. ನೈತಿಕತೆಯನ್ನು ಬೆಂಬಲಿಸುವುದು, ಸ್ವತಂತ್ರ್ಯವಾಗಿ ಬದುಕುವುದು ಮತ್ತು ಶಾಂತಿಯುತ ಸಮಾಜ ನಿರ್ಮಾಣಕ್ಕೆ ಮಾನವ ಹಕ್ಕುಗಳು ಎಂದು ಹೇಳಬಹುದು. ಎಲ್ಲ ಧರ್ಮಗ್ರಂಥಗಳಲ್ಲಿ ಮಾವನ ಹಕ್ಕುಗಳನ್ನು ಉಲ್ಲೇಖಿಸಲಾಗಿದೆ. ನಿಧನದ ನಂತರವೂ ಅಂತ್ಯಸಂಸ್ಕಾರವು ಕೂಡ ಇಚ್ಛೆಯಂತೆ ನಡೆಯಬೇಕು. ಅದು ಕೂಡ ಮಾನವ ಹಕ್ಕಾಗಿದೆ ಎಂದು ಹೇಳಿದರು.
ಕಾನೂನು ಆಯೋಗದ ಸದಸ್ಯ ಎ.ಜೆ. ನಿಜಗಣ್ಣವರ, ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ. ಬಸವರಾಜ, ಕಾನೂನು ಮತ್ತು ಸಂಸದೀಯ ಸುಧಾರಣೆ ಸಂಸ್ಥೆ ನಿರ್ದೇಶಕ ಸಿ. ಎಸ್. ಪಾಟೀಲ, ಕಾನೂನು ಆಯೋಗದ ಸದಸ್ಯ ಕಾರ್ಯದರ್ಶಿ ಧರ್ಮ ಗೌಡರ, ಬೆಂಗಳೂರು ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರೊ. ಎನ್. ದಶರಥ, ಮಹಾತ್ಮಾ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ವಿವಿ ಕುಲಸಚಿವ ಡಾ. ಎಸ್.ವಿ. ನಾಡಗೌಡರ, ವಿತ್ತಾಧಿಕಾರಿ ಪ್ರಶಾಂತ ಜೆ.ಸಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Lalita Manjunath Pattar