ಕೋಲಾರ ಜಿಲ್ಲಾ ಬ್ರಾಹ್ಮಣ ಮಹಾಸಭೆಯಿಂದ ಸದಸ್ಯತ್ವ ಅಭಿಯಾನ
ಕೋಲಾರ ಜಿಲ್ಲಾ ಬ್ರಾಹ್ಮಣ ಮಹಾಸಭೆಯಿಂದ ಸದಸ್ಯತ್ವ ಅಭಿಯಾನ
ಚಿತ್ರಶೀರ್ಷಿಕೆ : ಕೋಲಾರದ ಕೆಇಬಿ ಸಮುದಾಯ ಭವನದಲ್ಲಿ ಕೋಲಾರ ಜಿಲ್ಲಾ ಬ್ರಾಹ್ಮಣ ಮಹಾಸಭಾ ಉದ್ಘಾಟನೆ ಹಾಗೂ ರಾಜ್ಯ ಪದಾಧಿಕಾರಿಗಳ ಅಭಿನಂದನಾ ಕಾರ್ಯಕ್ರಮಕ್ಕೆ ಅಖಿಲಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಸ್.ರಘುನಾಥ್ ಚಾಲನೆ ನೀಡಿದರು.


ಕೋಲಾರ ಜಿಲ್ಲಾ ಬ್ರಾಹ್ಮಣ ಮಹಾಸಭೆಯಿಂದ ಸದಸ್ಯತ್ವ ಅಭಿಯಾನ

ಕೋಲಾರ, ಜುಲೈ ೨೧(ಹಿ.ಸ.) :

ಆ್ಯಂಕರ್ : ವಿಪ್ರ ಸಮುದಾಯದಲ್ಲಿನ ಹಿಂದುಳಿದವರ ನೆರವಾಗುವ ದೃಷ್ಟಿಯಿಂದ ೧೦೦ ಕೋಟಿ ರೂ ಕ್ಷೇಮಾಭಿವೃದ್ದಿ ನಿಧಿ ಸಂಗ್ರಹಿಸುವ ಗುರಿ ಹೊಂದಿದ್ದು ಈ ಸಂಬಂಧ ಕಾರ್ಯಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದ ಅಖಿಲಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಸ್.ರಘುನಾಥ್, ಸಮುದಾಯ ಸಂಘಟಿತವಾಗಲು ಕರೆ ನೀಡಿದರು.

ಕೋಲಾರ ನಗರದ ಕೆಇಬಿ ಸಮುದಾಯ ಭವನದಲ್ಲಿ ಕೋಲಾರ ಜಿಲ್ಲಾ ಬ್ರಾಹ್ಮಣ ಮಹಾಸಭಾ ಉದ್ಘಾಟನೆ ಹಾಗೂ ರಾಜ್ಯ ಪದಾಧಿಕಾರಿಗಳ ಅಭಿನಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಬ್ರಾಹ್ಮಣ ಸಮುದಾಯದಲ್ಲಿನ ಕನಿಷ್ಟ ೧೦ ಸಾವಿರ ಮಂದಿ ಉಳ್ಳವರಿಂದ ತಲಾ ೧ ಲಕ್ಷ ಸಂಗ್ರಹಿಸಿ ೧೦೦ ಕೋಟಿ ನಿಧಿ ಇಡುವ ಗುರಿ ಇದ್ದು,ಈಗಾಗಲೇ ೩ ತಿಂಗಳಲ್ಲಿ ೮೦ ಲಕ್ಷ ಸಂಗ್ರಹವಾಗಿದ್ದು, ಈ ಕಾರ್ಯದಲ್ಲಿ ಪಾರದರ್ಶಕತೆ ಕಾಪಾಡಲು ಮತ್ತು ಲೋಪವಾದಂತೆ ಎಚ್ಚರವಹಿಸಲು ಉಪಸಮಿತಿ ರಚಿಸುವುದಾಗಿ ತಿಳಿಸಿದರು.

ಕೋಲಾರ ಜಿಲ್ಲೆಯಲ್ಲಿ ಸದಸ್ಯತ್ವ ಅಭಿಯಾನ ಆರಂಭಿಸಿ, ಕಟ್ಟಕಡೆಯ ಹಳ್ಳಿಯ ವಿಪ್ರರೂ ಸಂಘಟನೆಯಲ್ಲಿ ಸದಸ್ಯರಾಗಬೇಕು ಒಟ್ಟಾರೆ ಜಿಲ್ಲೆಯಲ್ಲಿ ೨೫ ಸಾವಿರ ಸದಸ್ಯತ್ವ ನೋಂದಣಿಯ ಸಂಕಲ್ಪದೊಂದಿಗೆ ಕೆಲಸ ಮಾಡಿ. ಸಮುದಾಯದಲ್ಲಿನ ಆರ್ಥಿಕವಾಗಿ ಹಿಂದುಳಿದವರ ಕೈಹಿಡಿಯುವ ಕಾರ್ಯದಲ್ಲಿ ಅತಿ ಕಡಿಮೆ ಜನಸಂಖ್ಯೆ ಇರುವ ಜೈನ್ಯರ ಸಂಘಟನೆ ಕಾರ್ಯ ನಮಗೆ ಮಾದರಿಯಾಗಬೇಕಿದೆ, ಬ್ರಾಹ್ಮಣ ಸಮುದಾಯಕ್ಕೆ ಸರ್ಕಾರಿ ಕೆಲಸದ ಆಸೆ ಕ್ಷೀಣಿಸತೊಡಗಿದೆ, ಖಾಸಗಿ ವಲಯದಲ್ಲಿ ಉದ್ಯೋಗ ಸಿಗುತ್ತಿದೆ, ಮತ್ತು ಸಮುದಾಯದ ಉದ್ಯೋಗದಾತರು ಬಡ ವಿಪ್ರರ ನೆರವಿಗೆ ಬರಲು ಕೋರಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಹಿರಿಯ ಉಪಾಧ್ಯಕ್ಷ ಆರ್.ಲಕ್ಷ್ಮೀಕಾಂತ್ ಮಾತನಾಡಿ, ಮಹಾ ಸಭಾ ಅತ್ಯಂತ ದೂರದೃಷ್ಟಿಯ ಕಾರ್ಯಯೋಜನೆ ರೂಪಿಸಿದೆ, ೧೦೦ ಕೋಟಿ ಸಂಗ್ರಹದ ಈ ಕಾರ್ಯ ಮಾಡಿಯೇ ತೀರಲು ನಿರ್ಧಾರ ಕೈಗೊಂಡಿದೆ ಎಂದರು.

ಮಹಾಸಭಾ ಮುಖ್ಯ ಉದ್ದೇಶ ಪ್ರತಿಯೊಂದು ವಿಪ್ರ ಕುಟುಂಬದ ಸದಸ್ಯತ್ವವೂ ನೋಂದಣಿ ಮಾಡಿಸಬೇಕು, ಸಮುದಾಯದ ಯಾರೂ ಸಂಘಟನೆಯಿಂದ ದೂರ ಉಳಿಯಬಾರದು ಎಂಬುದಾಗಿದೆ, ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಸದಸ್ಯತ್ವ ಅಭಿಯಾನ ನಡೆಸಲಾಗುತ್ತಿದೆ ಎಂದರು.

ಮಹಾಸಭಾ ಉಪಾಧ್ಯಕ್ಷ ಪುರುಷೋತ್ತಮ್, ಹಾಗೂ ಉಪಾಧ್ಯಕ್ಷ ನಾಗರಾಜ್ ಮಾತನಾಡಿ, ಸಮುದಾಯದಲ್ಲಿ ಬಡವರು ಇದ್ದಾರೆ ಅವರ ಪಟ್ಟಿ ತಯಾರಿಸಿ, ಆರ್ಥಿಕ ಪರಿಸ್ಥಿತಿ ಕುರಿತು ಸರ್ವೇ ನಡೆಸಿ, ಅವರ ನೆರವಿಗೆ ಮುಂದಾಗೋಣ, ಶಿಕ್ಷಣ, ಆರೋಗ್ಯಕ್ಕೆ ನೆರವು ಬಯಸಿ ಮಹಸಭಾಗೆ ಅನೇಕ ಮನವಿಗಳು ಬರುತ್ತಿವೆ, ಇದಕ್ಕೆಲ್ಲಾ ನಾವು ಸಿದ್ದರಾಗಿರಬೇಕು, ರಘುನಾಥ್ ಸಾರಥ್ಯದಲ್ಲಿ ಕ್ಷೇಮಾಭಿವೃದ್ದಿ ನಿಧಿಯಿಟ್ಟು ನೆರವಾಗುವ ಸಂಕಲ್ಪ ನಮ್ಮದಾಗಿದೆ ಎಂದರು.

ಕೋಲಾರ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ವಿ.ಎಸ್.ಚಂದ್ರಶೇಖರ್,ಜಿಲ್ಲೆಯಲ್ಲಿ ೪೫ ಲಕ್ಷ ವಿಪ್ರರಿದ್ದಾರೆ ಅದರೆ ಸರ್ಕಾರ ೧೫ ಲಕ್ಷ ಎಂದು ಹೇಳುತ್ತಿದೆ ಈ ಹಿನ್ನಲೆಯಲ್ಲಿ ಆ.೩೦ ರೊಳಗೆ ಜಿಲ್ಲೆಯಲ್ಲಿ ಇರುವ ವಿಪ್ರರ ಸರ್ವೇ ನಡೆಸಲು ಕ್ರಮ ವಹಿಸಿದ್ದು, ಈಗಾಗಲೇ ಕೆಲವು ಹೋಬಳಿಗಳ ಸರ್ವೇ ಕಾರ್ಯ ಮುಗಿದಿದೆ ಎಂದ ಅವರು, ಜಾತಿ ಸರ್ವೇಗೆ ಬಂದಾಗ ಉಪಪಂಗಡಗಳ ಹೆಸರು ಹೇಳದಿರಿ, ಬ್ರಾಹ್ಮಣ ಎಂದು ತಿಳಿಸಲು ಮನವಿ ಮಾಡಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಕೋಲಾರ ಜಿಲ್ಲಾ ಪ್ರತಿನಿಧಿ ಆನಂದಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ೧೯೯೮ ರಿಂದ ಜಿಲ್ಲಾ ಬ್ರಾಹ್ಮಣ ಸಂಘ ನಿಷ್ಕ್ರಿಯವಾಗಿತ್ತು, ಈ ಹಿನ್ನಲೆಯಲ್ಲಿ ಮಹಾಸಭಾ ಚುನಾವಣೆ ಸಂದರ್ಭದಲ್ಲಿ ಘೋಷಿಸಿದಂತೆ ಜಿಲ್ಲಾ ಮಹಾಸಭಾ ರಚಿಸಲಾಗಿದೆ, ವಿಪ್ರರಿಗೆ ಸಹಾಯಹಸ್ತ ಚಾಚುವ ಉದ್ದೇಶದಿಂದ ಸಾಮೂಹಿಕ ಉಪನಯನ, ವಟುಗಲಿಗೆ ವೇದ ಪಾಠ, ಸಂಸ್ಕೃತಿ ರಕ್ಷಣೆಗಾಗಿ ಪ್ರಯತ್ನ ನಡೆಸಿ, ಸಂಘಟನೆ-ಸ್ವಾವಲಂಬನೆ-ಸಂಸ್ಕಾರದ ನೆಲೆಗಟ್ಟಿನಲ್ಲಿ ಸಾಗುವುದಾಗಿ ತಿಳಿಸಿದರು.

ಜಿಲ್ಲಾ ಬ್ರಾಹ್ಮಣ ಮಹಾಸಭಾ ಗೌರವಾಧ್ಯಕ್ಷ ಕೆ.ವಿ.ನಾಗರಾಜ್ ಹಾಗೂ ಮಹಾಸಭಾ ರಾಜ್ಯ ಸಂಘಟನಾ ಕಾರ್ಯದರ್ಶಿ ಜೆ.ಎನ್.ರಾಮಕೃಷ್ಣ ಮಾತನಾಡಿದರು.

ಈ ಸಂದರ್ಭದಲ್ಲಿ ರಾಜ್ಯ ಮಹಾಸಭಾ ಅಧ್ಯಕ್ಷ ರಘುನಾಥ್ ಸೇರಿದಂತೆ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಲಕ್ಷ್ಮೀಶ, ಜೆ.ಎನ್.ರಾಮಕೃಷ್ಣ, ಹೆಚ್.ಆರ್.ವೆಂಕಟೇಶ್,ಜಂಟಿ ಕಾರ್ಯದರ್ಶಿಗಳಾದ ಟಿ.ಕೆ.ವೆಂಕಟಾಚಲಪತಿ, ಶೇಷಗಿರಿರಾವ್, ವಲ್ಲಭಣ್ಣ, ಕೃಷ್ಣಮೂರ್ತಿ ಮತ್ತಿತರರನ್ನು ಅಭಿನಂದಿಸಲಾಯಿತು.

ನೀರಿನಲ್ಲಿನ ಪ್ಲೊರೈಡ್ ಪರಿಣಾಮಗಳ ಕುರಿತು ಸಂಶೋಧನೆನಡೆಸುತ್ತಿರುವ ಡಾ.ಕೆ.ಎನ್.ಶಶಿಧರ್, ಪತ್ರಕರ್ತ ಹೆಚ್.ಕೆ.ರಾಘವೇಂದ್ರ, ನಿವೃತ್ತ ಉಪನ್ಯಾಸಕ ರವಿಂದ್ರ, ಪಿಎಚ್‌ಡಿ ಸಾಧಕರಾದ ಡಾ.ವೈಪಿ.ಅರುಣ, ಡಾ.ಎಂ.ಎಸ್.ಶಿವಪ್ರಸಾದ್, ಕಂಪನಿ ಸೆಕ್ರೆಟರಿ ೭ನೇ ರ‍್ಯಾಂಕ್ ಸಾಧಕಿ ಸ್ಪೂರ್ತಿ ಮುರಳೀಧರ್, ಪಿಯುಸಿ ೨ನೇ ರ‍್ಯಾಂಕ್ ಪಡೆದ ಹೆಚ್.ಬಿ.ಭಾರ್ಗವಿ ಸೇರಿದಂತೆ ಸಭಾದ ಪದಾಧಿಕಾರಿಗಳನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಮಾಜಸೇವಕ ಹೊಳಲಿ ಪ್ರಕಾಶ್, ಜಿಲ್ಲಾ ಕಾರ್ಯದರ್ಶಿ ಸವಿನಯ್, ಖಜಾಂಚಿ ರವಿ, ಗೌರವ ಸಲಹೆಗಾರ ಎಸ್.ಜಯರಾವ್, ನಿರ್ದೇಶಕರಾದ ಸೌಜನ್ಯ, ಕೆಜಿಎಫ್ ಪತ್ರಕರ್ತ ಮುರಳಿಧರರಾವ್, ಸತ್ಯನಾರಾಯಣರಾವ್ ಭಾಗವಹಿಸಿದ್ದರು.

ಚಿತ್ರ ಶೀರ್ಷಿಕೆ : ಕೋಲಾರದ ಕೆಇಬಿ ಸಮುದಾಯ ಭವನದಲ್ಲಿ ಕೋಲಾರ ಜಿಲ್ಲಾ ಬ್ರಾಹ್ಮಣ ಮಹಾಸಭಾ ಉದ್ಘಾಟನೆ ಹಾಗೂ ರಾಜ್ಯ ಪದಾಧಿಕಾರಿಗಳ ಅಭಿನಂದನಾ ಕಾರ್ಯಕ್ರಮಕ್ಕೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಸ್.ರಘುನಾಥ್ ಚಾಲನೆ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande