ನಾಯಿ ಕಡಿತ-ಹಾವು ಕಡಿತದ ಜನಜಾಗೃತಿ
ಬಳ್ಳಾರಿ, 05 ಜೂನ್ (ಹಿ.ಸ.) : ಆ್ಯಂಕರ್ : ನಾಯಿ ಕಚ್ಚಿದ ದಿನವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ರೇಬಿಸ್ ರೋಗ ತಡೆಯುವ ಲಸಿಕೆ ಹಾಕಿಸಬೇಕು ಎಂದು ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ.ಮರಿಯಂಬಿ ವಿ.ಕೆ ಅವರು ಸಲಹೆ ನೀಡಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟು
ನಾಯಿ ಕಡಿತ-ಹಾವು ಕಡಿತದ ಜನಜಾಗೃತಿ


ನಾಯಿ ಕಡಿತ-ಹಾವು ಕಡಿತದ ಜನಜಾಗೃತಿ


ಬಳ್ಳಾರಿ, 05 ಜೂನ್ (ಹಿ.ಸ.) :

ಆ್ಯಂಕರ್ : ನಾಯಿ ಕಚ್ಚಿದ ದಿನವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ರೇಬಿಸ್ ರೋಗ ತಡೆಯುವ ಲಸಿಕೆ ಹಾಕಿಸಬೇಕು ಎಂದು ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ.ಮರಿಯಂಬಿ ವಿ.ಕೆ ಅವರು ಸಲಹೆ ನೀಡಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಸರ್ವೇಕ್ಷಣಾ ಘಟಕ, ಮಹಾನಗರ ಪಾಲಿಕೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಬಂಡಿಹಟ್ಟಿ- ಆಶ್ರಯ ಕಾಲೋನಿ ಇವರ ಸಂಯುಕ್ತಾಶ್ರಯದಲ್ಲಿ ಕೌಲ್‍ಬಜಾರ್‍ನ ದಾನಪ್ಪ ಸ್ಟ್ರೀಟ್‍ನಲ್ಲಿ ನಾಯಿ ಕಡಿತ ಹಾಗೂ ಹಾವು ಕಡಿತ ಕುರಿತು ಬುಧವಾರ ಏರ್ಪಡಿಸಿದ್ದ ಜನಜಾಗೃತಿ ಶಿಬಿರದಲ್ಲಿ ಅವರು ಮಾತನಾಡಿದರು.

ಸಾಕಿದ ಅಥವಾ ಬೀದಿ ನಾಯಿ ಕಚ್ಚಿದರೆ, ಉಗುರಿನಿಂದ ಗಿರಿದರೆ ಅಥವಾ ನಮ್ಮ ಮೈಮೇಲೆ ಈಗಾಗಲೇ ಇರುವ ಗಾಯವನ್ನು ನಾಲಿಗೆಯಿಂದ ನೆಕ್ಕಿದರೆ ಅದನ್ನು ನಿರ್ಲಕ್ಷ್ಯ ವಹಿಸುವಂತಿಲ್ಲ. ನಾಯಿ ಕಚ್ಚಿದ ಜಾಗವನ್ನು ಸೋಪು ಮತ್ತು ನೀರಿನಿಂದ ತೊಳೆದು ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಸಲಹೆಯಂತೆ ಲಸಿಕೆ ಪಡೆಯಬೇಕು ಎಂದು ತಿಳಿಸಿದರು.

ರೇಬೀಸ್ ಸೋಂಕುವುಳ್ಳ ನಾಯಿ ಕಚ್ಚಿದಾಗ ರೇಬೀಸ್ ನಿರೋಧಕ ಚುಚ್ಚುಮದ್ದು ಪಡೆಯದಿದ್ದರೆ ಅಂತಹ ವ್ಯಕ್ತಿಗೆ ರೇಬೀಸ್ ಕಾಯಲೆಯ ಸೋಂಕಿಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಅವರು ಕ್ರಮೇಣ ನೀರು ಕುಡಿಯುವುದಿಲ್ಲ, ಗಾಳಿ ಬಿಸಿದರೆ ಹೆದರುತ್ತಾರೆ, ಬೆಳಕು ಕಂಡರೆ ಭಯ ಪಡುತ್ತಾರೆ, ರೋಗ ದೀರ್ಘವಾದಾಗ ಮರಣ ಸಂಭವಿಸಬಹುದು. ಅಲ್ಲದೆ ನಾಯಿ ಕಡಿತ ಮೆದುಳಿಗೆ (ತಲೆಗೆ) ಹತ್ತಿರವಾಗಿದ್ದಲ್ಲಿ ಅಪಾಯ ಹೆಚ್ಚು. ಹಾಗಾಗಿ ವೈದ್ಯರ ಸಲಹೆಯಂತೆ ರೇಬಿಸ್ ಚುಚ್ಚುಮದ್ದನ್ನು ಕಚ್ಚಿದ ಮೊದಲ ದಿನ, 3ನೇ ದಿನ, 7ನೇ ದಿನ ಮತ್ತು 28 ದಿನದಂದು ತಪ್ಪದೇ ಲಸಿಕೆ ಹಾಕಿಸಬೇಕು ಎಂದು ತಿಳಿಸಿದರು.

ಹಾವು ಕಚ್ಚಿದಾಗ ಗಾಬರಿಗೊಳ್ಳದೇ, ಕಚ್ಚಿರುವ ಭಾಗವು ಹೃದಯದ ಕೆಳಗೆ ಬರುವ ಹಾಗೆ ನಿಗಾವಹಿಸಿ ವ್ಯಕ್ತಿಯನ್ನು ಯಾವುದೇ ವಾಹನ ಅಥವಾ 108 ಅಂಬುಲೆನ್ಸ್ ಮೂಲಕ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮೊದಲ ಆದ್ಯತೆ ನೀಡಬೇಕು. ವ್ಯಕ್ತಿಯ ರಕ್ತಪರಿಚಲನೆಗೆ ತಡೆಯಾಗುವಂತಹ ಕೈ ಗಡಿಯಾರ, ಬಳೆ, ಉಂಗುರ ಮುಂತಾದವುಗಳನ್ನು ತೆಗೆಯಬೇಕು. ಕಚ್ಚಿದ ಭಾಗವು ಅಲುಗಾಡದಂತೆ ನೋಡಿಕೊಳ್ಳಬೇಕು ಎಂದು ಆಶ್ರಯ ಕಾಲೋನಿ ವೈದ್ಯಾಧಿಕಾರಿ ಡಾ.ಕಾಶೀಪ್ರಸಾದ್ ಅವರು ಜಾಗೃತಿ ಮೂಡಿಸಿದರು.

ಮುಖ್ಯವಾಗಿ ಆಸ್ಪತ್ರೆಗೆ ಹೋಗುವಾಗ ವ್ಯಕ್ತಿಯ ರೋಗ ಲಕ್ಷಣಗಳಾದ ತೇಲುಗಣ್ಣು, ಕಣ್ಣುಮುಚ್ಚುವುದು, ನಾಲಿಗೆ ತೊದಲುವಿಕೆ, ನುಂಗಲು ಕಷ್ಟವಾಗುವುದು, ಉಸಿರಾಡಲು ಕಷ್ಟವಾಗಬಹುದು ಮುಂತಾದವುಗಳನ್ನು ಗಮನಿಸಬೇಕು. ಈ ರೀತಿಯಾದಲ್ಲಿ ನರಮಂಡಲಕ್ಕೆ ಹಾನಿ ಮಾಡುವ ವಿಷದ ಅಂಶ ಲಕ್ಷಣವಾಗಿರುತ್ತದೆ. ಹಾಗೆಯೇ ಗಾಯದ ಜಾಗದಲ್ಲಿ ತೀವ್ರ ಉರಿ, ನೋವುಹರಡುವಿಕೆ ಅಥವಾ ಊದುವಿಕೆ ಗಾಯದ ಸುತ್ತ ಬಣ್ಣಹೀನವಾಗುವುದು, ಕೆಳಬೆನ್ನಿನಲ್ಲಿ ನೋವು ಮುಂತಾದ ಲಕ್ಷಣಗಳು ಅಂಗಾಂಗಕ್ಕೆ ಹಾನಿ ಮಾಡುವ ವಿಷದ ಅಂಶವಾಗಿರುತ್ತದೆ. ಈ ಲಕ್ಷಣಗಳನ್ನು ರೋಗಿಯ ಜೊತೆಗಿರುವ ವ್ಯಕ್ತಿಗಳು ವೈದ್ಯರಿಗೆ ತಿಳಿಸುವ ಮೂಲಕ ವ್ಯಕ್ತಿಯ ಜೀವ ಕಾಪಾಡಲು ಸಾಧ್ಯವಾಗುವ ಚಿಕಿತ್ಸೆ ಒದಗಿಸಲು ಸಹಾಯಕವಾಗುವುದು ಎಂದರು.

ಹಾವು ಕಚ್ಚಿದಾಗ ಕಚ್ಚಿದ ಜಾಗದ ಪಕ್ಕದಲ್ಲಿ ಬಟ್ಟೆಯನ್ನು ಕಟ್ಟುವುದು, ಬ್ಲೇಡ್ ಅಥವಾ ಚಾಕುವಿನಿಂದ ಗಾಯ ಮಾಡುವುದು, ಗಾಯವನ್ನು ಸುಡುವುದು, ನಾಟಿ ಔಷಧಿಗಳನ್ನು ನೀಡುವುದು ಮುಂತಾದವುಗಳನ್ನು ಮಾಡಬಾರದು ಎಂದು ವಿನಂತಿಸಿದರು.

ಇದೇ ಸಂದರ್ಭದಲ್ಲಿ ಸೋಂಕಿತ ಈಡಿಸ್ ಸೊಳ್ಳೆ ಕಚ್ಚುವಿಕೆಯಿಂದ ಹರಡುವ ಡೆಂಗ್ಯು, ತಂಬಾಕು ಸೇವನೇಯ ದುಷ್ಪರಿಣಾಮ, ಶುದ್ದ ನೀರಿನ ಮಹತ್ವ, ಕೈತೊಳೆಯುವಿಕೆ ವಿಧಾನಗಳ ಕುರಿತು ಸಾರ್ವಜನಿಕರಿಗೆ ತಿಳಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಸಾಂಕ್ರಾಮಿಕ ರೋಗ ತಜ್ಞರಾದ ಡಾ.ವಿಶಾಲಾಕ್ಷಿ, ತಂಬಾಕು ನಿಯಂತ್ರಣ ವಿಭಾಗದ ಸರಸ್ವತಿ, ಜಿಲ್ಲಾ ಕಾಲರಾ ನಿಯಂತ್ರಣ ತಂಡದ ಕೆ.ಎಮ್.ಶಿವಕುಮಾರ್, ತಿಪ್ಪೇಸ್ವಾಮಿ, ಉಮಾದೇವಿ, ಸವಿತಾ, ಖಾಸಿಂ ವಲಿ, ಹೆಚ್‍ಐಓ ಮಹಾಲಿಂಗ, ದುರ್ಗಾಪ್ರಸಾದ್, ಪಿಹೆಚ್‍ಸಿಓ ದಾನಕುಮಾರಿ, ಕೌಸರ್, ವಿಜಯಲಕ್ಷ್ಮೀ, ಸುಮಿತ್ರಾ, ರಾಧಿಕಾ ಸೇರಿದಂತೆ ಆಶಾ ಕಾರ್ಯಕರ್ತೆಯರು, ತಾಯಂದಿರು, ಸಾರ್ವಜನಿಕರು ಹಾಜರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande