ಬೆಂಗಳೂರು, 30 ಜೂನ್ (ಹಿ.ಸ.) :
ಆ್ಯಂಕರ್ : ನನ್ನ ಅಭಿಪ್ರಾಯವನ್ನು ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾಗೆ ಹೇಳಿದ್ದೇನೆ. ಮುಂದಿನ ತೀರ್ಮಾನ ಅವರಿಗೆ ಬಿಟ್ಟಿದ್ದು ಎಂದು ಶಾಸಕ ಬಿ.ಆರ್. ಪಾಟೀಲ್ ಹೇಳಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಜೊತೆ ಮಾತುಕತೆ ನಡೆಸಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಹೈಕಮಾಂಡ್ ನಾಯಕರು ಕರೆದಿದ್ದರು. ಸುರ್ಜೇವಾಲಾ ಅವರ ಜೊತೆ ದೀರ್ಘ ಚರ್ಚೆಯಾಗಿದೆ. ನಾನು ಹೇಳಬೇಕಾದದ್ದನ್ನು ಹೇಳಿದ್ದೇನೆ. ಅವರು ಎಲ್ಲ ವಿಚಾರಗಳನ್ನು ನೋಟ್ ಮಾಡಿಕೊಂಡಿದ್ದಾರೆ. ಮುಂದಿನ ತೀರ್ಮಾನ ಅವರಿಗೆ ಬಿಟ್ಟಿದ್ದು ಎಂದರು.
ನಾಳೆ ಸುರ್ಜೆವಾಲಾ ಭೇಟಿ: ಶಾಸಕ ರಾಜು ಕಾಗೆ
ನಾಳೆ ಬೆಳಗ್ಗೆ 11 ಗಂಟೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿ ಮಾಡುತ್ತೇನೆ. ಆ ವೇಳೆ ಅವರು ಏನು ಕೇಳುತ್ತಾರೋ ಅದಕ್ಕೆಲ್ಲಾ ಉತ್ತರ ಕೊಡುತ್ತೇನೆ ಎಂದು ಬೆಳಗಾವಿ ಜಿಲ್ಲೆಯ ಕಾಗವಾಡ ಶಾಸಕ ರಾಜು ಕಾಗೆ ಹೇಳಿದ್ದಾರೆ.
ಅಭಿವೃದ್ಧಿ ಕಾಮಗಾರಿಗಳ ಕುರಿತು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದ ಅವರು, ಬೆಳಗಾವಿಯಲ್ಲಿಂದು ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿ, ಸುರ್ಜೇವಾಲ ಅವರು ಕರೆದ ಸಭೆ ಕುರಿತು ನನಗೆ ನಿನ್ನೆ ತಡರಾತ್ರಿ ಮಾಹಿತಿ ಬಂತು. ಅಲ್ಲದೇ ಇಂದು ಸಾರಿಗೆ ಇಲಾಖೆ ಸಭೆ ಮೊದಲೇ ನಿಗದಿಯಾಗಿತ್ತು. ಹಾಗಾಗಿ, ಇಂದು ರಾತ್ರಿ ಬೆಂಗಳೂರಿಗೆ ತೆರಳಿ, ನಾಳೆ ಬೆಳಗ್ಗೆ ಅವರನ್ನು ಭೇಟಿಯಾಗುವೆ ಎಂದು ಸ್ಪಷ್ಟಪಡಿಸಿದರು.
ಸುರ್ಜೆವಾಲಾ ಸರಣಿ ಸಭೆ
ರಣದೀಪ್ ಸಿಂಗ್ ಸುರ್ಜೇವಾಲಾ ಬೆಂಗಳೂರಿಗೆ ಆಗಮಿಸಿದ್ದು, ಮೂರು ದಿನ ಬೆಂಗಳೂರಲ್ಲೇ ಇರಲಿದ್ದಾರೆ. ಶಾಸಕರು ಸರ್ಕಾರದ ಕಾರ್ಯವೈಖರಿ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕುತ್ತಿದ್ದು, ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರವನ್ನು ತೀವ್ರ ಮುಜುಗರಕ್ಕೀಡು ಮಾಡಿದೆ. ಶಾಸಕರಾದ ಬಿ. ಆರ್. ಪಾಟೀಲ್ ವಸತಿ ಇಲಾಖೆ ವಿರುದ್ಧ ಲಂಚದ ಆರೋಪ ಮಾಡಿದ್ದರೆ, ರಾಜು ಕಾಗೆ ಅನುದಾನ ಬಿಡುಗಡೆ ವಿಳಂಬದ ಬಗ್ಗೆ ಆಕ್ರೋಶ ಹೊರಹಾಕಿದ್ದರು. ಈ ಮಧ್ಯೆ ಸಚಿವ ಕೆ. ಎನ್. ರಾಜಣ್ಣ ಸೆಪ್ಟೆಂಬರ್ ವೇಳೆಗೆ ಭಾರಿ ಬದಲಾವಣೆ ಆಗುವ ಸಾಧ್ಯತೆಯಿದೆ ಎಂದು ಹೇಳಿಕೆ ನೀಡಿದ್ದು ರಾಜ್ಯ ಸರ್ಕಾರವನ್ನು ಮುಜುಗರಕ್ಕೀಡು ಮಾಡಿದೆ.
ಈ ಹಿನ್ನೆಲೆ ಸುರ್ಜೇವಾಲಾ ಮೂರು ದಿನಗಳ
ಶಾಸಕರ ಜೊತೆ ನೇರ ಮಾತುಕತೆ ನಡೆಸಲಿದ್ದಾರೆ. ಮಾತುಕತೆ ವೇಳೆ ಶಾಸಕರ ಅಹವಾಲು, ಸಮಸ್ಯೆ ಆಲಿಸಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa