ಬಳ್ಳಾರಿ, 30 ಜೂನ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೂಲಭೂತ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಲು ಆಗ್ರಹಿಸಿ ಬಳ್ಳಾರಿ ನಾಗರಿಕ ಹೋರಾಟ ಸಮಿತಿ ಹಮ್ಮಿಕೊಂಡಿರುವ ಒಂದು ಲಕ್ಷ ಸಹಿ ಸಂಗ್ರಹ ಚಳವಳಿಗೆ ಸೋಮವಾರ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಉತ್ತಮ ಸ್ಪಂದನೆ ತೋರಿಸಿದ್ದಾರೆ.
ಬಳ್ಳಾರಿ ನಾಗರಿಕ ಹೋರಾಟ ಸಮಿತಿ ಸಂಚಾಲಕರಾದ ಸೋಮಶೇಖರ ಗೌಡ ಅವರು, ಪಾಲಿಕೆ ಪೂರೈಸುವ ಕುಡಿಯುವ ನೀರಲ್ಲಿ ಚರಂಡಿ ನೀರು ಮಿಶ್ರಣವಾಗುತ್ತಿದೆ. ರಿಂಗ್ರೋಡ್ ನಿರ್ಮಾಣ, ಮೋತಿ ಬ್ರಿಡ್ಜ್ ಅಗಲೀಕರಣ, ಮಹಾನಗರಪಾಲಿಕೆಯ ಸಿಬ್ಬಂದಿ ಹಾಗೂ ಪೌರಕಾಮಿಕರ ಸಂಖ್ಯೆಯನ್ನು ಹೆಚ್ಚಿಸುವುದು, ಸುಧಾ ಕ್ರಾಸ್ ಮೇಲ್ಸೇತುವೆ ನಿರ್ಮಾಣವನ್ನು ತ್ವರಿತಗೊಳಿಸುವುದು, ಅಭಿವೃದ್ಧಿ ನೆಪದಲ್ಲಿ ಕೆಡವುವ ಮತ್ತು ಪುನಃ ನಿರ್ಮಾಣ ಮಾಡುವ ಅವೈಜ್ಞಾನಿಕತೆಯನ್ನು ವಿರೋಧಿಸಿ ಸಾರ್ವಜನಿಕರಿಂದ ಸಹಿ ಸಂಗ್ರಹ ಚಳವಳಿ ನಡೆದಿದೆ ಎಂದರು.
ಸಹಿ ಸಂಗ್ರಹ ಅಭಿಯಾನವನ್ನು ಉದ್ಘಾಟಿಸಿದ ಸಲಹೆಗಾರರಾದ ಮುರ್ತುಜಾ ಸಾಬ್ ಅವರು, 2-3 ತಿಂಗಳುಗಳಿಂದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಮರ್ಪಕ ನಾಗರಿಕ ಸೌಲಭ್ಯಗಳು ಸಿಗುತ್ತಿಲ್ಲ. ಅಧಿಕಾರಿಗಳನ್ನು ಭೇಟಿ ಮಾಡಿ, ಸಮಸ್ಯೆಗಳನ್ನು ತಿಳಿಸಿದರೂ ಪ್ರಯೋಜನವಿಲ್ಲ. ಕಾರಣ ಪ್ರತಿಭಟನೆಯಾಗಿ ಸಾರ್ವಜನಿಕರಿಂದ ಸಹಿ ಸಂಗ್ರಹ ಮಾಡಲಾಗುತ್ತಿದೆ ಎಂದರು.
ಮುಖಂಡರಾದ ಡಾ. ಎನ್. ಪ್ರಮೋದ್, ಶಾಂತಾ, ನಾಗರತ್ನ, ಗೋವಿಂದ್, ಈಶ್ವರಿ, ರಾಜಾ, ಪಂಪಾಪತಿ ಮುಂತಾದವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್