ಕುರುಗೋಡು, 03 ಜೂನ್ (ಹಿ.ಸ.) :
ಆ್ಯಂಕರ್ : ಎಲ್ಲಾ ಶಾಲಾ ಆವರಣಗಳಲ್ಲಿ ನೀರು ನಿಲ್ಲಿಸುವ ಅಥವಾ ಸಂಗ್ರಹಿಸುವ ಎಲ್ಲಾ ಪರಿಕರಗಳನ್ನು ಶುಚಿಗೊಳಿಸುವ ಮೂಲಕ ಡೆಂಗ್ಯೂ ಸೊಳ್ಳೆಮರಿ ಉತ್ಪತ್ತಿಯಾಗದಂತೆ ಎಚ್ಚರಿಕೆವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಲ್ಲಾ ರಮೇಶ್ ಬಾಬು ಅವರು ಸೂಚಿಸಿದ್ದಾರೆ.
ತಾಲ್ಲೂಕಿನ ಬಾದನಹಟ್ಟಿ ಗ್ರಾಮದ ನಂದಿ ವಸತಿ ಶಾಲೆಗೆ ಆರೋಗ್ಯ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಬಳಕೆಗಾಗಿ ನೀರು ಸಂಗ್ರಹಿಸುವ ಡ್ರಮ್, ನೀರಿನ ತೊಟ್ಟಿ, ಸಂಪ್ ಮುಂತಾದವುಗಳನ್ನು ಸ್ವಚ್ಛಗೊಳಿಸಿ ನೀರು ತುಂಬಿ ಸರಿಯಾದ ರೀತಿಯಲ್ಲಿ ಮುಚ್ಚಳ ಮುಚ್ಚಿ ಡೆಂಗ್ಯೂ ಹರಡುವ ಈಡಿಸ್ ಇಜಿಪ್ಟೈ ಸೊಳ್ಳೆ ಮೊಟ್ಟೆ ಇಟ್ಟು ಸಂತಾನವೃದ್ಧಿಗೆ ಅವಕಾಶವಿಲ್ಲದಂತೆ ಮಾಡಬೇಕು. ಡೆಂಗ್ಯೂ ರೋಗ ತಡೆಗೆ ಎಲ್ಲರೂ ಸಹಕರಿಸಬೇಕು ಎಂದು ವಿನಂತಿಸಿದರು.
ನಿಂತ ನೀರಿನಿಂದ ಸೊಳ್ಳೆ ಉತ್ಪತ್ತಿಯಾಗುವ ಜೊತೆಗೆ ಮಕ್ಕಳಿಗೆ ಡೆಂಗ್ಯೂ ಸೇರಿದಂತೆ ಸೊಳ್ಳೆಯ ಕಚ್ಚುವಿಕೆಯಿಂದ ಹರಡುವ ಚಿಕುನ್ಗುನ್ಯಾ, ಮಲೇರಿಯಾ, ಆನೇಕಾಲು ರೋಗ, ಮೆದುಳು ಜ್ವರ ಮುಂತಾದವುಗಳು ಕಂಡುಬರುವ ಸಾಧ್ಯತೆ ಇರುತ್ತದೆ. ಈ ಹಿನ್ನಲೆಯಲ್ಲಿ ಶಾಲೆಗಳಿಗೆ ಆಗಮಿಸುವ ವೈದ್ಯಕೀಯ ತಂಡ ನೀಡುವ ಸಲಹೆಗಳನ್ನು ಅನುಸರಿಸಿ ರೋಗ ತಡೆಗೆ ಸಹಕರಿಸಬೇಕು ಎಂದು ಶಾಲಾ ಮುಖ್ಯ ಗುರುಗಳಿಗೆ ಮತ್ತು ಶಾಲಾ ಆಡಳಿತ ಮಂಡಳಿ ಸದಸ್ಯರಿಗೆ ತಿಳಿಸಿದರು.
ತಾಲ್ಲೂಕಿನ ಕಲ್ಲುಕಂಭ, ಎಮ್ಮಿಗನೂರು, ಸಿದ್ದಮ್ಮನಹಳ್ಳಿ ಗ್ರಾಮಗಳ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ. ಆರ್. ಅಬ್ದುಲ್ಲಾ ಡಾ. ಮಂಜುನಾಥ ಜವಳಿ, ಡಾ. ಅರುಣ್ ಕುಮಾರ್, ಡಾ. ಫಾರೂಖ್ ಮಹಮ್ಮದ್, ಡಾ. ದಿವ್ಯಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್. ದಾಸಪ್ಪನವರ, ಜಿಲ್ಲಾ ಎನ್ವಿಬಿಡಿಸಿಪಿ ಸಲಹೆಗಾರ ಪ್ರತಾಪ್, ಸಿಆರ್ಪಿ ಸ್ವರ್ಣಪ್ರಭ, ಆರೋಗ್ಯ ನಿರೀಕ್ಷಣಾಧಿಕಾರಿ ಮಂಜುನಾಥ, ಬಸವನಗೌಡÀ, ಬಸವರಾಜ, ಕೃಷ್ಣಮೂರ್ತಿ, ಪ್ರಶಾಂತ್, ಸಿಹೆಚ್ಓ ತಿಮೋತಿ, ಶೇಕ್ಷಾವಲಿ ಆರೋಗ್ಯ ತಂಡದಲ್ಲಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್