ಗ್ರಾಮಗಳ ಅಭಿವೃದ್ಧಿ ಮಾಡದೇ ದೇಶ ಅಭಿವೃದ್ಧಿಯಾಗಲು ಸಾಧ್ಯವಿಲ್ಲ : ಬಸವರಾಜ ಬೊಮ್ಮಾಯಿ
ಗದಗ, 27 ಜೂನ್ (ಹಿ.ಸ.) : ಆ್ಯಂಕರ್ : ಗ್ರಾಮಗಳ ಅಭಿವೃದ್ಧಿ ಮಾಡದೇ ಈ ದೇಶ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಕೃಷಿ ಅಭಿವೃದ್ಧಿ ಆದರೆ ಆಹಾರದ ಸುರಕ್ಷತೆ ಆಗುತ್ತದೆ. ಆಹಾರದ ಸುರಕ್ಷತೆ ಯಾವ ದೇಶಕ್ಕಿದೆಯೋ ಅದು ಸ್ವಾವಲಂಬನೆಯ ಸ್ವಾಭಿಮಾನದ ದೇಶ ಆಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್
ಪೋಟೋ


ಗದಗ, 27 ಜೂನ್ (ಹಿ.ಸ.) :

ಆ್ಯಂಕರ್ : ಗ್ರಾಮಗಳ ಅಭಿವೃದ್ಧಿ ಮಾಡದೇ ಈ ದೇಶ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಕೃಷಿ ಅಭಿವೃದ್ಧಿ ಆದರೆ ಆಹಾರದ ಸುರಕ್ಷತೆ ಆಗುತ್ತದೆ. ಆಹಾರದ ಸುರಕ್ಷತೆ ಯಾವ ದೇಶಕ್ಕಿದೆಯೋ ಅದು ಸ್ವಾವಲಂಬನೆಯ ಸ್ವಾಭಿಮಾನದ ದೇಶ ಆಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಗದಗ ತಾಲೂಕಿನ ನಾಗಾವಿ ಗ್ರಾಮದಲ್ಲಿ ಸುಮಾರು 10 ಲಕ್ಷ ರೂಗಳ ವೆಚ್ಚದಲ್ಲಿ ಲೋಕ ಸಭಾ ಸದಸ್ಯರ ಸ್ಥಳೀಯ ಕ್ಷೇತ್ರಾಭಿವೃದ್ಧಿ ನಿಧಿಯಲ್ಲಿ ನಿರ್ಮಿಸಲಾಗುತ್ತಿರುವ ಶ್ರೀ ಗ್ರಾಮದೇವಿ ಸಮುದಾಯ ಭವನದ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆಯನ್ನು ನೆರವೇರಿಸಿ ಮಾತನಾಡಿದರು.

ಭಾರತ ದೇಶದ ಒಂದು ಹಳ್ಳಿಯ ಸಾಮಾಜಿಕ ವ್ಯವಸ್ಥೆ ಹೇಗಿದೆ ಅನ್ನುವುದು ಇಲ್ಲಿ ಸೇರಿರುವ ಜನರಿಂದ ತಿಳಿಯುತ್ತದೆ. ಗ್ರಾಮ ದೇವಿಯ ಸಮುದಾಯ ಭವನ ನಿರ್ಮಾಣ ಮಾಡುವುದು ಒಂದು ನಿಮಿತ್ಯ ಮಾತ್ರ, ಆದರೆ, ಎಲ್ಲರೂ ಒಟ್ಟಾಗಿ ಸೇರಿ ಮಾಡುತ್ತಿರುವುದು ನಮ್ಮ ಗ್ರಾಮೀಣ ಸಂಸ್ಕೃತಿ ಮತ್ತು ಸಂಸ್ಕಾರವನ್ನು ತೋರಿಸುತ್ತದೆ ಎಂದು ಹೇಳಿದರು.

ಮಾಜಿ ಸಚಿವ ಎಸ್. ಎಸ್. ಪಾಟೀಲರು ಗ್ರಾಮೀಣ ಕುಟುಂಬದಿಂದ ಬಂದವರು, ಅವರು ಶಾಸಕರಾಗಿ, ಸಚಿವರಾಗಿದ್ದಾಗಲೂ, ಹಿರಿಯರಾಗಿದ್ದಾಗಲೂ ಕೂಡ ಅವರ ಮಾತು, ಉಡುಗೆ ತೊಡುಗೆ ಎಲ್ಲವೂ ಗ್ರಾಮೀಣ ಸಂಸ್ಕೃತಿಯನ್ನು ಬಿಂಬಿಸುತ್ತವೆ. ಅದೇ ರೀತಿ ಶಾಸಕರಾದ ಸಿ.ಸಿ. ಪಾಟೀಲರೂ ಕೂಡ ಗ್ರಾಮೀಣ ಸೊಗಡು ಇರುವ ವ್ಯಕ್ತಿ. ಅವರಲ್ಲಿ ನಮ್ಮ ಉತ್ತರ ಕರ್ನಾಟಕ ಭಾಷೆಯ ಸೊಗಡಿದೆ ಎಂದರು.

ಅಭಿವೃದ್ಧಿಯ ಸುತ್ತ ಜನ ಓಡಾಡಬಾರದು, ಜನರ ಸುತ್ತ ಅಭಿವೃದ್ಧಿ ಆಗಬೇಕು. ಎಲ್ಲಿ ಜನ ವಾಸವಾಗಿದ್ದಾರೊ ಅಲ್ಲಿ ಅಭಿವೃದ್ಧಿ ಆಗಬೇಕು. ಡಿಸಿ ಕಚೇರಿ ಸುತ್ತ ಅಭಿವೃದ್ಧಿ ಆಗುವುದಲ್ಲ. ಭಾರತ ಗ್ರಾಮಗಳಿಂದ ಕೂಡಿದ ದೇಶ, ಮಹಾತ್ಮಾ ಗಾಂಧೀಜಿಯವರು ಗ್ರಾಮ ಸ್ವರಾಜ್ಯ, ರಾಮರಾಜ್ಯದ ಬಗ್ಗೆ ಮಾತನಾಡಿದ್ದಾರೆ. ಆದರೆ, ಎಲ್ಲೋ ಒಂದು ಕಡೆ ನಾವು ಮರೆತಂತೆ ಕಾಣಿಸುತ್ತದೆ. ಗ್ರಾಮಗಳ ಅಭಿವೃದ್ಧಿ ಮಾಡದೇ ಈ ದೇಶ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಕೃಷಿ ಅಭಿವೃದ್ಧಿ ಆದರೆ ಆಹಾರದ ಸುರಕ್ಷತೆ ಆಗುತ್ತದೆ. ಆಹಾರದ ಸುರಕ್ಷತೆ ಯಾವ ದೇಶಕ್ಕಿದೆಯೋ ಅದು ಸ್ವಾವಲಂಬನೆಯ ಸ್ವಾಭಿಮಾನದ ದೇಶ ಆಗುತ್ತದೆ. ಇಲ್ಲಿದಿದ್ದರೆ ಇನ್ನೊಬ್ಬರ ಮುಂದೆ ಕೈ ಒಡ್ಡುವ ದೇಶ ಆಗುತ್ತದೆ. ಈ ದೇಶವನ್ನು ಸ್ವಾವಲಂಬನೆಯ ಸ್ವಾಭಿಮಾನಿ ದೇಶ ಮಾಡಿರುವುದು ರೈತ. ಕೃಷಿ ಅಭಿವೃದ್ಧಿ ಆಗಿದೆ. ಆದರೆ, ರೈತ ಅಭಿವೃದ್ಧಿ ಆಗಿಲ್ಲ. ಎಲ್ಲರಿಗೂ ಆಹಾರದ ಭದ್ರತೆ ಇದೆ. ಆದರೆ, ಆಹಾರ ಬೆಳೆದಿರುವ ರೈತನ ಪರಿಸ್ಥಿತಿ ಸೋಚನೀಯವಾಗಿದೆ. ರೈತರ‌ಮನೆಯಲ್ಲಿ ಯಾರಿಗಾದರೂ ಆರೋಗ್ಯ ತಪ್ಪಿದರೆ, ಮದುವೆ ಮಾಡಿದರೆ ಸಾಲ ಹೆಚ್ಚಾಗುತ್ತದೆ. ಅದಕ್ಕೆ ನಾನು ಬ್ಯಾಂಕರ್ಸ್ ಮೀಟಿಂಗ್ ನಲ್ಲಿ ಹೇಳಿದ್ದೇನೆ‌. ಅತಿ ಹೆಚ್ಚು ಬಂಡವಾಳ ಹೂಡಿಕೆ ಆಗುವುದು ಕೃಷಿ ವಲಯದಲ್ಲಿ, ಕೃಷಿ ಆದಾಯ ಹೆಚ್ಚಾಗಿ ರೈತನ ಆರ್ಥಿಕ ಸ್ಥಿತಿ ಸುಧಾರಣೆ ಆದಾಗ ಅವನ ಕೈಯಲ್ಲಿ ದುಡ್ಡಿದ್ದರೆ ಹೆಚ್ಚು ಖರ್ಚು ಮಾಡುತ್ತಾನೆ. ಸರ್ಕಾರಕ್ಕೆ ಅದಾಯ ಹೆಚ್ಚಾಗುತ್ತದೆ ಎಂದರು.

ಗ್ರಾಮೀಣ ಪ್ರದೇಶದ ಪ್ರತಿಯೊಂದು ವಸ್ತುವಿನ ಬೆಲೆಯೂ ಹೆಚ್ಚಾಗಿದೆ. ರೈತರಿಗೆ ನೀಡುವ ಬೀಜ, ಗೊಬ್ಬರದ ಬೆಲೆ ಹೆಚ್ಚಾಗಿದೆ. ಕರ್ನಾಟಕದಲ್ಲಿ ಡಿಸೇಲ್, ಪೆಟ್ರೊಲ್ ಬಳಕೆ ಮಾಡುವ ರೈತರ ಖರ್ಚು ಹೆಚ್ಚಾಗಿದೆ. ಗಾಡಿಗೆ ಹಾಕುವ ಎಣ್ಣೆ ಹಾಗೂ ಸಂಜೆ ಹಾಕುವ ಎಣ್ಣೆಯ ದರವೂ ಹೆಚ್ಚಾಗಿದೆ. ಹೀಗಾಗಿ ಗ್ರಾಮೀಣ ಜನತೆ ಸಾಲದ ಸೂಲದಲ್ಲಿ ಸಿಲುಕುವಂತೆ ಆಗಿದೆ. ಇದು ಬದಲಾವಣೆ ಆಗಬೇಕು. ಅಂದಾಗ ಮಾತ್ರ ಈ ದೇಶಕ್ಕೆ ನಾಡಿಗೆ ಭವಿಷ್ಯ ಇದೆ. ಆ ಕೆಲಸವನ್ನು ಪ್ರಾಮಾಣಿಕವಾಗಿ ಕೆಲಸ ಮಾಡುವ ವ್ಯಕ್ತಿಗಳ ಕೈಯಲ್ಲಿ ಅಧಿಕಾರ ಸಿಕ್ಕಾಗ ಮಾತ್ರ ಮಾಡಲು ಸಾಧ್ಯ ಎಂದು ಹೇಳಿದರು.

ಸ್ವಾತಂತ್ರ್ಯ ಬಂದಮೇಲೆ ನೇರವಾಗಿ ರೈತರ ಖಾತೆಗೆ ಹಣ ಹಾಕಿರುವ ಏಕೈಕ ಪ್ರಧಾನಿ ನರೇಂದ್ರ ಮೋದಿಯವರು, ಕರ್ನಾಟಕದಲ್ಲಿ 64 ಲಕ್ಷ ರೈತರಿಗೆ ನೇರವಾಗಿ ಖಾತೆಗೆ ಹಣ ಹಾಕುತ್ತಿದ್ದಾರೆ. ಗೊಬ್ಬರ, ಬೀಜಕ್ಕೆ ಸಬ್ಸಿಡಿ ಕೊಡುತ್ತಿದ್ದಾರೆ. ಪ್ರಧಾನಮಂತ್ರಿ ಆವಾಸ ಯೋಜನೆ, ಗ್ರಾಮ್ ಸಡಕ್ ಯೋಜನೆ, ಈಗ ಮನೆ ಮನೆಗೆ ಸೋಲಾರ ವ್ಯವಸ್ಥೆ ಅಳವಡಿಸಿ ವಿದ್ಯುತ್ ಬಿಲ್ ಹೊರೆ ಕಡಿಮೆ ಮಾಡಿ ನೀವು ಉತ್ಪಾದಿಸುವ ವಿದ್ಯುತ್ ಗೆ ಸರ್ಕಾರ ದುಡ್ಡು ಕೊಡುತ್ತದೆ. ಕಳೆದ ಹನ್ನೊಂದು ವರ್ಷದಲ್ಲಿ ಎಲ್ಲ ರಂಗದಲ್ಲಿಯೂ ಅಭಿವೃದ್ಧಿ ಆಗುತ್ತಿದೆ. ಮೊದಲು ನಗರ ಪ್ರದೇಶಗಳಿಗೆ ಮಾತ್ರ ಅಡುಗೆ ಗ್ಯಾಸ್ ಸಿಲಿಂಡರ್ ನೀಡಲಾಗುತ್ತಿತ್ತು. ಈಗ ಹಳ್ಳಿಗಳಿಗೆ ಗ್ಯಾಸ್ ಸಿಲಿಂಡರ್ ನೀಡುತ್ತಿದ್ದು ಹೆಣ್ಣು ಮಕ್ಕಳಿಗೆ ಅನುಕೂಲವಾಗಿದೆ. ಎಲ್ಲ ಯೋಜನೆಗಳ ಬಗ್ಗೆ ತಿಳಿದುಕೊಂಡು ಅನುಕೂಲ ಪಡೆದುಕೊಳ್ಳಬೇಕು ಎಂದು ಹೇಳಿದರು.

ಈ ಸಂಧರ್ಭದಲ್ಲಿ ಮಾಜಿ ಸಚಿವರಾದ ಎಸ್ ಎಸ್ ಪಾಟೀಲ್, ಸಿ.ಸಿ ಪಾಟೀಲ್, ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷರಾದ ರಾಜು ಕುರಡಗಿ, ಗ್ರಾಮೀಣ ಮಂಡಳದ ಅಧ್ಯಕ್ಷರಾದ ಬೂದಪ್ಪ ಹಳ್ಳಿ ಮುಖಂಡರಾದ ಬಿ.ಎಸ್ ಚಿಂಚಲಿ, ಶಾಂತಣ್ಣ ಕಲಕೇರಿ, ಕೃಷ್ಣಾ ರಾಠೋಡ, ಅಲ್ಲಾಸಾಬ ಪೀರಕಣ್ಣವರ ಸೇರಿದಂತೆ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು. ಕಾರ್ಯಕ್ರಮದ ಪೂರ್ವದಲ್ಲಿ ಗ್ರಾಮದ ಗ್ರಾಮದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನಾಶೀರ್ವಾದವನ್ನು ಪಡೆಯಲಾಯಿತು.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande