ಕೊಪ್ಪಳ, 27 ಜೂನ್ (ಹಿ.ಸ.) :
ಆ್ಯಂಕರ್ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಗ್ರಾಮೀಣ ಯುವಜನತೆ ಆರೋಗ್ಯಕರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸಹಾಯಕವಾಗುವ ವಾತಾವರಣವನ್ನು ಸೃಜಿಸಲು ಯುವ ಚೈತನ್ಯ ಎಂಬ ನೂತನ ಯೋಜನೆಯಡಿ ಕ್ರೀಡಾ ಸಾಮಾಗ್ರಿಗಳನ್ನು ಒದಗಿಸಲಾಗುತ್ತಿದ್ದು, ಯುವ ಸಂಘಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಯುವ ಸಂಘವು ಕನಿಷ್ಠ 25 ಯುವ ಜನರನ್ನು ಸದಸ್ಯರನ್ನಾಗಿ ಹೊಂದಿರಬೇಕು. ಎಲ್ಲಾ ಸದಸ್ಯರ ವಯೋಮಿತಿಯು 18 ರಿಂದ 35 ವರ್ಷದೊಳಗಿರಬೇಕು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಮಾನ್ಯತೆ ಪಡೆದಿರಬೇಕು. ಯುವ ಸಂಘಗಳು ಇಲಾಖೆಯಿಂದ ಮಾನ್ಯತೆ ಪಡೆಯಲು ಸಂಘಗಳ ನೋಂದಣಿ ಕಾಯ್ದೆಯಡಿ ಮಾನ್ಯತೆ ಪಡೆದಿರಬೇಕು. ಯುವ ಸಂಘವು ಕಡ್ಡಾಯವಾಗಿ ಚಾಲ್ತಿಯಲ್ಲಿರಬೇಕು. ಅಗತ್ಯ ದಾಖಲೆಗಳೊಂದಿಗೆ ಜುಲೈ 19 ರೊಳಗಾಗಿ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಬೇಕು. ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ, ಕೊಪ್ಪಳ, ದೂ.ಸಂ: 08539-230121 ಗೆ ಸಂಪರ್ಕಿಸಬಹುದು ಎಂದು ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್