ಕೊಪ್ಪಳ, 25 ಜೂನ್ (ಹಿ.ಸ.) :
ಆ್ಯಂಕರ್ : ಬೇವಿನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಹಪುರ ಗ್ರಾಮದ ಸವುಳು ಹಳ್ಳದ ಕೆರೆ ಪ್ರದೇಶದ ದಡದಲ್ಲಿರುವ ಗೋಮಾಳವನ್ನು ಪಟ್ಟಭದ್ರರು ಕಿತ್ತುಕೊಳ್ಳುವ ಹುನ್ನಾರ ನಡೆಸಿದ್ದು ಗೋಮಾಳವನ್ನು ಸಂರಕ್ಷಿಸಲು ಕೊರಿ ಕುರಿಗಾಹಿಗಳು ಕೊಪ್ಪಳ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ಗೆ ಮನವಿ ಸಲ್ಲಿಸಿದ್ದಾರೆ.
ಶಹಪುರ ಗ್ರಾಮದ ಸರ್ವೇ ನಂಬರ್ 14, 15, 16, 20 ಮತ್ತು 27ರ ಸಂಖ್ಯೆಯ ವ್ಯಾಪ್ತಿಯಲ್ಲಿ ಸವುಳು ಹಳ್ಳದ ಕೆರೆ ಪ್ರದೇಶ 30 ಎಕರೆಗೂ ಅಧಿಕ ಇದೆ. ಈ ಕೆರೆಯ ಸುತ್ತಲೂ ಗ್ರಾಮದ ಐವತ್ತಕ್ಕೂ ಹೆಚ್ಚು ಕುಟುಂಬಗಳು ಕುರಿ, ದನ, ಕರುಗಳನ್ನು ಸಾಕಣೆ ಮಾಡಿಕೊಂಡು ಉಪಜೀವಿಸುತ್ತಿದ್ದರು.
ಪ್ರತಿನಿತ್ಯ ಹಿಟ್ನಾಳ, ಅಗಳಕೇರಿ, ಶಿವಪುರ, ಕೆರೆಹಳ್ಳಿ, ಲಿಂಗದಹಳ್ಳಿ, ಗುಡದಳ್ಳಿ ಮತ್ತಿತರೆ ಗ್ರಾಮಗಳ ಅಡವಿಗೆ ತೆರಳಿ ಕುರಿ ಮತ್ತು ದನಗಳನ್ನು ಮೇಯಿಸಿಕೊಂಡು ಬಂದು ಜಾನುವಾರುಗಳನ್ನು ಮೇಯಿಸಲು ಅನೇಕರು ಅಡ್ಡಿಪಡಿಸುತ್ತಿದ್ದಾರೆ ಎಂದು ಅವರು ದೂರಿನಲ್ಲಿ ವಿವರಿಸಿದ್ದಾರೆ.
ಕುರಿಗಾಹಿಗಳಾದ ವೀರಣ್ಣ ಕೋಮಲಾಪುರ, ಮಲ್ಲೇಶ್ ಕುರಿ, ಕಂಪ್ಲೆಪ್ಪ ಕಂಬಳಿ ಇನ್ನಿತರರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ಹಲವರು, ಗೋಮಾಳವನ್ನು ಸಂರಕ್ಷಿಸಲು ಮನವಿ ಮಾಡಿದ್ದಾರೆ.
ಬೇವಿನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ನಾಗರಾಜ ದೊಡ್ಡಮನಿ, ಹಾಲಪ್ಪ ತೋಟದ, ಶಹಪುರ ಗ್ರಾಮದ ಧುರೀಣರಾದ ನಿಂಗಪ್ಪ ನಾಗಲಾಪುರ, ಕುರಿಗಾಹಿಗಳಾದ ಗುಡದಪ್ಪ ಕಿನ್ನಾಳ, ಹುಲ್ಲೇಶ್ ಕುರಿ, ಎಲ್ಲಪ್ಪ ಹಳ್ಳಿಗುಡಿ ಇನ್ನಿತರರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್