ಗದಗ, 23 ಜೂನ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ ಸಾಕಷ್ಟು ಮಳೆಯಾಗಿರುವ ಕಾರಣದಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದ್ದು, ಗೋವಿನಜೋಳ, ಸೂರ್ಯಕಾಂತಿ, ತೊಗರಿ, ಶೇಂಗಾ, ಹತ್ತಿ ಹಾಗೂ ಇತರೆ ಬೆಳೆಗಳಿಗೆ ರೈತರು ಯೂರಿಯಾ ಗೊಬ್ಬರವನ್ನು ಮೇಲು ಗೊಬ್ಬರವಾಗಿ ಬಳಸುತ್ತಿದ್ದು ಯೂರಿಯಾ ರಸಗೊಬ್ಬರಕ್ಕೆ ಪರ್ಯಾಯವಾಗಿ ಒಂದು ಎಕರೆ ಬೆಳೆಗೆ ಸುಮಾರು 500 ಮೀ.ಲೀ ನ್ಯಾನೋ ಯೂರಿಯಾ ಬಳಸಬೇಕು ಎಂದು ಜಂಟಿ ಕೃಷಿ ನಿರ್ದೇಶಕರು ತಾರಾಮಣಿ ಜಿ. ಹೆಚ್. ಅವರು ತಿಳಿಸಿದ್ದಾರೆ.
ಬೆಳೆಗಳಿಗೆ ಹರಳು ರೂಪದ ಯೂರಿಯಾ ಬಳಸುವುದರಿಂದ ಬೇಕಾದ ಪೋಷಕಾಂಶಗಳು ಕೇವಲ ಶೇ. 50 ರಷ್ಟು ಮಾತ್ರ ದೊರೆಯುವ ಸಾಧ್ಯತೆ ಇರುತ್ತದೆ ಹಾಗೂ ಉಳಿದ ಪೋಷಕಾಂಶಗಳು ನೀರಿನ ಹರಿವಿಕೆಯಿಂದ ಪೋಲಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಚಿಕ್ಕ ಗಾತ್ರದ ಕಣಗಳನ್ನು ಹೊಂದಿರುವ ನ್ಯಾನೋ ಯೂರಿಯಾ 20-50 ಎನ್ ಎಮ್ ಬಳಸುವುದರಿಂದ ಬೆಳೆಗಳಿಂದ ಶೇ. 80 ರಷ್ಟು ಪೋಷಕಾಂಶಗಳು ಉಪಯುಕ್ತವಾಗುತ್ತದೆ. ನ್ಯಾನೋ ಯೂರಿಯಾ ಪ್ರಧಾನ ಪೋಷಕಾಂಶವಾದ ಸಾರಜನಕದ ಮೂಲ ದ್ರವರೂಪ ಗೊಬ್ಬರವಾಗಿದ್ದು, ಇದರ ಬಳಕೆಯಿಂದ ಬೆಳೆಗಳಲ್ಲಿ ಕಳೆ ನಿರ್ವಹಣೆಯಾಗುವುದರ ಜೊತೆಗೆ ಉತ್ತಮ ಬೆಳವಣಿಗೆಗೆ ಅನುಕೂಲ ಮಾಡುತ್ತದೆ. ನ್ಯಾನೋ ಯೂರಿಯಾದಲ್ಲಿನ ಸಾರಜನಕವು ಸಸ್ಯಗಳಲ್ಲ ರೂಪದಲ್ಲಿ ಪರಿವರ್ತನೆಗೊಳ್ಳುತ್ತದೆ.
ಬೆಳೆಗಳಿಗೆ ಬೇಕಾಗಿರುವ ಸಾರಜನಕವನ್ನು ಸರಿಯಾದ ಪ್ರಮಾಣದಲ್ಲಿ ಒದಗಿಸುತ್ತದೆ ಮತ್ತು ಇತರೆ ಪೋಷಕಾಂಶವನ್ನು ತೆಗೆದುಕೊಳ್ಳುವ ಸಂಯೋಜಿತ ಮಾರ್ಗವನ್ನು ಪ್ರಚೋದಿಸುತ್ತದೆ. ನ್ಯಾನೋ ಯೂರಿಯಾ ಬಳಕೆಯಿಂದ ಬೆಳೆಗಳ ಉತ್ಪಾದಕತೆಯನ್ನು ಹೆಚ್ಚಿಸಿ ವೆಚ್ಚವನ್ನು ಕಡಿಮೆ ಮಾಡುವ ಮೂಲಕ ರೈತರ ಆದಾಯವನ್ನು ಹೆಚ್ಚಿಸುತ್ತದೆ.
ಹರಳು ರೂಪದ ಯೂರಿಯಾ ತಯಾರಿಕೆಯಲ್ಲಿ ಪದಾರ್ಥಗಳ ಬಳಕೆಯಿಂದ ಮಣ್ಣಿನ ಪೋಷಕಾಂಶಗಳಿಗೆ ಹಾನಿಯಾಗಿ, ಜಲ ಮೂಲಗಳಿಗೆ ಮಾಲಿನ್ಯ ಹರಡುತ್ತದೆ ಹಾಗೂ ನವಜಾತ ಶಿಶುಗಳಲ್ಲಿ ಕಂಡು ಬರುವ ಸಾಧ್ಯತೆಗಳಿರುತ್ತದೆ. ನ್ಯಾನೋ ಯೂರಿಯಾ ಬಳಕೆಯಿಂದ ಸಾಮಾನ್ಯವಾಗಿ ಹರಳು ರೂಪದ ಯೂರಿಯಾ ಬಳಕೆಯನ್ನು ಶೇ. 50 ರಷ್ಟು ಕಡಿಮೆ ಮಾಡಬಹುದು.
ರೈತರು ಇದನ್ನು ಸುಲಭವಾಗಿ ಶೇಖರಿಸಿ ಸಾಗಾಣಿಕೆ ಮಾಡಬಹುದು. ಇದು ಮಣ್ಣು, ಗಾಳಿ, ನೀರಿನ ಗುಣಮಟ್ಟ ಹಾಗೂ ಒಟ್ಟಾರೆ ಪರಿಸರ ಸಂರಕ್ಷಣೆಗೆ ಸಹಕಾರಿಯಾಗಿರುತ್ತದೆ. ಏಕದಳ, ದ್ವಿದಳ ಧಾನ್ಯಗಳು ಹಾಗೂ ಎಣ್ಣೆಕಾಳುಗಳಲ್ಲಿ ಮೊದಲನೇ ಸಿಂಪಡಣೆಯನ್ನು ಮೊಳಕೆ ಹೊಡೆದ 30-35 ದಿನಗಳ ನಂತರ ಹಾಗೂ ಎರಡನೇ ಸಿಂಪಡಣೆಯನ್ನು 50-60 ದಿನಗಳ ನಂತರ ಮಾಡಬಹುದು.
ಒಂದು ಬಾಟಲ್ ನ್ಯಾನೋ ಯೂರಿಯಾ (500 ಮೀ.ಲೀ) ವು ಒಂದು ಚೀಲ ಹರಳು ರೂಪದ ಯೂರಿಯಾಗೆ ಸಮವಾಗಿರುತ್ತದೆ. ಒಂದು ಬಾಟಲ್ ನ್ಯಾನೋ ಯೂರಿಯಾದ ದರವು ರೂ. 225 ಇದ್ದು, ಸಬ್ಸಿಡಿ ರಹಿತವಾಗಿರುತ್ತದೆ. ಹರಳು ರೂಪದ ನ್ಯಾನೋ ಯೂರಿಯಾದ ದರ ಸಬ್ಸಿಡಿ ಒಳಗೊಂಡಂತೆ ರೂ. 266 ಇದೆ. ಕೇಂದ್ರ ಸರ್ಕಾರದ ಆಮದು ಮೂಲಕ ದೇಶಕ್ಕೆ ಸಬ್ಸಿಡಿ ರೂಪದಲ್ಲಿ ಆಮದು ಹೆಚ್ಚಿನ ಹೊರೆಯಾಗುತ್ತಿದೆ ಹಾಗೂ ಹರಳು ರೂಪದ ಯೂರಿಯಾಗೆ ಪರ್ಯಾಯವಾಗಿ ನ್ಯಾನೋ ಯೂರಿಯಾದ ಬಳಕೆಯು ಸಬ್ಸಿಡಿ ಹೊರೆಯನ್ನು ತಗ್ಗಿಸುವುದರ ಜೊತೆಗೆ ವಿದೇಶಿ ವಿನಿಮಯದ ಉಳಿಕೆಗೆ ಸಹ ಉತ್ತೇಜನ ನೀಡುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಗದಗ ಜಿಲ್ಲೆಯ ಇಫ್ಕೋ ಸಂಸ್ಥೆಯ ಪ್ರತಿನಿಧಿ ರೇವಂತ ಮೊಬೈಲ್ ಸಂಖ್ಯೆ: 8147107678 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಕೃಷಿ ಇಲಾಖೆಯ ಪ್ರಕಟಣೆ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Lalita MP