ಹೊಸಪೇಟೆ, 23 ಜೂನ್ (ಹಿ.ಸ.) :
ಆ್ಯಂಕರ್ : ಹೊಸಪೇಟೆ ಪ್ರಧಾನ ಕಚೇರಿ ವ್ಯಾಪ್ತಿಗೆ ಬರುವ ಎಲ್ಲಾ ಉಪ ಅಂಚೆ ಕಚೇರಿ ಹಾಗೂ ಶಾಖಾ ಅಂಚೆ ಕಚೇರಿಗಳಲ್ಲಿ ಹೊಸ ಎ.ಪಿ.ಟಿ 2.0 ತಂತ್ರಾಂಶ ಅಳವಡಿಕೆ ಜಾರಿಯಾಗುತ್ತಿರುವ ಹಿನ್ನಲೆಯಲ್ಲಿ ಎರಡು ದಿನಗಳ ಕಾಲ ಅಂಚೆ ಕಚೇರಿಗಳಲ್ಲಿ ವಹಿವಾಟುಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಅಂಚೆ ಅಧೀಕ್ಷಕ ಪಿ.ಚಿದಾನಂದ ಅವರು ತಿಳಿಸಿದ್ದಾರೆ.
ಭಾರತೀಯ ಅಂಚೆ ಇಲಾಖೆಯು ಆಧುನಿಕ ಹಾಗೂ ಗ್ರಾಹಕ ಸ್ನೇಹಿ ತಂತ್ರಾಂಶವನ್ನು ಅಭಿವೃದ್ಧಿಪಡಿಸಿ, ಆಧುನಿಕ ತಂತ್ರಜ್ಞಾನದ ನೆಟ್ವರ್ಕ್ ಸಮಸ್ಯೆಯಂತಹ ತೊಡಕುಗಳಿಂದ ಗ್ರಾಹಕರ ಸೇವೆಗಳಿಗೆ ಚ್ಯುತಿ ಬರದಂತೆ ಗಮನಹರಿಸಿ ಅಡ್ವಾನ್ಸ್ ಪೋಸ್ಟಲ್ ಟೆಕ್ನಾಲಜಿ 2.0 (ಎ.ಪಿ.ಟಿ 2.0) ಯನ್ನು ದೇಶಾದ್ಯಂತ ಎಲ್ಲಾ ಅಂಚೆ ಕಚೇರಿಗಳಲ್ಲಿ ಅಳವಡಿಸಲು ಮುಂದಾಗಿದೆ. ಬಳ್ಳಾರಿ ಅಂಚೆ ವಿಭಾಗದ ಹೊಸಪೇಟೆ ಪ್ರಧಾನ ಅಂಚೆ ಕಚೇರಿ, ಹಾಗೂ ಅದರ ಅಡಿಯಲ್ಲಿ ಬರುವ ಎಲ್ಲಾ ಉಪ ಅಂಚೆ ಕಚೇರಿಗಳು ಮತ್ತು ಶಾಖಾ ಅಂಚೆ ಕಚೇರಿಗಳಲ್ಲಿ ಎ.ಪಿ.ಟಿ 2.0 ತಂತ್ರಾಂಶವನ್ನು ಅಳವಡಿಸಲು ಮುಂದಾಗಿದೆ.
ಈ ಚಟುವಟಿಕೆಯ ಪೂರ್ವಭಾವಿಯಾಗಿ ಬಳ್ಳಾರಿ ಅಂಚೆ ವಿಭಾಗದ ವ್ಯಾಪ್ತಿಗೆ ಬರುವ ಹೊಸಪೇಟೆ ಪ್ರಧಾನ ಅಂಚೆ ಕಚೇರಿ, ಹೊಸಪೇಟೆ ನಗರದಲ್ಲಿರುವ ಇತರೆ ಎಲ್ಲಾ ಅಂಚೆ ಕಚೇರಿಗಳು, ಅರಸೀಕೆರೆ, ಚಿಗಟೇರಿ, ಚಿತ್ತವಾಡಗಿ, ಚೋರನೂರು, ಚಿಕ್ಕಜೋಗಿಹಳ್ಳಿ, ದೇವಲಾಪುರ, ಹಗರಿಬೊಮ್ಮನಹಳ್ಳಿ, ಹಂಪಸಾಗರ, ಹಂಪಿ, ಹಂಪಿ ಪವರ್ ಹೌಸ್, ಹೊಸಪೇಟೆ ಎನ್ಸಿ ಕಾಲೋನಿ, ಹೊಸಹಳ್ಳಿ, ಹೊಳಲು, ಹೂವಿನಹಡಗಲಿ, ಹಿರೇಹಡಗಲಿ, ಹರಪನಹಳ್ಳಿ, ಹಲವಾಗಲು, ಇಟ್ಟಿಗಿ, ಕಮಲಾಪುರ, ಕಂಪ್ಲಿ, ಕೂಡ್ಲಿಗಿ, ಕೊಟ್ಟೂರು, ಕೆ.ಯು ಕ್ಯಾಂಪಸ್, ಮರಿಯಮ್ಮನಹಳ್ಳಿ, ಉಜ್ಜಿನಿ, ಪಾಪಿನಾಯಕನಹಳ್ಳಿ, ತಂಬ್ರಹಳ್ಳಿ, ತೆಲಿಗಿ, ಟಿ.ಬಿ.ಡ್ಯಾಮ್, ಗುಡೇಕೋಟೆ ಉಪ ಅಂಚೆ ಕಚೇರಿಗಳು ಹಾಗೂ ಸಂಬಂಧಿತ ಶಾಖಾ ಅಂಚೆ ಕಚೇರಿಗಳಲ್ಲಿ ಜೂನ್ 24 ಮತ್ತು 25 ರಂದು ಯಾವುದೇ ವ್ಯವಹಾರ, ವಹಿವಾಟು ಇರುವುದಿಲ್ಲ. ಹಾಗಾಗಿ ಅಂಚೆ ಕಚೇರಿಯ ಗ್ರಾಹಕರು ಸಹಕರಿಸಬೇಕಾಗಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್