ಗದಗ, 23 ಜೂನ್ (ಹಿ.ಸ.) :
ಆ್ಯಂಕರ್ : ಕೃಷಿಯಲ್ಲಿ ರಾಸಾಯನಿಕ ಗೊಬ್ಬರಗಳ ಅಸಮತೋಲನ ಬಳಕೆಯಿಂದ ಮಣ್ಣಿನ ಆರೋಗ್ಯ ಮತ್ತು ಕೃಷಿಯ ಉತ್ಪಾದಕತೆ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಘನ ಭಾರತ ಸರ್ಕಾರದ ರಸಗೊಬ್ಬರಗಳ ಇಲಾಖೆಯ ಐ.ಎಫ್.ಎಂ.ಎಸ್. ವರದಿಗಳ ಪ್ರಕಾರ ಕಳೆದ ಐದು ವರ್ಷಗಳಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆಯಲ್ಲಿ ತೀವ್ರ ಏರಿಕೆ ಕಂಡು ಬಂದಿದೆ.
ಇದರಿಂದ ಸಾರಜನಕ:ರಂಜಕ:ಪೊಟ್ಯಾಶ್ ಬಳಕೆಯ ಅನುಪಾತವು ಅಸಮತೋಲನಗೊಳ್ಳುತ್ತಿದೆ. ಜಿಲ್ಲೆಯಲ್ಲಿ ಶೇ.18ರಷ್ಟು ಕೃಷಿ ಪ್ರದೇಶ ನೀರಾವರಿ ಅಡಿಯಲ್ಲಿದ್ದು, ಉಳಿದ ಭಾಗ ಖುಷ್ಕಿ ಪ್ರದೇಶವಾಗಿದೆ. ಈ ಎರಡೂ ಪ್ರದೇಶಗಳಲ್ಲಿ ರಾಸಾಯನಿಕಗಳ ಅಸಮತೋಲನ ಬಳಕೆಯಿಂದ ಜಿಲ್ಲೆಯ ಮಣ್ಣಿನಲ್ಲಿ ಸಾವಯವ ಇಂಗಾಲವು ಕುಂಠಿತಗೊಂಡಿದೆ.
ಹೆಸರೇ ಸೂಚಿಸುವಂತೆ, ನೈಸರ್ಗಿಕ ಕೃಷಿಯು ಪ್ರಕೃತಿಯೊಂದಿಗೆ ಕೆಲಸ ಮಾಡುವ ಕಲೆ. ಕಡಿಮೆ ವೆಚ್ಚದಲ್ಲಿ ಹೆಚ್ಚಿನದನ್ನು ಸಾಧಿಸಲು ಅನುವು ಮಾಡಿಕೊಡುವ ವಿಜ್ಞಾನವಾಗಿದೆ. ನೈಸರ್ಗಿಕ ಕೃಷಿಯು ಜಾನುವಾರು ಮತ್ತು ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳ ಬಳಕೆಯ ಆಧಾರದ ಮೇಲೆ ಅವಲಂಬಿತವಾಗಿರುವ ರಾಸಾಯನಿಕ ಮುಕ್ತ ಕೃಷಿ ವ್ಯವಸ್ಥೆಯಾಗಿದ್ದು, ಭಾರತೀಯ ಸಂಪ್ರದಾಯದಲ್ಲಿ ಬೇರೂರಿರುವ ಸಮಗ್ರ ನೈಸರ್ಗಿಕ ಕೃಷಿ ಹಾಗೂ ವೈವಿಧ್ಯ ಬೆಳೆ ಪದ್ಧತಿಯಾಗಿರುತ್ತದೆ. ಸದರಿ ಪದ್ಧತಿಯು ಹವಾಮಾನ ಸ್ಥಿತಿ ಸ್ಥಾಪಕತ್ವದೊಂದಿಗೆ ಮಣ್ಣಿನ ಆರೋಗ್ಯವನ್ನು ಸುಧಾರಿಸುವ ಮತ್ತು ಕೃಷಿ ಪರಿಕರಗಳ ವೆಚ್ಚವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.
ಘನ ಕೇಂದ್ರ ಸರ್ಕಾರವು ನೈಸರ್ಗಿಕ ಕೃಷಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ “ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ” ಯೋಜನೆಯನ್ನು ಪ್ರಸಕ್ತ ವರ್ಷದಿಂದ ಪ್ರಾರಂಭಿಸಿದೆ. ಸದರಿ ಯೋಜನೆಯಡಿ ಜಿಲ್ಲೆಯ ಆಯ್ದ 15 ಗುಚ್ಛಗಳಲ್ಲಿ, ಒಟ್ಟು 1875 ರೈತರ ತಾಕುಗಳ 1 ಎಕರೆ ಪ್ರದೇಶದಲ್ಲಿ ನೈಸರ್ಗಿಕ ಕೃಷಿ ಕೈಗೊಳ್ಳಲು ಪ್ರೇರೇಪಿಸಲಾಗುತ್ತಿದೆ. ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳುವ ರೈತರಿಗೆ ನೇರ ನಗದು ವರ್ಗಾವಣೆ ಮೂಲಕ ಪ್ರತಿ ಎಕರೆಗೆ ಪ್ರತಿ ವರ್ಷಕ್ಕೆ ರೂ.4000/-ದಂತೆ ಪ್ರೋತ್ಸಾಹಧನ ನೀಡಲು ಅವಕಾಶವಿರುತ್ತದೆ. ನೈಸರ್ಗಿಕ ಕೃಷಿಗೆ ಬೇಕಾಗುವ ಜೈವಿಕ ಕೃಷಿ ಪರಿಕರಗಳಾದ ಜೀವಾಮೃತ, ಬೀಜಾಮೃತ, ಘನ ಜೀವಾಮೃತ, ನೀಮಾಸ್ತç, ದಶಪರ್ಣಿ ಮುಂತಾದವುಗಳ ಉತ್ಪಾದನೆಗಾಗಿ 10 ಜೈವಿಕ ಪರಿಕರಗಳ ಸಂಪನ್ಮೂಲ ಕೇಂದ್ರಗಳನ್ನು ಗುರುತಿಸಲಾಗಿದೆ.
ಸದರಿ ಜೈವಿಕ ಪರಿಕರಗಳ ಸಂಪನ್ಮೂಲ ಕೇಂದ್ರಗಳ ನಿರ್ವಹಣೆಗಾಗಿ ರೂ.1.00ಲಕ್ಷ ಸಹಾಯಧನವನ್ನು ನೀಡಲಾಗುವುದು. ಒಟ್ಟಾರೆ, ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳುವ ರೈತರ ತಾಕುಗಳಲ್ಲಿ ರಾಸಾಯನಿಕಗಳನ್ನು ಬಳಸಕೂಡದೆಂದು ನಿರ್ದೇಶಿಸಲಾಗಿದೆ.
ಜಿಲ್ಲೆಯ ಗದಗ ತಾಲ್ಲೂಕಿನ ಹೊಂಬಳ, ಲಕ್ಕುಂಡಿ, ಹಾತಲಗೇರಿ, ಕೋಟುಮಚಗಿ, ಬಿಂಕದಕಟ್ಟಿ, ಸೊರಟೂರ ಗ್ರಾ.ಪಂ.ಗಳು; ಮುಂಡರಗಿ ತಾಲ್ಲೂಕಿನ ಕಲಕೇರಿ, ಡಂಬಳ ಗ್ರಾ.ಪಂ.ಗಳು; ಶಿರಹಟ್ಟಿ ತಾಲ್ಲೂಕಿನ ಪುಟಗಾಂವ ಬಡ್ನಿ, ಹುಲ್ಲೂರು, ಸೂರಣಗಿ, ದೊಡ್ಡೂರು, ಮಾಚನಹಳ್ಳಿ, ಬನ್ನಿಕೊಪ್ಪ, ಗ್ರಾ.ಪಂ.ಗಳು; ರೋಣ ತಾಲ್ಲೂಕಿನ ಚಿಕ್ಕಮಣ್ಣೂರ, ಕುಂಟೋಜಿ, ಸೂಡಿ, ರಾಂಪೂರ, ಅಸೂಟಿ ಗ್ರಾ.ಪಂ.ಗಳು; ನರಗುಂದ ತಾಲ್ಲೂಕಿನ ವಾಸನ ಮತ್ತು ರಡ್ಡೆನಾಗನೂರ ಗ್ರಾ.ಪಂ.ಗಳ ರೈತರ ತಾಕುಗಳಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಸದರಿ ಯೋಜನೆಯನ್ನು ಅನುಷ್ಠಾನಗೊಳಿಸಲು ಪ್ರತಿ ಗುಚ್ಛಕ್ಕೆ 2 ಕೃಷಿ ಸಖಿಯರಂತೆ 30 ಕೃಷಿ ಸಖಿಯರನ್ನು ಜಿಲ್ಲೆಯಾದ್ಯಂತ ಆಯ್ಕೆ ಮಾಡಲಾಗಿದೆ.
ಯೋಜನೆಯ ಉದ್ದೇಶಗಳನ್ನು ರೈತರಿಗೆ ಮನದಟ್ಟು ಮಾಡಿಸಿ, ಸಕ್ರಿಯವಾಗಿ ಭಾಗವಹಿಸಲು ಕೋರಿದೆ. ಕಾಲಕಾಲಕ್ಕೆ ಮಾಹಿತಿಗಳನ್ನು ನೀಡಿ “ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ” ಯೋಜನೆಯನ್ನು ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿ ಹಾಗೂ ಕೃಷಿ ವಿಶ್ವ ವಿದ್ಯಾನಿಲಯ, ಧಾರವಾಡ ಇವರ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Lalita MP