ಬೆಂಗಳೂರು, 23 ಜೂನ್ (ಹಿ.ಸ.) :
ಆ್ಯಂಕರ್ : ಐಶ್ವರ್ಯಾ ಗೌಡ ಅವರ ಚಿನ್ನದ ವ್ಯವಹಾರಕ್ಕೆ ಸಂಬಂಧಿಸಿದಂತೆ ₹9.82 ಕೋಟಿ ವಂಚನೆ ಪ್ರಕರಣದಲ್ಲಿ, ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಂಸದ ಡಿ.ಕೆ. ಸುರೇಶ್ ಅವರು ಇಂದು ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಜೂನ್ 19ರಂದು ನೀಡಿದ ಸಮನ್ಸ್ಗೆ ಪ್ರತಿಯಾಗಿ ಅವರು ಇಂದು ವಿಚಾರಣೆಗೆ ಹಾಜರಾಗುವುದಾಗಿ ಈಗಾಗಲೇ ತಿಳಿಸಿದ್ದರು.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿ.ಕೆ.ಸುರೇಶ, ತನಿಖೆಗೆ ಪೂರ್ಣ ಸಹಕಾರ ನೀಡುತ್ತೇನೆ ಎಂದು ಸ್ಪಷ್ಟಪಡಿಸಿದ್ದು, “ನನ್ನನ್ನು ಯಾವ ನಿಬಂಧನೆಗಳ ಆಧಾರದ ಮೇಲೆ ಕರೆಸಲಾಗಿದೆ ಎಂಬುದು ತಿಳಿಯಬೇಕಾಗಿದೆ. ವಿಚಾರಣೆಗೆ ಹಾಜರಾಗುತ್ತೇನೆ, ವಕೀಲರೂ ಜೊತೆ ಇರುತ್ತಾರೆ” ಎಂದರು.
ಸುಪ್ರೀಂ ಹಾಗೂ ಹೈಕೋರ್ಟ್ಗಳು ಇ.ಡಿ ಅವರ ವ್ಯಾಪ್ತಿಯ ಬಗ್ಗೆ ಹಲವು ಬಾರಿ ಎಚ್ಚರಿಕೆ ನೀಡಿವೆ. ಆದರೆ, ಇವರು ಇನ್ನೂ ಎಚ್ಚೆತ್ತುಕೊಳ್ಳದೇ, ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂಬಂತೆ ತೋರುತ್ತದೆ,” ಎಂದರು.
ಐಶ್ವರ್ಯಾ ಗೌಡರೊಂದಿಗೆ ಯಾವುದೇ ಹಣಕಾಸು ವ್ಯವಹಾರವಿಲ್ಲ ಎಂದು ಸ್ಪಷ್ಟನೆ ನೀಡಿದ ಡಿ.ಕೆ. ಸುರೇಶ್, “ಅವರು ನನ್ನನ್ನು ಕೆಲವೊಮ್ಮೆ ಭೇಟಿಯಾಗಿ ಕೆಲ ವಿಷಯಗಳನ್ನು ಚರ್ಚಿಸಿದ್ದಾರೆ. ಕೆಲವೊಮ್ಮೆ ಕ್ಷೇತ್ರದ ಕಾರ್ಯಕ್ರಮಗಳಲ್ಲೂ ನಾನು ಭಾಗವಹಿಸಿದ್ದೇನೆ. ಇದರ ಹೊರತಾಗಿ ಯಾವುದೇ ನಂಟಿಲ್ಲ. ಎಲ್ಲ ಮಾಹಿತಿ ಅಧಿಕಾರಿಗಳಿಗೆ ನೀಡುತ್ತೇನೆ,” ಎಂದು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa