ಗದಗ, 13 ಜೂನ್ (ಹಿ.ಸ.) :
ಆ್ಯಂಕರ್ : ಪರಿಶುದ್ಧವಾದ ನೀರು, ಗಾಳಿ, ಪರಿಸರವೇ ಮಾನವಕುಲದ ಉಳಿವು. ಮನುಕುಲದ ಅಸ್ಥಿತ್ವಕ್ಕೆ ಗಿಡಮರಗಳನ್ನು ಬೆಳೆಸಬೇಕು. ಹಸಿರೇ ಮಾನವನ ಉಸಿರು ಎಂದು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.
ಲಿಂಗಾಯತ ಪ್ರಗತಿಶೀಲ ಸಂಘದ 2749 ನೇ ಶಿವಾನುಭವದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಬಾಲ್ಯದಲ್ಲಿಯೇ ಮಕ್ಕಳಿಗೆ ಪರಿಸರದ ಬಗ್ಗೆ ತಿಳುವಳಿಕೆ ಮುಖ್ಯ. ಓಜೋನ ಪರದೆ ಹರಿದರೆ ಸುರಕ್ಷಿತವಲ್ಲ. ಸೂರ್ಯನ ಕಿರಣಗಳು ನೇರವಾಗಿ ಬಂದರೆ ಚರ್ಮರೋಗದಂತಹ ಸಮಸ್ಯೆಗಳು ಕಾಡುತ್ತವೆ. ಕುಡಿವ ನೀರು, ಉಸಿರಾಡುವ ಗಾಳಿ, ಕೇಳುವ ಶಬ್ದ, ತಿನ್ನುವ ಆಹಾರ ಎಲ್ಲವು ಮಾಲಿನ್ಯವಾಗಿದೆ. ಮಾನವನ ಬದುಕು ದುಸ್ತರವಾಗಿದೆ. ಇಂದು ಅತೀ ಕಾಡುವ ಸಮಸ್ಯೆ ಪ್ಲ್ಯಾಸ್ಟಿಕ್ ಸಮಸ್ಯೆ. ಪ್ಲ್ಯಾಸ್ಟಿಕ್ ಬಳಕೆಯನ್ನು ಸಂಪೂರ್ಣ ತ್ಯಜಿಸಬೇಕು. ಹೊಗೆ ರಹಿತ ಕಾರ್ಖಾನೆಗಳು ಬರಬೇಕು. ಗುರುಗಳಾದ ಪೂಜ್ಯ ಸಿದ್ದಲಿಂಗ ಸ್ವಾಮೀಜಿಗಳು ಸ್ವತಃ ಸಾಕಷ್ಟು ಗಿಡಮರಗಳನ್ನು ಬೆಳೆಸಿದ್ದಾರೆ. ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಈ ಭಾಗದ ಜೀವನಾಡಿಯಾದ ಕಪ್ಪತ್ತಗುಡ್ಡ ಪ್ರದೇಶವನ್ನು ಗಣಿಗಾರಿಕೆ ಕಂಪನಿಗಳಿಂದ ಸಂರಕ್ಷಿಸಿದ್ದಾರೆ. ಪ್ರತಿಯೊಬ್ಬರಲ್ಲಿಯೂ ಪರಿಸರದ ಬಗ್ಗೆ ಜಾಗೃತಿ ಅವಶ್ಯ ಎಂದು ಶ್ರೀಗಳು ಮಾತನಾಡಿದರು.
ಉಪನ್ಯಾಸಕರಾಗಿ ಆಗಮಿಸಿದ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪುರಸ್ಕಾರ ಟ್ರಸ್ಟ್ನ ಮಾಜಿ ಅಧ್ಯಕ್ಷರಾದ ವಿರುಪಾಕ್ಷಪ್ಪ ಮ್ಯಾಗೇರಿ ಅವರು ಮಾತನಾಡಿ, ವಿಶ್ವ ಪರಿಸರದ ಆಚರಣೆ 1972 ರಿಂದ ಪ್ರಾರಂಭವಾಗಿದೆ. ಆದರೂ ತಾಪಮಾನ ವಿಪರೀತ ಏರುತ್ತಿದೆ. ಪ್ರಾಣಿ ಪಕ್ಷಿ ಮಾನವರಿಗೆ ತುಂಬಾ ತೊಂದರೆ ಆಗುತ್ತಿದೆ. ಗ್ರೀನ್ ಹೌಸ್ ಎಫೆಕ್ಟ್ನಿಂದ ಉಷ್ಣತೆ ಜಾಸ್ತಿ ಆಗುತ್ತಿದೆ. ಕೈಗಾರಿಕೆಗೆ, ಕೃಷಿಗೆ, ಕಟ್ಟಿಗೆಗೆ, ಕಟ್ಟಡಕ್ಕೆ ಮುಂತಾದ ದುರಾಸೆಗಾಗಿ ಕಾಡು ನಾಶ ಮಾಡುತ್ತೇವೆ. ಅರಣ್ಯವೇ ತೆರೆದ ಆಮ್ಲಜನಕದ ಕಾರ್ಖಾನೆ. ಅದರ ರಕ್ಷಣೆ ನಮ್ಮೆಲ್ಲರ ಹೊಣೆ. ಪ್ಲ್ಯಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇದಿಸಬೇಕು. ಸುಂದರಲಾಲ್ ಬಹುಗುಣ ಮತ್ತು ಸಾಲುಮರದ ತಿಮ್ಮಕ್ಕರ ಸಾಹಸದ ಕತೆಗಳನ್ನು ಮಕ್ಕಳಿಗೆ ಸಮಾಜಕ್ಕೆ ತಿಳಿಸಿ ಜಾಗ್ರತಿ ಮೂಡಿಸುವುದು ಅವಶ್ಯ ಎಂದು ವೈಜ್ಞಾನಿಕವಾಗಿ ವಿಶ್ಲೇಷಿಸಿ, ತುಂಬಾ ಅರ್ಥಪೂರ್ಣವಾಗಿ ಮಾತನಾಡಿದರು.
ಶ್ರೀಮತಿ ಅನ್ನಪೂರ್ಣ ಬಡಿಗೇರ ಹಾಗೂ ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ಪರಿಸರದ ಗೀತೆಯನ್ನು ಸಾಂದರ್ಭಿಕವಾಗಿ ಹಾಡಿ ಸಂಗೀತ ಸೇವೆಯನ್ನು ನಡೆಸಿಕೊಟ್ಟರು.
ಧಾರ್ಮಿಕ ಗ್ರಂಥ ಪಠಣವನ್ನು ಕುಮಾರಿ ಚಂದ್ರಿಕಾ ಹೊಂಬಳ ಹಾಗೂ ವಚನಚಿಂತನವನ್ನು ಕುಮಾರಿ ಲಕ್ಷ್ಮೀ ಪಟ್ಟಣ ನಡೆಸಿಕೊಟ್ಟರು. ದಾಸೋಹ ಸೇವೆಯನ್ನು ತಂಬ್ರಳ್ಳಿಯ ಅಕ್ಕಿ ತೋಟಪ್ಪನವರು ವಹಿಸಿಕೊಂಡಿದ್ದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ ಉಪಾಧ್ಯಕ್ಷ ಡಾ. ಉಮೇಶ ಪುರದ, ವಿದ್ಯಾ ಪ್ರಭು ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ ಸಹಕಾರ್ಯದರ್ಶಿ ಸೋಮನಾಥ ಪುರಾಣಿಕ ಹಾಗೂ ನಾಗರಾಜ್ ಹಿರೇಮಠ ಸಂಘಟನಾ ಕಾರ್ಯದರ್ಶಿ ಮಹೇಶ್ ಗಾಣಿಗೇರ ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ ಹಾಗೂ ಶಿವಾನುಭವ ಸಮಿತಿಯ ಚೇರ್ಮನ್ ಐ.ಬಿ ಬೆನಕೊಪ್ಪ, ಸಹ ಚೇರ್ಮನ್ ಶಿವಾನಂದ ಹೊಂಬಳ ಸೇರಿದಂತೆ ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು. ಶ್ರೀಮತಿ ಅರುಣಾ ಹಳಕಟ್ಟಿ ಯವರು ಸ್ವಾಗತಿಸಿದರು. ವಿದ್ಯಾ ಪ್ರಭು ಗಂಜಿಹಾಳರವರು ಕಾರ್ಯಕ್ರಮ ನಿರೂಪಿಸಿದರು.
ಹಿಂದೂಸ್ತಾನ್ ಸಮಾಚಾರ್ / Lalita MP