ಗದಗ, 13 ಜೂನ್ (ಹಿ.ಸ.) :
ಆ್ಯಂಕರ್ : ಗದಗ ನಗರದ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಬಸವೇಶ್ವರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಪ್ರಸಕ್ತ 2025ನೇ ಸಾಲಿನ ವಾರ್ಷಿಕೋತ್ಸವ ಸಮಾರಂಬವನ್ನು ಹಮ್ಮಿಕೊಳ್ಳಲಾಗಿತ್ತು.
ವಿಧಾನ ಪರಿಷತ್ತ್ ಸದಸ್ಯರಾದ ಸನ್ಮಾನ್ಯ ಶ್ರೀ ಎಸ್. ವ್ಹಿ. ಸಂಕನೂರ ಅವರು ಸಮಾರಂಭವನ್ನು ಉದ್ಘಾಟಿಸಿ ಸನ್ಮಾನ ಸ್ವಿಕರಿಸಿ ಮಾತನಾಡಿ ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನ ಮತ್ತು ವಿದ್ಯೆಯ ಮಹತ್ವ ಅರಿತಿಕೊಂಡು ವಿದ್ಯಾರ್ಜನೆ ಮಾಡಬೇಕು ಅಲ್ಲದೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ಮೇಲೆ ಅದನ್ನು ಉಳಿಸಿಕೊಂಡು ಅದೇ ಸಾಧನೆಯಲ್ಲಿ ಮುಂದುವರೆಯಬೇಕು. ಸಮಯ ವ್ಯರ್ಥ ಮಾಡದೇ ಸತತ ಪರಿಶ್ರಮದಿಂದ ವಿದ್ಯೆಯೊಂದಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಡಾ. ಎಪಿಜೆ ಅಬ್ದುಲ್ ಕಲಾಂ ಹಾಗೂ ಅಂಬೇಡ್ಕರ ಅವರ ಜೀವನಾದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಪಾಲಿಸಿಕೊಂಡು ಅವರಂತ್ತೆ ಬೆಳೆಯಬೇಕೆಂದು ಹೇಳಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕರ್ನಾಟಕ ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ಕುಲಸಚಿವರಾದ ಡಾ. ಎನ್ ವಾಯ್ ಮಟ್ಟಿಹಾಳ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ ವಿದ್ಯಾರ್ಥಿಗಳು ಅಜ್ಞಾನದ ಕತ್ತಲೆಯನ್ನು ಹೊಗಲಾಡಿಸುವ ಜ್ಞಾನದ ಜ್ಯೋತಿಯಾಗಿ ದೀಪಸ್ತಂಬದಂತೆ ಬೆಳೆಯಬೇಕು ಎನ್ನುತ್ತಾ ನಮ್ಮ ದೇಶದಲ್ಲಿ ಪದವೀದರರ ಸಂಖ್ಯೆ ಅಪಾರ ವಿದ್ದರೂ ಸಚ್ಚಾರಿತ್ರ್ಯ ಹೊಂದಿರುವ ಜ್ಞಾನಿಗಳ ಕೊರತೆ ಇರುವುದು ವಿಶಾದನೀಯ ತೀವ್ರ ಗತಿಯಲ್ಲಿ ಬದಲಾಗುತ್ತಿರುವ ಇಂದಿನ ಅಧುನಿಕ ಯುಗದಲ್ಲಿ ನಮ್ಮ ಪ್ರತಿಭೆಗೆ ಸಂಸ್ಕಾರದ ಸ್ಪರ್ಶ ಬೇಕಾಗಿದೆ.
ಸಾಧನೆಗೆ ಸಿರಿವಂತಿಕೆಯ ಅಂತಸ್ಥಿನ ಆಯಾಮಗಳು ಕಾರಣವಾಗುವುದಿಲ್ಲ ಪ್ರತಿಯೊಬ್ಬರೂ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಕೀಳರಿಮೆ ಬಿಟ್ಟು ನಕಾರಾತ್ಮಕ ವಿಚಾರಗಳಿಂದ ಅಂತರಂಗದ ಜೈಲಿನಲ್ಲಿ ಬಂಧಿಸಿಕೊಳ್ಳದೆ ಬುದ್ಧ, ಬಸವ ಹಾಗೂ ಅಂಬೇಡ್ಕರ ಅವರನ್ನು ಮಾದರಿಯಾಗಿಟ್ಟುಕೊಂಡು ತಂದೆ ತಾಯಿಗಳ ಶ್ರಮವನ್ನು ಸ್ಮರಿಸಿಕೊಳ್ಳುತ್ತಾ ಸತತ ಪರಿಶ್ರಮ ಮತ್ತು ಆತ್ಮಬಲದಿಂದ ದಿಟ್ಟ ಹೆಜ್ಜೆಯನ್ನಿಟ್ಟರೆ ಜೀವನದಲ್ಲಿ ಬಹುದೊಡ್ಡ ಸಾಧನೆ ಮಾಡಲು ಸಾಧ್ಯವೆಂದರು. ತಮ್ಮ ಭಾಷಣದುದ್ದಕ್ಕೂ ಸಾಧನೆ ಮಾಡಿದ ಅನೇಕರನ್ನು ಸ್ಮರಿಸಿಕೊಂಡು ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕ ಮಾತುಗಳನ್ನು ಹೇಳಿದರು.
ಸಮಾರಂಭದ ಅಧ್ಯಕ್ಷತೆವಹಿಸಿದ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿಗಳಾದ ಶ್ರೀ ಎಸ್.ಎಸ್. ಪಟ್ಟಣಶೆಟ್ಟಿ ಅವರು ಮಾತನಾಡಿ, ಜಗತ್ತಿನಲ್ಲಿ ವಿದ್ಯೆಗೆ ಸಮಾನವಾದುದು ಯಾವುದು ಇಲ್ಲ ಜೀವನದಲ್ಲಿ ವಿದ್ಯೆ ಬಹಳ ಮುಖ್ಯ ಇಂದು ನಕರಾತ್ಮಕವಾಗಿ ಬೆಳೆಯುತ್ತಿರುವ ಯುವಜನಾಂಗವು ತಮ್ಮ ಪ್ರವೃತ್ತಿಗಳನ್ನು ಬದಲಾಯಿಸಿಕೊಂಡು ವಿಚಾರವಾದಿಗಳ, ಶರಣರ ಮತ್ತು ಜ್ಞಾನಿಗಳ ವಿಚಾರಗಳನ್ನು ಮೈಗೂಡಿಸಿಕೊಂಡು ಜೀವನದಲ್ಲಿ ಉನ್ನತ ಸ್ಥಾನ ಪಡೆಯಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳುತ್ತಾ ಭಾಷಣ ಮದ್ಯದಲ್ಲಿ ಪೂಜ್ಯ ಲಿಂ. ಡಾ ತೋಂಟದ ಸಿದ್ಧಲಿಂಗ ಶ್ರೀಗಳ ಶೈಕ್ಷಣಿಕ ಮತ್ತು ಸಾಮಾಜಿಕ ಕಳಕಳಿಯನ್ನು ಸ್ಮರಿಸಿಕೊಂಡರು.
ಕರ್ನಾಟಕ ವಿಶ್ವವಿದ್ಯಾಲಯದ ಬ್ಲ್ಯೂ ಆಗಿ ಆಯ್ಕೆಯಾದ ಕುಮಾರ ಮೇಘರಾಜ ವಾಲ್ಮಿಕಿ ಮತ್ತು ಕುಮಾರ ಆದರ್ಶ ಇವರನ್ನು ಸನ್ಮಾನ್ಯ ಶ್ರೀ ಎಸ್.ವ್ಹಿ ಸಂಕನೂರ ಅವರು ಸನ್ಮಾನಿಸಿ ಗೌರವಿಸಿದರು ಹಾಗೂ ಜಿಲ್ಲಾಮಟ್ಟದ ಫೆಸ್ಟ್ನಲ್ಲಿ ಬಹುವಿಧ ಪ್ರಶಸ್ತಿ ಪಡೆದ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿದರು.
ಸಮಾರಂಭವು ಕುಮಾರಿ ರೂಪಾ ಹಾಗೂ ಸಂಗಡಿಗರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲ್ಪಟ್ಟಿತು. ಪ್ರಾ ಎಂ.ಎಂ ಬುರಡಿಯವರು ಸ್ವಾಗತಿಸಿ ಪ್ರಾಸ್ತಾವಿಕ ಮಾತು ಹೇಳಿದರು.
ಸಮಾರಂಭದ ವೇದಿಕೆಯ ಮೇಲೆ ಶ್ರೀ ಅಮರೇಶ ಅಂಗಡಿ, ಶ್ರೀ ಈಶಣ್ಣ ಮುನವಳ್ಳಿ , ಶ್ರೀ ಮೋಹನ್ ಅಲ್ಮೇಲಕರ್ , ಶ್ರೀ ಬಲರಾಮ ಬಸವಾ , ಶ್ರೀ ಶೇಖಣ್ಣ ಕಳಸಾಪೂರಶೆಟ್ಟರ , ಶ್ರೀ ವಿದ್ಯಾಧರ ದೊಡ್ಡಮನಿ, ಶ್ರೀ ಎಸ್.ಎಸ್.ಚಟ್ಟಿ, ಶ್ರೀ ಸಿದ್ಧಲಿಂಗಯ್ಯ ಹಿರೇಮಠ, ಶ್ರೀ ಲಿಂಗರಾಜ ಪಾಟೀಲ ಅವರು ಉಪಸ್ಥಿತರಿದ್ದರು. ಕುಮಾರಿ ಪೂಜಾ ಭಂಡಾರಿ ಅವರು ವಂದಿಸಿದರು. ಕುಮಾರಿ ಪ್ರೀತಿ ಹಿರೇಮಠ ಹಾಗೂ ಮೇಘರಾಜ ವಾಲ್ಮಿಕಿ ಅವರು ಮನರಂಜನಾ ಕಾರ್ಯಕ್ರಮಗಳ ನಿರೂಪಣೆ ಮಾಡಿದರು ವಿದ್ಯಾರ್ಥಿಗಳ ಮನರಂಜನೆ ಕಾರ್ಯಕ್ರಮಗಳು ಎಲ್ಲರನ್ನು ರಂಜಿಸಿದವು. ಶ್ರೀ ಕೆ. ವ್ಹಿ. ಬಾಗಲಕೋಟಿಯವರು ಕಾರ್ಯಕ್ರಮ ನಿರೂಪಿಸಿದರು.
ಹಿಂದೂಸ್ತಾನ್ ಸಮಾಚಾರ್ / Lalita MP