‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಅನುಷ್ಠಾನದಲ್ಲಿ ‘ಶಕ್ತಿ ನೆಲ’ ರಾಯಚೂರು ಜಿಲ್ಲೆ ಮುಂದೆ
ಬಳ್ಳಾರಿ, 1 ಜೂನ್ (ಹಿ.ಸ.) ಆ್ಯಂಕರ್: ಮಕ್ಕಳಿಗೆ ಶಿಕ್ಷಣ ಕೊಡಲು ಪೋಷಕರು ಸರ್ಕಾರಿ ಶಾಲೆಗಳತ್ತ ಆತ್ಮವಿಶ್ವಾಸದಿಂದ ಹೆಜ್ಜೆ ಇಡಲು ಪ್ರೇರಣೆ ನೀಡುವ ನಿಟ್ಟಿನಲ್ಲಿ ರೂಪಿಸಿರುವ, ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಬಲವರ್ಧನೆಯ ಕಾರ್ಯಕ್ರಮವಾದ ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಅನುಷ್ಠಾನದಲ್ಲಿ ಕಲ್ಯಾಣ ಕ
‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಅನುಷ್ಠಾನದಲ್ಲಿ ‘ಶಕ್ತಿ ನೆಲ’ ರಾಯಚೂರು ಜಿಲ್ಲೆ ಮುಂದೆ


ಬಳ್ಳಾರಿ, 1 ಜೂನ್ (ಹಿ.ಸ.)

ಆ್ಯಂಕರ್: ಮಕ್ಕಳಿಗೆ ಶಿಕ್ಷಣ ಕೊಡಲು ಪೋಷಕರು ಸರ್ಕಾರಿ ಶಾಲೆಗಳತ್ತ ಆತ್ಮವಿಶ್ವಾಸದಿಂದ ಹೆಜ್ಜೆ ಇಡಲು ಪ್ರೇರಣೆ ನೀಡುವ ನಿಟ್ಟಿನಲ್ಲಿ ರೂಪಿಸಿರುವ, ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಬಲವರ್ಧನೆಯ ಕಾರ್ಯಕ್ರಮವಾದ ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಅನುಷ್ಠಾನದಲ್ಲಿ ಕಲ್ಯಾಣ ಕರ್ನಾಟಕ ಭಾಗದ ‘ಶಕ್ತಿ ನೆಲ’ ಖ್ಯಾತಿಯ ರಾಯಚೂರ ಜಿಲ್ಲೆಯು ಅತ್ಯುತ್ತಮ ಪ್ರಗತಿ ಸಾಧಿಸಿದೆ.

2025-26ನೇ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ, ಪ್ರಾಥಮಿಕ, ಪೌಢಶಾಲೆ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು ಮಕ್ಕಳ ದಾಖಲಾತಿ ಹೆಚ್ಚಿಸಲು ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮ ಏರ್ಪಡಿಸಿ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕುರಿತಂತೆ ಸವಿವರವಾದ ಸುತ್ತೋಲೆಯನ್ನು ಮಾನ್ಯ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು 2025ರ ಏಪ್ರೀಲ್ 25ರಂದು ಹೊರಡಿಸಿ ಸೂಚನೆ ನೀಡಿದ್ದರು.

ತಮ್ಮ ಮಕ್ಕಳ ಭವಿಷ್ಯವು ಉಜ್ವಲವಾಗಬೇಕು ಎಂಬುದು ಪ್ರತಿಯೊಬ್ಬ ಪೋಷಕರ ಆಶಯವಾಗಿರುತ್ತದೆ. ಪೋಷಕರ ತಲೆಯಲ್ಲಿರುವ ಇಂತಹ ವಿಚಾರಗಳನ್ನು ಗಮನದಲ್ಲಿರಿಸಿಕೊಂಡು ಶಾಲಾ ಶಿಕ್ಷಣ ಇಲಾಖೆಯು ರೂಪಿಸುವ ಕಾರ್ಯಕ್ರಮಗಳನ್ನು ಶಿಸ್ತುಬದ್ಧವಾಗಿ ಅನುಷ್ಠಾನಗೊಳಿಸಿ ಇಲಾಖೆಯ ಆಶಯವನ್ನು ಅರ್ಥೈಸಿಕೊಂಡು ಕಾರ್ಯಕ್ಷಮತೆಯಿಂದ ಮತ್ತು ಕಾಳಜಿಯಿಂದ ರಾಯಚೂರ ಜಿಲ್ಲೆಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶ್ರಮವಹಿಸಿದ್ದರಿಂದ ಮಹತ್ವದ ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಕಾರ್ಯಕ್ರಮವು ರಾಯಚೂರ ಜಿಲ್ಲೆಯಲ್ಲಿ ಯಶ ಕಂಡಿದೆ.

ಏನಿದು ಕಾರ್ಯಕ್ರಮ?: ಶಾಲಾ ಶಿಕ್ಷಣವನ್ನು ಬಲಪಡಿಸಲು ಎಲ್ಲಾ ಮಕ್ಕಳು ಸಾರ್ವತ್ರಿಕ ಶಿಕ್ಷಣಕ್ಕೆ ಒಳಪಡಿಸುವುದು ಅಗತ್ಯವಾದ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸುವ ನಿಟ್ಟಿನಲ್ಲಿ 2025-26ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಸರ್ಕಾರಿ ಶಾಲೆಗಳಲ್ಲಿ, ಪದವಿ ಪೂರ್ವ ಕಾಲೇಜುಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸುವ ಸಂಬಂಧ ಶೈಕ್ಷಣಿಕ ಸಂವಾದ ಮತ್ತು ಜಾಗೃತಿಯನ್ನು ಪೋಷಕರಲ್ಲಿ ಮೂಡಿಸಲು ತಾಲೂಕು/ವಲಯ ಹಂತದಲ್ಲಿ ಒಂದು ಹಾಗೂ ಹೋಬಳಿ ಮಟ್ಟದಲ್ಲಿ ಒಂದು ದಿನದ ಪ್ರೇರಣಾತ್ಮಕ ಶಾಲಾ ಕಾರ್ಯಕ್ರಮ ಏರ್ಪಡಿಸಲು ಈ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮದಡಿ ಯೋಜಿಸಲಾಗಿದೆ. ಈ ಬಗ್ಗೆ ಈಗಾಗಲೇ ಶಾಲಾ ಶಿಕ್ಷಣ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯ ಎಲ್ಲ ಸ್ತರದ ಅಧಿಕಾರಿಗಳಿಗೆ ತರಬೇತಿಯನ್ನು ಸಹ ನೀಡಲಾಗಿದೆ. ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ವಿಧಾನ ಮತ್ತು ಪೂರ್ವ ತಯಾರಿಗಾಗಿ ತರಬೇತಿ ಮಾರ್ಗಸೂಚಿ ಸೇರಿದಂತೆ ಕಾರ್ಯಕ್ರಮ ಅನುಷ್ಠಾನದ ಸಮಗ್ರ ರೂಪುರೇಷಗಳನ್ನು ಸಿದ್ಧಪಡಿಸಿ ಅನುಷ್ಠಾನಕ್ಕೆ ತರಲಾಗುತ್ತಿದೆ.

ತಾಲೂಕು, ಹೋಬಳಿ ಮಟ್ಟದಲ್ಲಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಯಕ್ರಮ ಏರ್ಪಡಿಸಲು ತರಬೇತಿ ನೀಡಲಾಗುತ್ತದೆ. ಪ್ರತಿ ಕಾರ್ಯಕ್ರಮಕ್ಕೆ ಪೋಷಕರು, ಎಸ್‍ಡಿಎಂಸಿ ಸದಸ್ಯರು, ಅಡುಗೆ ಸಿಬ್ಬಂದಿ ಮತ್ತು ಸಹಾಯಕರು, ಗ್ರಾಮ ಪಂಚಾಯತ್ ಅಥವಾ ವಾರ್ಡನ ಸದಸ್ಯರು, ಹಳೆಯ ವಿದ್ಯಾರ್ಥಿಗಳು, ಹತ್ತಿರದ ಸರ್ಕಾರಿ ಶಾಲೆಗಳ ಶಿಕ್ಷಕರು, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರನ್ನು ಆಹ್ವಾನಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ಸಮೀಕ್ಷಾ ಹಾಳೆ ನೀಡಿ ಅವರಿಂದ ಶಾಲೆ ಅಥವಾ ಕಾಲೇಜುಗಳಲ್ಲಿ ಗಮನಿಸಿರುವ ಮೂಲ ಸೌಕರ್ಯ, ದೊರೆಯುತ್ತಿರುವ ಶೈಕ್ಷಣಿಕ ಸೌಲಭ್ಯ, ಪ್ರೋತ್ಸಾಹ ಕಾರ್ಯಕ್ರಮಗಳು, ಕಲಿಕಾ ಗುಣಮಟ್ಟ ಮತ್ತು ವಾತಾವರಣ ಇತ್ಯಾದಿಗಳ ಅಭಿಪ್ರಾಯ ಸಂಗ್ರಹಿಸುವುದು, ಪಾಲ್ಗೊಂಡವರೊಂದಿಗೆ ಸಂವಾದ ನಡೆಸಿ ಅವರ ಸಲಹೆಗಳನ್ನು ಸ್ವೀಕರಿಸಲಾಗುತ್ತದೆ.

ಪ್ರಮುಖ ಭಾಗಿದಾರರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಅವರೊಂದಿಗೆ ಶೈಕ್ಷಣಿಕ ಸೌಲಭ್ಯಗಳು, ಕಲಿಕಾ ಬಲವರ್ಧನೆಯ ಕಾರ್ಯಕ್ರಮಗಳು ಮತ್ತು ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮದ ಬಗ್ಗೆ ಚರ್ಚಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಜಿಲ್ಲಾಮಟ್ಟದ ಆನಲೈನ್ ತರಬೇತಿ, ಕಾರ್ಯಕ್ರಮದಲ್ಲಿ ಬಳಸುವ ನಮೂನೆಗಳು, ಕಾರ್ಯಕ್ರಮ ಅನುಷ್ಠಾನದಲ್ಲಿ ವಿಭಾಗೀಯ ಅಪರ ಆಯುಕ್ತರ ಪಾತ್ರ ಮತ್ತು ಮೇಲ್ವಿಚಾರಣೆಯ ಜವಾಬ್ದಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳ ಪಾತ್ರ ಮತ್ತು ಜವಾಬ್ದಾರಿಯ ಬಗ್ಗೆ ಸವಿವರವಾಗಿ ತಿಳಿಸಲಾಗಿದೆ.

ನಮ್ಮ ಶಾಲೆ ನಮ್ಮ ಜವಾಬ್ದಾರಿ-ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಬಲವರ್ಧನೆ ಕಾರ್ಯಕ್ರಮಕ್ಕೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ತಮ್ಮ ಗೃಹ ಕಚೇರಿ ಚಾಲನೆ ನೀಡಿದ್ದು, ಮುಖ್ಯಮಂತ್ರಿ ಅವರು ತಾವು ಓದಿದ ಕುಪ್ಪೇಗಾಲದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸಿದ್ದರಾಮನಹುಂಡಿಯ ಕೆ.ಪಿ.ಎಸ್ ಶಾಲೆಗೆ 10 ಲಕ್ಷ ರೂ.ಗಳ ದೇಣಿಗೆ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಸ್ಮರಣೀಯವಾಗಿದೆ.

ಕಾರ್ಯಕ್ರಮದ ಉದ್ದೇಶಗಳೇನು: ಮುಖ್ಯವಾಗಿ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿಯೇ ಪ್ರವೇಶ ಪಡೆದುಕೊಳ್ಳುವಂತೆ ಪ್ರೇರಣೆ ನೀಡುವುದು, ಸಮುದಾಯದಲ್ಲಿ ಶಿಕ್ಷಣದ ಮಹತ್ವ, ಸರ್ಕಾರಿ ಶಾಲೆಗಳಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಬಗ್ಗೆ ಹಾಗೂ ಇಲಾಖೆಯ ಶೈಕ್ಷಣಿಕ ಕಾರ್ಯಕ್ರಮಗಳ ಪ್ರೋತ್ಸಾಹದಾಯಕ ಯೋಜನೆಗಳ ಕುರಿತು ಪೋಷಕರಲ್ಲಿ ಜಾಗೃತಿ ಮೂಡಿಸುವುದು, ಮಕ್ಕಳಲ್ಲಿರುವ ಪೌಷ್ಠಿಕತೆ ಮತ್ತು ರಕ್ತಹೀನತೆ ನಿವಾರಿಸಲು ಮಧ್ಯಾಹ್ನ ಉಪಾಹಾರ ಯೋಜನೆ, ಕ್ಷೀರಭಾಗ್ಯ ಯೋಜನೆ ಮತ್ತು ಪೂರಕ ಪೌಷ್ಠಿಕ ಆಹಾರವಾಗಿ ಮೊಟ್ಟೆ ಬಾಳೆ ಹಣ್ಣು ರಾಗಿ ಮಾಲ್ಟ್ ವಿತರಣೆಯ ಕಾರ್ಯಕ್ರಮಗಳ ಮೂಲಕ ಮಕ್ಕಳ ನಿರಂತರ ಕಲಿಕೆಗಾಗಿ ಸರ್ಕಾರಿ ಶಾಲೆಗಳಲ್ಲಿ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ನೀಡುತ್ತಿರುವ ಪೌಷ್ಠಿಕ ಆಹಾರದ ಬಗ್ಗೆ ಪೋಷಕರಲ್ಲಿ ಅರಿವು ಮೂಡಿಸುವುದು ಈ ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಕಾರ್ಯಕ್ರಮದ ಉದ್ದೇಶಗಳಾಗಿವೆ.

ಆಶಾದಾಯಕ ಪ್ರಗತಿ: ರಾಯಚೂರ ಜಿಲ್ಲೆಯ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮದ ತಾಲೂಕುವಾರು ಮತ್ತು ಜಿಲ್ಲಾವಾರು ಪ್ರಗತಿಯು ಆಶಾದಾಯಕವಾಗಿದೆ. ಸರ್ಕಾರಿ ಶಾಲೆಗಳ ಹಳೆಯ ವಿದ್ಯಾರ್ಥಿಗಳು, ಶಿಕ್ಷಕರು, ದಾನಿಗಳು ಸೇರಿದಂತೆ ಇನ್ನೀತರರನ್ನು ಒಳಗೊಂಡು ಇದುವರೆಗೆ 1418 ವಾಟ್ಸಪ್ ಗ್ರೂಪ ರಚಿಸಲಾಗಿದೆ. ರಾಯಚೂರ ಜಿಲ್ಲೆಯ ದೇವದುರ್ಗ ಬ್ಲಾಕ್‍ನಲ್ಲಿ 351 ಶಾಲೆಗಳಿದ್ದು 223 ವಾಟ್ಸಪ್ ಗ್ರೂಪ್ ಮಾಡಿ ಶೇ.63.53ರಷ್ಟು ಪ್ರಗತಿಯಾಗಿದೆ. ಅದೇ ರೀತಿ ಲಿಂಗಸುಗೂರು ಬ್ಲಾಕ್‍ನಲ್ಲಿ 364 ಶಾಲೆಗಳಿದ್ದು 350 ವಾಟ್ಸಪ್ ಗ್ರೂಪ್ ರಚಿಸಿ ಶೇ.96.15ರಷ್ಟು ಪ್ರಗತಿಯಾಗಿದೆ. ಅದೇ ರೀತಿ ಮಾನ್ವಿ ಬ್ಲಾಕ್‍ನಲ್ಲಿ 317 ಶಾಲೆಗಳಿದ್ದು 294 ವಾಟ್ಸಪ್ ಗ್ರೂಪ್ ರಚಿಸಿ ಶೇ.92.74ರಷ್ಟು ಪ್ರಗತಿ ಸಾಧಿಸಲಾಗಿದೆ. ರಾಯಚೂರು ಬ್ಲಾಕ್‍ನಲ್ಲಿ 314 ಶಾಲೆಗಳಿದ್ದು ಅಂದಾಜು 300 ವಾಟ್ಸಪ್ ಗ್ರೂಪ್ ರಚಿಸಿ ಶೇ.95.54ರಷ್ಟು ಪ್ರಗತಿ ಸಾಧಿಸಲಾಗಿದೆ. ಅದೇ ರೀತಿ ಸಿಂಧನೂರು ಬ್ಲಾಕ್‍ನಲ್ಲಿ 338 ಶಾಲೆಗಳಿದ್ದು 251 ವಾಟ್ಸಪ್ ಗ್ರೂಪ್ ರಚಿಸಿ ಶೇ.74.26ರಷ್ಟು ಪ್ರಗತಿ ಸಾಧಿಸಲಾಗಿದೆ. ಈ ವಾಟ್ಸಪ್ ಗ್ರೂಪಗಳ ಮೂಲಕ ಉತ್ತಮ ರೀತಿಯಲ್ಲಿ ಸಂವಹನ ಸಾಧ್ಯವಾಗಿದ್ದು, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸುವ ಹಿನ್ನೆಲೆಯಲ್ಲಿ ಚರ್ಚೆ, ಹಣಕಾಸಿನ ನೆರವು, ಪೀಠೋಪಕರಣ, ಪಾಠೋಪಕರಣಗಳ ಕೊಡುಗೆಗೆ ಅನುಕೂಲವಾಗಿದೆ.

ನಮ್ಮ ಶಾಲೆ ನಮ್ಮ ಕೊಡುಗೆ ಪ್ರಗತಿ: ರಾಯಚೂರ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ, ಪದವಿ ಪೂರ್ವ ಕಾಲೇಜುಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸುವ ಸಂಬಂಧ ಹಳೆಯ ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಇನ್ನೀತರ ದಾನಿಗಳಿಂದ ಹಣ ಸಂಗ್ರಹವಾಗಿದೆ. ನಮ್ಮ ಶಾಲೆ ನಮ್ಮ ಕೊಡುಗೆಯಡಿ ದೇವದುರ್ಗ ಬ್ಲಾಕಿನ 315 ಶಾಲೆಗಳ ಪೈಕಿ 155 ಶಾಲೆಗಳಿಂದ 19,74,000 ರೂ ಮೊತ್ತ ಸಂಗ್ರಹವಾಗಿದೆ. ಲಿಂಗಸುಗೂರು ಬ್ಲಾಕಿನಲ್ಲಿ 364 ಶಾಲೆಗಳ ಪೈಕಿ 84 ಶಾಲೆಗಳಿಂದ ಒಟ್ಟು 68,34,750 ರೂ., ಮಾನ್ವಿ ಬ್ಲಾಕಿನಲ್ಲಿ 317 ಶಾಲೆಗಳ ಪೈಕಿ 38 ಶಾಲೆಗಳಿಂದ 9,76,922 ರೂ., ರಾಯಚೂರು ಬ್ಲಾಕಿನ 314 ಶಾಲೆಗಳ ಪೈಕಿ 37 ಶಾಲೆಗಳಿಂದ 7,18,000 ರೂ ಹಾಗೂ ಸಿಂಧನೂರು ಬ್ಲಾಕಿನ 338 ಶಾಲೆಗಳ ಪೈಕಿ 141 ಶಾಲೆಗಳಿಂದ 16,59,804 ರೂ ಸೇರಿದಂತೆ ಜಿಲ್ಲೆಯಲ್ಲಿನ ಒಟ್ಟು 1684 ಶಾಲೆಗಳ ಪೈಕಿ 455 ಶಾಲೆಗಳಿಂದ 1,21,63,476 ರೂ. ಸಂಗ್ರಹವಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

ಮಕ್ಕಳ ದಾಖಲಾತಿ ಹೆಚ್ಚಿಸುವಲ್ಲಿ ಪೂರಕ: ರಾಯಚೂರು ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ 2024-25ನೇ ಸಾಲಿನಲ್ಲಿ 1 ರಿಂದ 10ನೇ ತರಗತಿವರೆಗೆ ಒಟ್ಟು 2,51,000 ಮಕ್ಕಳು ಪ್ರವೇಶ ಪಡೆದುಕೊಂಡಿದ್ದರು. 2025-26ನೇ ಸಾಲಿನಲ್ಲಿ ಈ ಸಂಖ್ಯೆಯನ್ನು ಹೆಚ್ಚಳ ಮಾಡಬೇಕು ಎನ್ನವುದು ನಮ್ಮ ಉದ್ದೇಶವಾಗಿದೆ. ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಕಾರ್ಯಕ್ರಮವು ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣವನ್ನು ಹೆಚ್ಚಿಸುವುಲ್ಲಿ ಪೂರಕವಾಗಿದೆ ಎನ್ನುತ್ತಾರೆ ರಾಯಚೂರು ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಕೆ.ಡಿ.ಬಡಿಗೇರ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande