ಬಳ್ಳಾರಿ, 1 ಜೂನ್ (ಹಿ.ಸ.)
ಆ್ಯಂಕರ್:
ಬಳ್ಳಾರಿಯಲ್ಲಿರುವ ಸೆಂಟ್ರಲ್ ಜೈಲ್ನಲ್ಲಿ ಹೊಸದಾಗಿ ಅಳವಡಿಸಿರುವ ಮೊಬೈಲ್ ಜಾಮರ್ನಿಂದಾಗಿ ಸೆಂಟ್ರಲ್ ಜೈಲ್ ಸುತ್ತಲಿನ ನಿವಾಸಿಗಳಿಗ ಮೊಬೈಲ್ ಸಂವಹನದಲ್ಲಿ (ನೆಟ್ವರ್ಕ್) ಸಾಕಷ್ಟು ಸಮಸ್ಯೆಯಾಗಿದ್ದು, ಈ ಸಮಸ್ಯೆಯನ್ನು ತಕ್ಷಣವೇ ಪರಿಹರಿಸಬೇಕು ಎಂದು ಬಿಜೆಪಿ ನೇತೃತ್ವದಲ್ಲಿ ಸ್ಥಳೀಯ ನಿವಾಸಿಗಳು ಭಾನುವಾರ ಪ್ರತಿಭಟನೆ ನಡೆಸಿದ್ದಾರೆ.
ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿ, ಪಕ್ಷದ ಜಿಲ್ಲಾ ಅಧ್ಯಕ್ಷ ಅನಿಲ್ ನಾಯ್ಡು ಮೋಕ, ಪಾಲಿಕೆ ಸದಸ್ಯ ಹನುಮಂತ ಗುಡಿಗಂಟಿ, ಕೆ. ಹನುಂಮತಪ್ಪ ಅವರ ನೇತೃತ್ವದಲ್ಲಿ ನಗರದ ಅಧಿದೇವತೆ ಕನಕದುರ್ಗಮ್ಮ ದೇವಸ್ಥಾನದ ಸರ್ಕಲ್ನಲ್ಲಿ ಪ್ರತಿಭಟನೆ ನಡೆಸಿದ ಸ್ಥಳೀಯ ನಿವಾಸಿಗಳು, ಸೆಂಟ್ರಲ್ ಜೈಲ್ನ ಉಪ ಅಧೀಕ್ಷಕರಿಗೆ ಮನವಿ ಸಲ್ಲಿಸಿ, ತಕ್ಷಣವೇ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಗೆ ಪರಿಹಾರ ಪಡೆಯಬೇಕು ಎಂದು ಆಗ್ರಹಿಸಿದರು.
ಸೆಂಟ್ರಲ್ ಜೈಲಿನ ಸುತ್ತಲೂ ನಿವಾಸಿಗಳು, ವಿದ್ಯಾರ್ಥಿಗಳು, ವ್ಯಾಪಾರ - ವಹಿವಾಟುಗಳು ಮತ್ತು ಬ್ಯಾಂಕ್ಗಳಿವೆ. ಸೆಂಟ್ರಲ್ ಜೈಲಿನಲ್ಲಿ ಅಳವಡಿಸಿರುವ ಜಾಮರ್ನಿಂದಾಗಿ ನಿವಾಸಿಗಳ ಸಂವಹನದ ಜೊತೆಯಲ್ಲಿ ವ್ಯವಹಾರ - ವಹಿವಾಟು ಮತ್ತು ಬ್ಯಾಂಕಿಂಗ್ ಚಟುವಟಿಕೆಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಪ್ರತಿಭಟನಾಕಾರರು ಮನವಿಯಲ್ಲಿ ಸಮಸ್ಯೆಯನ್ನು ವಿವರಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್