ಬಳ್ಳಾರಿ, 1 ಜೂನ್ (ಹಿ.ಸ.)
ಆ್ಯಂಕರ್: ಸಾಧನೆಗೆ ಸಿಗುವ ಅತಿ ಸಣ್ಣ ಅವಕಾಶವನ್ನೂ - ಸಹಕಾರವನ್ನು ಸದ್ಭಳಕೆ ಮಾಡಿಕೊಂಡು ಉತ್ತಮವಾದುದ್ದನ್ನು ಸಾಧನೆ ಮಾಡಿರಿ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವ ಎಸ್.ಎನ್. ರುದ್ರೇಶ್ ಅವರು ಕರೆ ನೀಡಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬಳ್ಳಾರಿ ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪಾಸಾಗಿದ್ದ ಮಕ್ಕಳಿಗಾಗಿ ಪತ್ರಿಕಾ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರಲ್ಲಿಯ ಅಸಾಮಾನ್ಯ ಪ್ರತಿಭೆಯನ್ನು ಗುರುತಿಸಿದ್ದ ಮಹಾರಾಜ ಪೇಶ್ವೆ ಅವರು ಅವರನ್ನು ವಿದೇಶಕ್ಕೆ ಕಳುಹಿಸಲು ಮಾಡಿದ ಸಹಾಯ, ಅಂಬೇಡ್ಕರ್ ಅವರನ್ನು ವಿಶ್ವಮಾನ್ಯ ಮಾಡಿತು. ಶ್ರೀಮಂತರು ನೀಡಿದ್ದ 2 ಸಾವಿರ ರೂಪಾಯಿ ಸಾಲ, ಸ್ಪರ್ಧೆಯಲ್ಲಿ ಪಡೆದ 2 ಸಾವಿರ ರುಪಾಯಿ ಬಹುಮಾನ ನನ್ನ ಸಾಧನೆಯ ಹಾದಿಯ ದಿಕ್ಕನ್ನೇ ಬದಲಾಯಿಸಿ, ಇಂದು ನಿಮ್ಮ ಮುಂದೆ ನಿಲ್ಲುವಷ್ಟು ಪ್ರೋತ್ಸಾಹಿಸಿದೆ. ಸಾಧನೆಗೆ ಸಿಗುವ ಪ್ರತಿ ಅವಕಾಶವೂ ದೊಡ್ಡದೇ ಎಂದು ಎಲ್ಲರೂ ಪರಿಗಣಿಸಬೇಕು ಎಂದರು.
ಜೆ.ಕೆ. ಟ್ರಸ್ಟ್ಮ ಮುಖ್ಯಸ್ಥ ಜೋಳದರಾಶಿ ತಿಮ್ಮಪ್ಪ ಅವರು, `ದುಡ್ಡೇ ದೊಡ್ಡಪ್ಪ, ವಿದ್ಯೆ ಅವರಪ್ಪ' ಎನ್ನುವ ಗಾದೆಯನ್ನು ಪ್ರತಿಯೊಬ್ಬರೂ ನೆನಪಿಕೊಳ್ಳುತ್ತಿರಬೇಕು. ವಿದ್ಯೆ - ಜ್ಞಾನ ಮತ್ತು ಸರಳತೆಗಳನ್ನು ಯಾರೊಬ್ಬರೂ ಕದಿಯಲು ಸಾಧ್ಯವಿಲ್ಲ. ಕಾರಣ ಪ್ರತಿಯೊಬ್ಬರೂ ವಿದ್ಯಾವಂತರು - ಜ್ಞಾನವಂತರು ಆಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎನ್. ವೀರಭದ್ರಗೌಡ ಅವರು, ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರ ಮಕ್ಕಳನ್ನು ಪ್ರೋತ್ಸಾಹಿಸಲಿಕ್ಕಾಗಿಯೇ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಿಂದ ವಿದ್ಯಾರ್ಥಿಗಳು ಪ್ರೋತ್ಸಾಹಗೊಂಡಲ್ಲಿ ಸಾಧನೆ ಖಂಡಿತವಾಗಿಯೂ ಮೂಡುತ್ತದೆ ಎಂದರು.
ಪತ್ರಕರ್ತರ ಸಂಘದ ಅಡಾಕ್ ಸಮಿತಿ ಸದಸ್ಯ ಕೆ. ಮಲ್ಲಯ್ಯ ಅವರು ವೇದಿಕೆಯಲ್ಲಿದ್ದರು.
ವಿದ್ಯಾರ್ಥಿಗಳಾದ ಪಿ. ದಿವ್ಯಾಶ್ರೀ, ಕೆ.ಎಂ. ಕಾಂಚನಾ, ನಾಗಾಂಬಿಕ .ಹೆಚ್.ಎಂ., ಪಿ. ಅಸ್ಮಿತ ಚೌದರಿ, ಸಂಡೂರಿನ ಕಾರ್ತಿಕ್ ಬಿ, ಸಂಜನಾ .ಬಿ.ಬಿ, ಬಿ. ಹೇಮಂತಕುಮಾರ್, ಎಂ. ಯಶವಂತಕುಮಾರ್, ಕೆ. ಸಹನಾ ತೆಕ್ಕಲಕೋಟೆ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ - ಅಭಿನಂದನೆಗಳನ್ನು ಸಲ್ಲಿಸಲಾಯಿತು.
ಪತ್ರಕರ್ತರ ಸಂಘದ ಅಡಾಕ್ ಸಮಿತಿ ಸದಸ್ಯ ವೆಂಕೋಬಿ ಸಂಗನಕಲ್ಲು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.
ಸಂಘದ ಸದಸ್ಯ ಪತ್ರಕರ್ತರು, ವಿದ್ಯಾರ್ಥಿಗಳ ಪಾಲಕರು ಪಾಲ್ಗೊಂಡಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್