ರಾಯಚೂರು, 30 ಮೇ (ಹಿ.ಸ.) :
ಆ್ಯಂಕರ್ : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 2025-26ನೇ ಸಾಲಿಗೆ ಹಿಂದುಳಿದ ವರ್ಗಗಳಿಗೆ ಸೇರಿದ ಪ್ರವರ್ಗ-1, 2ಎ, 3ಎ, ಮತ್ತು 3ಬಿ ವರ್ಗಕ್ಕೆ ಸೇರಿದ ಕಾನೂನು ಪದವೀಧರರಿಗೆ ತರಬೇತಿ ಭತ್ಯೆಗೆ ಆಯ್ಕೆ ಮಾಡಲು ಆಫ್ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಷರತ್ತುಗಳು ಮತ್ತು ನಿಬಂಧನೆಗಳು: ರಾಯಚೂರು ಜಿಲ್ಲೆಯ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು, ತರಬೇತಿಯ ಅವಧಿಯಲ್ಲಿ ಮಾಹೆಯಾನ 4,000 ರೂ.ಗಳ ತರಬೇತಿ ಭತ್ಯೆ ನೀಡಲಾಗುವುದು, ಅಭ್ಯರ್ಥಿಗಳ ವಾರ್ಷಿಕ ಕುಟುಂಬದ ಆದಾಯ ಪ್ರವರ್ಗ-1ಕ್ಕೆ 3.50 ಲಕ್ಷ ರೂ. ಹಾಗೂ ಪ್ರವರ್ಗ 2ಎ, 3ಎ, 3ಬಿ ವರ್ಗಕ್ಕೆ 2.50 ಲಕ್ಷ ರೂ. ಮೀರಬಾರದು.
ತರಬೇತಿಗೆ ಅರ್ಜಿಯನ್ನು ಸಲ್ಲಿಸಲು ನಿಗಧಿಪಡಿಸಿರುವ ಕೊನೆಯ ದಿನಾಂಕಕ್ಕೆ ಹಿಂದೆ 2 ವರ್ಷದೊಳಗಾಗಿ ಕಾನೂನು ಪದವೀ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಪ್ರವರ್ಗ-1ರ ಅಭ್ಯರ್ಥಿಗಳಿಗೆ 40 ವರ್ಷಗಳು ಮತ್ತು ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕಕ್ಕೆ 38 ವರ್ಷ ವಯೋಮಿತಿಯಲ್ಲಿರಬೇಕು. ನಿಗದಿತ ಅರ್ಜಿ ನಮೂನೆಯಲ್ಲಿ ಅವಶ್ಯಕ ದಾಖಲೆಗಳು ಹಾಗೂ 2 ಭಾವಚಿತ್ರಗಳೊಂದಿಗೆ ಅರ್ಜಿ ನಮೂನೆಯನ್ನು ಕಚೇರಿ ವೇಳೆಯಲ್ಲಿ ಪಡೆದು, ಅರ್ಜಿಯನ್ನು ಜೂನ್ 18ರೊಳಗಾಗಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:08532-295996 ಅಥವಾ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜಿಲ್ಲಾಡಳಿತ ಭವನ ಮೊದಲನೇ ಮಹಡಿ ಬಿ-2 ಕೊಠಡಿ ಯಕ್ಲಾಸಪೂರ ರಸ್ತೆ ರಾಯಚೂರು ಇಲ್ಲಿಗೆ ಸಂಪರ್ಕಿಸಬಹುದಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್