ರಾಯಚೂರು, 29 ಮೇ (ಹಿ.ಸ.) :
ಆ್ಯಂಕರ್ : ಮುಂಗಾರು ಹಂಗಾಮಿನ 2025-26ನೇ ಸಾಲಿನಲ್ಲಿ ಮಹಾರಾಷ್ಟ ರಾಜ್ಯದಲ್ಲಿ ಜಾಸ್ತಿ ಮಳೆಯಾಗಿರುವುದರಿಂದ ಸೊನ್ನ ಬ್ಯಾರಜದಿಂದ ಭೀಮಾ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಬಿಡುತ್ತಿರುವುದರಿಂದ ಕೃಷ್ಣಾ ನದಿಗೆ ಅತೀ ಹೆಚ್ಚಿನ ಪ್ರಮಾಣದಲ್ಲಿ ಒಳ ಹರಿವು ಹೆಚ್ಚಾಗಿದ್ದು, ರಾಯಚೂರು ತಾಲೂಕಿನ ಕೃಷ್ಣಾ ನದಿ ಪಾತ್ರದ ಗ್ರಾಮಗಳ ಸಾರ್ವಜನಿಕರು ಅಗತ್ಯ ಎಚ್ಚರ ವಹಿಸುವಂತೆ ರಾಯಚೂರು ತಹಶೀಲ್ದಾರ್ ಸುರೇಶ್ ವರ್ಮ ಅವರು ತಿಳಿಸಿದ್ದಾರೆ.
ಕೃಷ್ಣ ನದಿಗೆ ನೀರು ಬಿಡುವ ಸಾಧ್ಯತೆ ಹೆಚ್ಚಾಗಿರುವುದರಿಂದ ರಾಯಚೂರು ತಾಲೂಕಿನ ಕೃಷ್ಣಾ ನದಿ ಪಾತ್ರದ ಗ್ರಾಮಗಳಾದ ಬುರ್ದಿಪಾಡ, ಗುರ್ಜಾಪೂರು, ಕೊರ್ತಕುಂದಾ, ಕುರ್ವಕುಲಾ, ಅಗ್ರಹಾರ, ಕುರ್ವಕುರ್ದಾ, ಅತ್ತೂರು, ದೇವಸೂಗೂರು, ಗಂಜಳ್ಳಿ, ಕಾಡೂರು, ಕರೆಕಲ್, ಡಿ.ರಾಂಪೂರು, ಅರಷಣಗಿ, ಮಾಮಡದೊಡ್ಡಿ, ಮಂಗಿಗಡ್ಡ, ರಾಲದೊಡ್ಡಿ, ಕೊರ್ವಿಹಾಳ ಗ್ರಾಮಗಳ ಗ್ರಾಮಸ್ಥರು ಯಾವುದೇ ಕಾರಣಕ್ಕೂ ನದಿಯ ಪಾತ್ರಕ್ಕೆ ತೆರಳಬಾರದು. ಅಲ್ಲದೆ ಸಾವರ್ಜನಿಕರು ತಮ್ಮ ದನ-ಕರುಗಳನ್ನು ನದಿಗೆ ತೆರಳದಂತೆ ನೋಡಿಕೊಳ್ಳುವುದು. ರಭಸವಾಗಿ ಬರುವ ನೀರಿನ ಜೊತೆಗೆ ಮೊಸಳೆಗಳು ಬರುವುದರಿಂದ ಪ್ರಾಣ ಹಾನಿಯಾಗುವ ಸಾಧ್ಯತೆ ಇರುವುದರಿಂದ ಎಚ್ಚರ ವಹಿಸಬೇಕು.
ರೈತರು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಅಳವಡಿಸಿರುವ ಪಂಪಸೆಟ್ಗಳನ್ನು ಯಾವುದೇ ಅಹಿತಕರ ಘಟನೆಗಳು ಜರಗದಂತೆ ನದಿ ಪಾತ್ರದಿಂದ ಹೊರತೆಗೆಯುವುದು. ರೈತರು ಯಾವುದೇ ಸಾವು-ನೋವುಗಳು ಸಂಭವಿಸದಂತೆ ಪ್ರವಾಹದ ಮುನ್ಸೂಚನೆಯಂತೆ ಕ್ರಮ ಕೈಗೊಳ್ಳಬೇಕು.
ಕೃಷ್ಣಾ ನದಿಪಾತ್ರದ ನಡುಗಡ್ಡೆಗಳಾದ ಕುರ್ವಕುರ್ದಾ ಮತ್ತು ನಾರಗಡ್ಡೆ ಗ್ರಾಮದ ಸಾರ್ವಜನಿಕರು ಪ್ರವಾಹದ ಸಂದರ್ಭದಲ್ಲಿ ರಸ್ತೆ ಸಂಪರ್ಕ, ದೂರವಾಣಿ ಸಂಪರ್ಕ ಕಡಿತಗೊಳ್ಳುವುದರಿಂದ ಜೀವಹಾನಿ, ಪ್ರಾಣಹಾನಿ ಆಗದಂತೆ ಮುಂಜಾಗ್ರತ ಕ್ರಮವಾಗಿ ಆಹಾರ, ಔಷಧಿ, ಸಾಮಗ್ರಿಗಳನ್ನು ಶೇಖರಣೆ ಮಾಡಿಕೊಳ್ಳಬೇಕು. ಹಾಗೂ ವಯೋವೃದ್ಧರು, ದೀರ್ಘ ಕಾಯಿಲೆಯಿಂದ ಬಳುತ್ತಿರುವವರು ವಯಸ್ಕರು ಮತ್ತು ಮಕ್ಕಳು, ಗರ್ಭೀಣಿಯರು ಸುರಕ್ಷಿತವಾದ ಸ್ಥಳಗಳಿಗೆ ತೆರಳಬೇಕು ಎಂದು ರಾಯಚೂರು ತಹಶೀಲ್ದಾರರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್