ಬೆಂಗಳೂರು, 29 ಮೇ (ಹಿ.ಸ.) :
ಆ್ಯಂಕರ್ : ಹುಬ್ಬಳ್ಳಿ ಗಲಭೆ ಪ್ರಕರಣದ ಆರೋಪಿಗಳನ್ನು ಒಳಗೊಂಡಂತೆ ವಿವಿಧ ಪ್ರಮುಖರ ವಿರುದ್ಧದ 43 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ಕರ್ನಾಟಕ ಸರ್ಕಾರ ಜಾರಿಗೊಳಿಸಿದ್ದ ಆದೇಶವನ್ನು ಉಚ್ಚ ನ್ಯಾಯಾಲಯ ರದ್ದುಗೊಳಿಸಿದೆ.
ನ್ಯಾಯಾಲಯದ ಈ ಆದೇಶ ಸರ್ಕಾರಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ.
ಸರಕಾರದ ಕ್ರಮ ಪ್ರಶ್ನಿಸಿ ನ್ಯಾಯವಾದಿ ಗಿರೀಶ್ ಭಾರದ್ವಾಜ್ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠ, ಸರ್ಕಾರದ ಕ್ರಮವನ್ನು ಆಳವಾಗಿ ಪರಿಶೀಲನೆ ನಡೆಸಿ, ಪ್ರಕರಣಗಳನ್ನು ಹಿಂಪಡೆಯುವ ಕ್ರಮವು ಕಾನೂನು ಬಾಹಿರ ಎಂದು ತೀರ್ಪು ನೀಡಿದೆ.
2020-21ರಲ್ಲಿ ನಡೆದ ಕೆಲ ಗಂಭೀರ ಗಲಭೆ ಪ್ರಕರಣಗಳು ಹಾಗೂ ಭಯೋತ್ಪಾದನೆ ಶಂಕೆ ಇರುವ ಚಟುವಟಿಕೆಗಳನ್ನು ಒಳಗೊಂಡ 43 ಪ್ರಕರಣಗಳನ್ನು ಸರ್ಕಾರ ಹಿಂದಕ್ಕೆ ತೆಗೆದುಕೊಂಡಿತ್ತು. ಈ ಕ್ರಮ ರಾಜಕೀಯ ಪ್ರಭಾವಿತರ ಪರವಾಗಿ ತೆಗೆದುಕೊಳ್ಳಲಾಗಿದೆ ಎಂಬ ಆರೋಪಗಳ ನಡುವೆಯೇ, ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.
“ಕಾನೂನು ಪ್ರಕ್ರಿಯೆಯ ಪ್ರಾಮಾಣಿಕತೆಗೆ ಧಕ್ಕೆ ತರುವ ಕ್ರಮಗಳು ನ್ಯಾಯಾಲಯದಿಂದ ಪರಿಶೀಲನೆಗೊಳಪಡುವುದು ಅನಿವಾರ್ಯ. ಕ್ರಿಮಿನಲ್ ಪ್ರಕರಣಗಳು ಜನ ಸಾಮಾನ್ಯರ ಭದ್ರತೆಗೆ ಸಂಬಂಧಿಸಿದಿರುವುದರಿಂದ ಇಂತಹ ಹಿಂಪಡೆದುಕೊಳ್ಳುವ ಕ್ರಮಗಳು ಗಂಭೀರವಾಗಿ ಪರಿಗಣಿಸಲ್ಪಡಬೇಕು,” ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.
ಈ ತೀರ್ಪಿನಿಂದ ರಾಜ್ಯ ಸರ್ಕಾರಕ್ಕೆ ಕಾನೂನು ಹಾಗೂ ರಾಜಕೀಯವಾಗಿ ಹಿನ್ನಡೆಯಾಗಿದ್ದು. ಇತ್ತೀಚೆಗಿನ ದಿನಗಳಲ್ಲಿ ಕಾನೂನು ಹಾಗೂ ಆಡಳಿತಾತ್ಮಕ ಜವಾಬ್ದಾರಿತನದ ಬಗ್ಗೆ ಸರ್ಕಾರ ಎದುರಿಸುತ್ತಿರುವ ಟೀಕೆಗೆ ಮತ್ತೊಂದು ಕಾನೂನು ಸ್ಪಷ್ಟನೆ ಎಂಬಂತಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa