ಗದಗ, 29 ಮೇ (ಹಿ.ಸ.) :
ಆ್ಯಂಕರ್ : ಮುಂಗಾರು ಮಳೆಯು ಭರ್ಜರಿಯಾಗಿ ಎಂಟ್ರಿಯಾಗಿರುವ ಈ ಹೊತ್ತಿನಲ್ಲಿ, ಕೃಷಿಕರು ತಮ್ಮ ಜಮೀನುಗಳನ್ನು ಬಿತ್ತನೆಗೆ ಸಿದ್ಧಪಡಿಸುತ್ತಿದ್ದು, ಬಿತ್ತನೆ ಬೀಜಗಳ ಖರೀದಿಯಲ್ಲಿ ತೊಡಗಿದ್ದಾರೆ. ಆದರೆ ಈ ಸಂದರ್ಭದಲ್ಲಿ ರೈತ ಸಂಪರ್ಕ ಕೇಂದ್ರಗಳಿಂದ ವಿತರಣೆ ಮಾಡಲಾಗುತ್ತಿರುವ ಹೆಸರು ಬಿತ್ತನೆ ಬೀಜಗಳ ಗುಣಮಟ್ಟ ಕಳಪೆ ಆಗಿರುವುದು ರೈತರಲ್ಲಿ ತೀವ್ರ ಆಕ್ರೋಶವನ್ನು ಹುಟ್ಟಿಸಿದೆ.
ರೈತರ ಆಕ್ಷೇಪದ ಪ್ರಕಾರ, ಗದಗ ಎಪಿಎಂಸಿ ಬಳಿ ಇರುವ ರೈತ ಸಂಪರ್ಕ ಕೇಂದ್ರದಲ್ಲಿ ನೀಡಲಾಗುತ್ತಿರುವ ಹೆಸರು ಬೀಜಗಳನ್ನು ಹುಳುಗಳಿಂದ ತಿಂದು ಹಾನಿಯಾಗಿರುವುದನ್ನು ಕಾಣಬಹುದು. ಈ ಬೀಜಗಳನ್ನು ಬಿತ್ತಿದರೆ ಸರಿಯಾದ ಫಸಲು ಬರೋದಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿತ್ತನೆ ಮಾಡಲು ನಾವು ಸಾಲ ಮಾಡಿದ್ದೇವೆ. ಮಳೆ ಬಂತು ಅಂತ ತಕ್ಷಣವೇ ಬಿತ್ತನೆ ಆರಂಭಿಸುತ್ತಿದ್ದೇವೆ. ಆದರೆ ಈ ಬೀಜಗಳಲ್ಲಿ ಕಳಪೆ ಇದ್ದರೆ ನಾವು ಎಂಥ ಫಲಿತಾಂಶ ನಿರೀಕ್ಷಿಸಬೇಕು? ಎಂದು ಲಕ್ಷ್ಮವ್ವ ಎಂಬ ರೈತ ಮಹಿಳೆ ಪ್ರಶ್ನಿಸುತ್ತಾರೆ.
ಗದಗ ಜಿಲ್ಲೆಯ ನರಗುಂದ, ರೋಣ, ಮುಂಡರಗಿ, ಲಕ್ಷ್ಮೇಶ್ವರ, ಗಜೇಂದ್ರಗಡ ಸೇರಿ ಏಳು ತಾಲೂಕುಗಳಲ್ಲಿ ಹೆಚ್ವಿನ ಸಂಖ್ಯೆಯಲ್ಲಿ ರೈತರು ಹೆಸರು ಬೆಳೆಯನ್ನು ಬೆಳೆಯುತ್ತಾರೆ.
ಒಂದು ಎಕರೆ ಬಿತ್ತನೆಗೆ ಸುಮಾರು ₹35,000 ರಿಂದ ₹40,000 ವರೆಗೆ ಖರ್ಚು ಆಗುತ್ತದೆ. ಈ ಹಿನ್ನೆಲೆಯಲ್ಲಿ, ಕಳಪೆ ಬೀಜಗಳು ನೀಡುವುದು ರೈತರ ಮೇಲೆ ಆರ್ಥಿಕ ಭಾರವನ್ನೇ ಸೃಷ್ಟಿಸುತ್ತಿದೆ.
ಬೀಜ ನಿಗಮ ಮಂಡಳಿ ಈ ಬೀಜಗಳನ್ನು ಪರಿಶೀಲನೆ ನಡೆಸಿ ‘ಬಿತ್ತನೆಗೆ ಯೋಗ್ಯ’ ಎಂದು ಘೋಷಿಸಿರುವುದಾಗಿ ಕೃಷಿ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಪ್ರಾಯೋಗಿಕವಾಗಿ ಈ ಬೀಜಗಳು ಕಳಪೆಯಾಗಿರುವುದು ಸ್ಪಷ್ಟವಾಗುತ್ತಿರುವುದರಿಂದ, ರೈತರು ಈ ಹೇಳಿಕೆಯನ್ನು ನಿರಾಕರಿಸುತ್ತಿದ್ದಾರೆ.
ಇಂತಹ ಕಳಪೆ ಬೀಜಗಳಿಂದ ನಮಗೆ ನಷ್ಟ ಮಾತ್ರ. ಸರ್ಕಾರ ಕೂಡಲೇ ಈ ಸಮಸ್ಯೆಗೆ ಸ್ಪಂದಿಸಬೇಕು. ಗುಣಮಟ್ಟದ ಬಿತ್ತನೆ ಬೀಜಗಳನ್ನು ವಿತರಿಸದಿದ್ದರೆ, ಹೋರಾಟ ಅನಿವಾರ್ಯ ಎಂದು ರೈತ ಶಂಕರಗೌಡ ಎಚ್ಚರಿಕೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / Lalita MP