ಸರ್ಕಾರದ ಸೌಲಭ್ಯ ಪಡೆದು, ಸ್ವಾವಲಂಬಿ ಜೀವನ ನಡೆಸಬೇಕು : ಮಹಾಂತೇಶ್
ಗದಗ, 28 ಮೇ (ಹಿ.ಸ.) : ಆ್ಯಂಕರ್ : ಭೂಮಿಯ ಮೇಲೆ ಜನಿಸಿರುವ ಮಾನವರ ಪೈಕಿ ಹಲವರು ಅಂಗವಿಕಲತೆಯಿಂದ ಬಳಲುತ್ತಿದ್ದಾರೆ. ಹಾಗೆಂದು ಅವರೆಲ್ಲರೂ ಕೈಕಟ್ಟಿ ಕುಳಿತಿಲ್ಲ. ಇತ್ತೀಚಿನ ಆಧುನಿಕ ಯುಗದಲ್ಲಿ ಹಲವಾರು ಕ್ಷೇತ್ರಗಳಲ್ಲಿ ತಮ್ಮದೇ ಆದ ವಿಶೇಷ, ವಿಭಿನ್ನ, ವಿಶಿಷ್ಟ ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಚಾರ
ಪೋಟೋ


ಗದಗ, 28 ಮೇ (ಹಿ.ಸ.) :

ಆ್ಯಂಕರ್ : ಭೂಮಿಯ ಮೇಲೆ ಜನಿಸಿರುವ ಮಾನವರ ಪೈಕಿ ಹಲವರು ಅಂಗವಿಕಲತೆಯಿಂದ ಬಳಲುತ್ತಿದ್ದಾರೆ. ಹಾಗೆಂದು ಅವರೆಲ್ಲರೂ ಕೈಕಟ್ಟಿ ಕುಳಿತಿಲ್ಲ. ಇತ್ತೀಚಿನ ಆಧುನಿಕ ಯುಗದಲ್ಲಿ ಹಲವಾರು ಕ್ಷೇತ್ರಗಳಲ್ಲಿ ತಮ್ಮದೇ ಆದ ವಿಶೇಷ, ವಿಭಿನ್ನ, ವಿಶಿಷ್ಟ ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಸರ್ಕಾರದಿಂದ ಬರುವ ಎಲ್ಲಾ ಅನುದಾನಗಳನ್ನು ಬಳಸಿಕೊಂಡು ಬೆಳೆಯುತ್ತಿದ್ದಾರೆ ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಮಹಾಂತೇಶ್ ಕೆ. ಹೇಳಿದರು.

ಗದಗ ನಗರದ ಕೆ.ಎಚ್‌. ಪಾಟೀಲ್ ಸಭಾಭವನದಲ್ಲಿ ಫೌಂಡೇಷನ್, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕೌಶಲ್ಯಾಭಿವೃದ್ಧಿ ಇಲಾಖೆ, ಬರ್ಡ್ಸ್, ದೀನಬಂಧು ಸೇರಿದಂತೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ವಿಶೇಷಚೇತನರ ಸೌರ ಸ್ವ-ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸೌರ ಸ್ವ-ಉದ್ಯೋಗ ಮೇಳಕ್ಕೆ ನಮ್ಮ ಇಲಾಖೆಯಿಂದ ಎಲ್ಲ ರೀತಿಯ ಸಹಾಯ, ಸಹಕಾರ ಮಾಡುತ್ತೇವೆ. ವಿಶೇಷಚೇತನರು ಸಮಾಜದಲ್ಲಿ ಎಲ್ಲರಂತೆ ಬದುಕಬೇಕು ಎನ್ನುವ ಹಂಬಲದಲ್ಲಿ ಇರುತ್ತಾರೆ. ಆದರೆ, ಅವರಿಗೆ ಆರ್ಥಿಕ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆಗಳು ಕಾಡುತ್ತಿರುತ್ತವೆ. ಅಂತವರನ್ನು ಗುರುತಿಸಿ ಸಹಕಾರ ನೀಡಿ ಸ್ವಯಂ ಉದ್ಯೋಗಿಗಳಾಗುವಂತೆ ಪ್ರೇರೇಪಿಸುತ್ತೇವೆ ಎಂದು ಭರವಸೆ ನೀಡಿದರು.

ವಿಶೇಷಚೇತನರ ಮೇಳದಲ್ಲಿ ಪ್ರಕಾಶ್ ಮೇಟಿ ಮಾತನಾಡಿ, ಸೌರ ಸ್ವ-ಉದ್ಯೋಗ ಮೇಳವನ್ನು ದೇಶಾದ್ಯಂತ ಮಾಡಲಾಗುತ್ತಿದೆ. ಈಗಾಗಲೇ ಹಲವಾರು ವಿಶೇಷಚೇತನರು ಇದರ ಸದುಪಯೋಗ ಪಡೆದುಕೊಂಡು ಉದ್ಯೋಗ ನಡೆಸುತ್ತಿದ್ದಾರೆ. ಗದಗ ಜಿಲ್ಲೆಯಾದ್ಯಂತ ಸದ್ಯ 10 ವಿಶೇಷಚೇತನರು ಉದ್ಯೋಗ ಮಾಡುತ್ತಿದ್ದು, ಪ್ರಸಕ್ತ ವರ್ಷದಲ್ಲಿ 1500 ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ. ಈ ಕಾರ್ಯಕ್ರಮಕ್ಕೆ ಜಿಲ್ಲೆಯಾದ್ಯಂತ 450ಕ್ಕೂ ಹೆಚ್ಚು ಅಂಗವಿಕಲರು ಭಾಗವಹಿಸಿದ್ದಾರೆ. ಅವರೆಲ್ಲರ ಉದ್ಯೋಗಕ್ಕೆ ಬೆನ್ನೆಲುಬಾಗಿ ನಾವು ಸದಾ ನಿಲ್ಲುತ್ತೇವೆ ಎಂದರು.

ಸೋಲಾರ್ ಆಧರಿತ ವ್ಯವಸಾಯ ಯಂತ್ರಗಳು, ಪಶು ಸಂಗೋಪನಾ ಯಂತ್ರಗಳು, ಕಿರು ಉದ್ಯಮದ ಯಂತ್ರಗಳು, ಆಹಾರ ಉತ್ಪನ್ನ ಯಂತ್ರಗಳು, ರೊಟ್ಟಿ ತಯಾರಿಸುವ ಯಂತ್ರ, ರಾಠಿ ಯಂತ್ರಗಳು, ಹಪ್ಪಳ ತಯಾರಿಸುವ ಯಂತ್ರಗಳು ಸೇರಿದಂತೆ ವಿವಿಧ ಮಳಿಗೆಗಳು ನೋಡುಗರ ಗಮನ ಸೆಳೆದವು.

ಜಿ.ಪಂ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ ಮಾತನಾಡಿ, ಅಂಗವಿಕಲರಿಗೆ ಜಿಲ್ಲಾಡಳಿತದಿಂದ ಅನೇಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಎಲ್ಲವನ್ನೂ ಸದುಪಯೋಗಪಡಿಸಿಕೊಂಡು ಸಮಾಜದಲ್ಲಿ ಎಲ್ಲರಂತೆ ಅವರು ಬದುಕಬೇಕು. ಸೌರ ಸ್ವ ಉದ್ಯೋಗ ಮೇಳವನ್ನು ಗದಗ ನಗರದಲ್ಲಿ ಆಯೋಜನೆ ಮಾಡಿದ್ದು, ಅತ್ಯಂತ ಖುಷಿಯ ವಿಚಾರವಾಗಿದೆ ಎಂದರು.

ಈ ವೇಳೆ ಮಾಂತೇಶ ಅಗಸಿಮುಂದಿನ, ದೀನಬಂಧು ಸಂಸ್ಥಾಪಕ ಹರ್ಷ ಮೊಳೆಕರ, ವೀರೇಂದ್ರ ಸಿಂಗ್, ಎಸ್.ಎಫ್. ದ್ಯಾವನಗೌಡ್ರ, ಈರಯ್ಯ ಹೀರೇಮಠ, ಬಸವರಾಜ ನರೇಗಲ್, ಶೋಭಾ ಸಾಲಿಮಠ, ವರದಾ ಕುಲಕರ, ಶಶಿಧರ್ ಪಾಟೀಲ, ವೀರೇಶ್ ತಡಹಾಳ, ಸನಂದನ್ ಕುಲಕರ್ಣಿ, ಮಮತಾ ನಾಯ್ಡು, ಸಿದ್ದನಗೌಡ ಪಾಟೀಲ, ವಿಶ್ವನಾಥ ಜಮಾದಾರ್ ಮುಂತಾದವರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande