18 Jun 2025, 16:03 HRS IST

ಕುವೆಂಪು ಅವರ ಸಾಹಿತ್ಯದಲ್ಲಿ ವೈಚಾರಿಕತೆ - ಪ್ರಜಾಪ್ರಭುತ್ವವಿದೆ
ಬಳ್ಳಾರಿ, 28 ಮೇ (ಹಿ.ಸ.) ಆ್ಯಂಕರ್: ವಿಜ್ಞಾನ ಹಾಗೂ ಧರ್ಮ ಕುವೆಂಪು ಅವರ ಸಾಹಿತ್ಯದ ವೈಚಾರಿಕತೆಗೆ ಸಾಕ್ಷಿ ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸಿ. ಕೊಟ್ರೇಶ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯ
ಕುವೆಂಪು ಅವರ ಸಾಹಿತ್ಯದಲ್ಲಿ ವೈಚಾರಿಕತೆ - ಪ್ರಜಾಪ್ರಭುತ್ವವಿದೆ


ಬಳ್ಳಾರಿ, 28 ಮೇ (ಹಿ.ಸ.)

ಆ್ಯಂಕರ್: ವಿಜ್ಞಾನ ಹಾಗೂ ಧರ್ಮ ಕುವೆಂಪು ಅವರ ಸಾಹಿತ್ಯದ ವೈಚಾರಿಕತೆಗೆ ಸಾಕ್ಷಿ ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸಿ. ಕೊಟ್ರೇಶ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬಳ್ಳಾರಿ ಜಿಲ್ಲಾ ಘಟಕ ಹಾಗೂ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಕನ್ನಡ ಅಧ್ಯಯನ ವಿಭಾಗದ ಸಂಯುಕ್ತ ಆಶ್ರಯದಲ್ಲಿ ‘ದಿ. ಕೆ. ವಿ. ತಿರುಪಾಲಪ್ಪ ಸ್ಮಾರಕ ದತ್ತಿ ಕಾರ್ಯಕ್ರಮ’ದಡಿಯಲ್ಲಿ ‘ಕುವೆಂಪು ಸಾಹಿತ್ಯದಲ್ಲಿ ವೈಚಾರಿಕತೆ’ ಉಪನ್ಯಾಸವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕುವೆಂಪು ಅವರ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಸರ್ವೋದಯ ತತ್ವವಿದೆ. ಕುವೆಂಪು ಅವರು ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿ ಹಿಡಿಯುವದರ ಮೂಲಕ ಸಮನ್ವಯ ಮತ್ತು ಪೂರ್ಣದೃಷ್ಠಿಯ ಹರಿಕಾರರಾಗಿದ್ದಾರೆ. ಕುವೆಂಪು ಅವರ ವೈಚಾರಿಕತೆ ಮತ್ತು ವೈಜ್ಞಾನಿಕ ದೃಷ್ಠಿಕೋನವನ್ನು ಎಲ್ಲರೂ ಅನುಸರಿಸಬೇಕು ಎಂದರು.

ಕುವೆಂಪು ಅವರು ವೈದಿಕತೆ, ವಸಾಹತುಶಾಹಿ, ರಾಜಪ್ರಭುತ್ವ, ಜಾತೀಯತೆ, ಮತಾಂಧತೆ, ಮೌಢ್ಯತೆಯ ವಿರುದ್ದ ನಿರಂತರ ಹೋರಾಟ ಮಾಡಿದರು. `ಮುನುಜು ಮತ ವಿಶ್ವ ಪಥ’ದ ಮೂಲಕ ಸರ್ವೋದಯ ಪೂರ್ಣ ದೃಷ್ಟಿ ಸಮನ್ವಯತೆ ಕುವೆಂಪು ಅವರ ಸಾಹಿತ್ಯದ ಮೂಲಕ ಕೊಟ್ಟ ದರ್ಶನಗಳಾಗಿವೆ. ಇವುಗಳನ್ನು ಅರಗಿಸಿಕೊಂಡು ಬೆಳೆದಷ್ಟು ಕನ್ನಡ ಸಾಹಿತ್ಯ ಹೆಚ್ಚು ಶ್ರೀಮಂತವಾಗುತ್ತದೆ ಎಂದು ಹೇಳಿದರು.

ವಿಶ್ವವಿದ್ಯಾಲಯದ ಅಕ್ಯಾಡೆಮಿಕ್ ಕೌನ್ಸಿಲ್‍ನ ಮಾಜಿ ಸದಸ್ಯ ವೆಂಕಟೇಶ ಹೆಗಡೆ ಅವರು, ಬಳ್ಳಾರಿ ಜಿಲ್ಲೆಯು ಹಲವಾರು ಫ್ರಭಾವಿ ನಾಯಕರಿಗೆ ಜನ್ಮನೀಡಿದೆ. ಮಾಜಿ ಸಂಸದ ಕೆ.ಸಿ. ಕೊಂಡಯ್ಯ ಅವರು ಸೋನಿಯಾಗಾಂಧಿ ಅವರನ್ನು ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಕರೆತರುವ ಮೂಲಕ ಹೊಸ ಇತಿಹಾಸವನ್ನೇ ಸೃಷ್ಠಿಸಿದರು ಎಂದರು.

ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ ಅವರು, ಕನ್ನಡ ಸಾಹಿತ್ಯ ಪರಿಷತ್ತು ಸುದೀರ್ಘವಾದ ಇತಿಹಾಸವನ್ನು ಹೊಂದಿದೆ. ಅಖಿಲ ಭಾರತ ಸಮ್ಮೇಳನದ ಯಶಸ್ವಿಯ ಪೂರ್ವಭಾವಿಯಾಗಿ ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ. ಮುನಿರಾಜು ಅವರು, ಕುವೆಂಪು ಅವರು ಯಾವುದೇ ಅಧಿಕಾರ ಸ್ಥಾನಮಾನಕ್ಕೆ ಆಸೆ ಪಟ್ಟಿರಲಿಲ್ಲ. ಹೈದರಾಬಾದ್ ಕರ್ನಾಟಕದಲ್ಲಿ ಪೋಷಕರು - ಮಕ್ಕಳ ಶಿಕ್ಷಣಕ್ಕೆ ಮಹತ್ವ ನೀಡಬೇಕು. ಮುಂಬರುವ ದಿನಗಳಲ್ಲಿ ದಿ. ಕೆ. ವಿ. ತಿರುಪಾಲಪ್ಪ ಸ್ಮಾರಕ ಕನ್ನಡ ಭವನ ನಿರ್ಮಾಣ ಮಾಡುವುದಾಗಿ ಹೇಳಿದರು.

ವಿವಿಯ ಸಿಂಡಿಕೇಟ್ ಮಾಜಿ ಸದಸ್ಯರಾದ ಜಯಪ್ರಕಾಶ್ ಗೌಡ, ಕಲಾ ನಿಕಾಯದ ಡೀನ್ ಪ್ರೊ. ಎನ್. ಶಾಂತಾನಾಯ್ಕ್, ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಪ್ರೊ. ರಾಬರ್ಟ ಜೋಷ್, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಿ.ಕೆ. ಸಂತೋಷ್ ಅವರು ವೇದಿಕೆಯಲ್ಲಿದ್ದರು.

ವಿವಿಯ ಕನ್ನಡ ಅಧ್ಯಯನ ವಿಭಾಗದ ಉಪನ್ಯಾಸಕ ಡಾ. ಕೆ.ಎಸ್. ಶಿವಪ್ರಕಾಶ ಅವರು ಕಾರ್ಯಕ್ರಮ ನಿರೂಪಿಸಿದರು. ಡಾ. ರಂಗನಾಥ .ಎನ್ ವಂದಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande