ಕಲಬುರಗಿ, 28 ಮೇ (ಹಿ.ಸ.)
ವಿಧಾನ ಪರಿಷತ್ನಂತಹ ಚಿಂತಕರ ಚಾವಡಿಯಲ್ಲಿದ್ದುಕೊಂಡು ಬಾಯಿಗೆ ಬಂದಂತೆ ಮಾತನಾಡಿದ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ಮುಖ್ಯ ಸಚೇತಕ ಎನ್.ರವಿಕುಮಾರ, ಸಂಸದ ಗೋವಿಂದ ಕಾರಜೋಳ ಅವರ ವಿರುದ್ಧ ಪ್ರಕರಣ ದಾಖಲು ಮಾಡಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಜೂ.02ರಂದು ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತದಲ್ಲಿ ಒಂದು ದಿನದ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಅರ್ಜುನ ಭದ್ರೆ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಂತಕರು, ಸಾಹಿತಿಗಳು, ಉನ್ನತ ವಿಚಾರಗಳನ್ನು ಹೊಂದಿರುವವರು ವಿಧಾನ ಪರಿಷತ್ತಿನ ಸದಸ್ಯರಾಗಿರುತ್ತಾರೆ. ಈ ಅವಕಾಶ ದಲಿತ ಸಮುದಾಯದ ಛಲವಾದಿ ನಾರಾಯಣ ಸ್ವಾಮಿಗೆ ಒದಗಿದೆ. ಆದರೆ, ಅದನ್ನು ಅವರು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ ಎಂದರು.
ವಿಧಾನಸಭೆ, ಲೋಕಸಭೆಯಲ್ಲಿ ಕುಳಿತು ದಲಿತರ ಶಿಕ್ಷಣ, ಆರ್ಥಿಕ ಸ್ಥಿತಿಗತಿ, ಅವರ ಆರೋಗ್ಯದ ಬಗ್ಗೆ, ಬಾಕಿ ಉಳಿದಿರುವ ಬ್ಯಾಕಲಾಗ್ ಹುದ್ದೆಗಳ ಬಗ್ಗೆ, ದಲಿತರು ಸುಮಾರು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಜಮೀನುಗಳ ಮಂಜೂರಾತಿ, ಹಕ್ಕು ಪತ್ರಗಳ ವಿತರಣೆ ಬಗ್ಗೆ, ದಲಿತರ ಮೇಲೆ ನಿರಂತರ ದೌರ್ಜನ್ಯ, ನಕಲಿ ಬೇಡ ಜಂಗಮರು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆಯುವುದರ ಬಗ್ಗೆ ಚರ್ಚೆ ಮಾಡುವುದನ್ನು ಬಿಟ್ಟು ವೈಯಕ್ತಿಕ ತೇಜೋವಧೆ ಮಾಡುವುದು ಸರಿಯಲ್ಲ ಎಂದರು.
ಎನ್.ರವಿಕುಮಾರ ಜಿಲ್ಲಾಧಿಕಾರಿಗಳ ಬಗ್ಗೆ ಮಾತನಾಡಿದ್ದು, ನಾವು ಉಗ್ರವಾಗಿ ಖಂಡಿಸುತ್ತೇವೆ. ಈಗಾಗಲೇ ರವಿಕುಮಾರ ವಿರುದ್ಧ ಕೇಸು ದಾಖಲಾಗಿದೆ. ಕೂಡಲೇ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮರೆಪ್ಪ ಹಳ್ಳಿ, ಮಲ್ಲಿಕಾರ್ಜುನ ಕ್ರಾಂತಿ, ಎಂ.ಎಂ.ಮೇತ್ರೆ, ಮಲ್ಲಿಕಾರ್ಜುನ ಖನ್ನಾ, ಜಯಕುಮಾರ ನೂಲಕರ್, ಸಂತೋಷ ತೇಗನೂರ, ಸೂರ್ಯಕಾಂತ ಕನ್ನಾ ಇತರರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Samarth biral