ಗದಗ, 28 ಮೇ (ಹಿ.ಸ.)
ಆ್ಯಂಕರ್:- ಗದಗ ಜಿಲ್ಲೆಯ ರೋಣ ತಾಲೂಕಿನ ಮಾಡಲಗೇರಿ ಗ್ರಾಮದಲ್ಲಿ 500ಕ್ಕೂ ಹೆಚ್ಚು ಚೀಲಗಳಷ್ಟು ನಕಲಿ ಡಿಎಪಿ ಗೊಬ್ಬರ ಮಾರಾಟವಾಗಿರುವುದು ಬೆಳಕಿಗೆ ಬಂದಿದ್ದು, ಬೆಳಗಾವಿ ವಿಭಾಗದ ಕೃಷಿ ಅಧಿಕಾರಿಗಳು ದಾಳಿ ನಡೆಸಿ ನಕಲಿ ಗೊಬ್ಬರವನ್ನು ವಶಪಡಿಸಿಕೊಂಡು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಬೆಳಗಾವಿ ವಿಭಾಗದ ಜಾಗೃತ ದಳದ ಹಿರಿಯ ಅಧಿಕಾರಿಗಳಾದ ರಾಜಶೇಖರ ಐ.ಬಿಜಾಪೂರ,
ಮಾಂತೇಶ ಕಿನಗಿ, ಎಂ.ಎಂ. ಕುಲಕರ್ಣಿ ನೇತೃತ್ವದ ತಂಡ ಗ್ರಾಮದಲ್ಲಿ ನಕಲಿ ಗೊಬ್ಬರ ಪೂರೈಕೆ ಮಾಡುತ್ತಿದ್ದ ಕಿಸಾನ್ ಅಭಿವೃದ್ಧಿ ಸಂಸ್ಥೆಯ ಗೋದಾಮಿನ ಮೆಲೆ ದಾಳಿ ನಡೆಸಿ, ನಕಲಿ ಗೊಬ್ಬರ ಪೂರೈಕೆಯನ್ನು ಸ್ಥಗಿತಗೊಳಿಸಿದ್ದಾರೆ.
ಸರಕಾರ ಮಾರಾಟ ಮಾಡುವ ಡಿಎಪಿ ಗೊಬ್ಬರ ಬೇರೆಯಾಗಿದ್ದು, ಈ ಸಂಸ್ಥೆಯವರು ಮಾರಾಟ ಮಾಡುತ್ತಿದ್ದ ಗೊಬ್ಬರ ಬೇರೆಯಾಗಿದೆ. ಹೊರನೋಟಕ್ಕೆ ಈ ವ್ಯತ್ಯಾಸ ತಿಳಿಯದೇ ಸಾವಿರಕ್ಕೂ ಹೆಚ್ಚು ರೈತರು ಗೊಬ್ಬರವನ್ನು ಖರೀದಿ
ಮಾಡಿರುವ ಬಗ್ಗೆ ತಿಳಿದುಬಂದಿದೆ.
ಈ ದಾಳಿಯಲ್ಲಿ ವಶಪಡಿಸಿಕೊಳ್ಳಲಾಗಿರುವ ನಕಲಿ ಗೊಬ್ಬರವನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ತಕ್ಷಣ ಕ್ರಮ ತೆಗೆದುಕೊಳ್ಳಲಾಗುವುದು. ಜೊತೆಗೆ ತಾಲೂಕಿನ ರೈತರು ನಕಲಿ ಗೊಬ್ಬರದ ಕುರಿತು ಎಚ್ಚರಿಕೆ ವಹಿಸಬೇಕು, ನಕಲಿ ಎಂಬ ಅನುಮಾನ ಬಂದರೆ ಇಲಾಖೆಗೆ ಮಾಹಿತಿ ನೀಡಬೇಕು ಎಂದು ರೋಣ ಸಹಾಯಕ ಕೃಷಿ ನಿರ್ದೇಶಕ ರವೀಂದ್ರ ಪಾಟೀಲ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Lalita MP