ಕಲಬುರಗಿ, 28 ಮೇ (ಹಿ.ಸ.)
ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಮತ್ತು ಎಂಎಲ್ಸಿ ಎನ್.ರವಿಕುಮಾರ್ ಮೇಲೆ ಜಿಲ್ಲಾ ಉಸ್ತುವಾರಿ ಸಚಿವರ ಪ್ರಭಾವದಿಂದ ಪೊಲೀಸ್ ಅಧಿಕಾರಿಗಳು ಸುಳ್ಳು ಅಟ್ರಾಸಿಟಿ ಕೇಸ್ ದಾಖಲಿಸಿರುವುದನ್ನು ಕೂಡಲೇ ರದ್ದುಪಡಿಸಬೇಕು ಎಂದು ಜಿಲ್ಲಾ ಕೋಲಿ, ಕಬ್ಬಲಿಗ ಮತ್ತು ತಳವಾರ ಸಮುದಾಯಗಳ ಸಮನ್ವಯ ಸಮಿತಿ ಮುಖಂಡ ಅವ್ವಣ್ಣ ಮ್ಯಾಕೇರಿ ಒತ್ತಾಯಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಮತ್ತು ನಮ್ಮ ಸಮಾಜದ ನಾಯಕರ ವಿರುದ್ಧ ಸುಳ್ಳು ಕೇಸ್ ದಾಖಲಿಸಿ ತೇಜೋವಧೆ ಮಾಡುತ್ತಿರುವ ಸರ್ಕಾರದ ನಡೆಯನ್ನು ಖಂಡಿಸಿ ಮಂಗಳವಾರ ಸಮಾಜದಿಂದ ತುರ್ತು ಸಭೆ ನಡೆಸಿ ಪೊಲೀಸರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಧೋರಣೆ ಖಂಡಿಸಿ ಸಿಎಂ ಬಳಿ ನಿಯೋಗ ತೆರಳಲು ನಿರ್ಧರಿಸಲಾಯಿತು ಎಂದರು.
ಉದ್ದೇಶಪೂರ್ವಕವಾಗಿ ರಾಜಕೀಯ ಎಳ್ಗೆ ಸಹಿಸದೆ ವಿರೋಧ ಪಕ್ಷದ ನಾಯಕರನ್ನು ಹತ್ತಿಕ್ಕುವ ಉದ್ದೇಶದಿಂದ ಸುಳ್ಳು ಕೇಸ್ ದಾಖಲಿಸಲಾಗಿದೆ. ಬಿಜೆಪಿ ಕಾರ್ಯಕ್ರಮದ ಭಾಷಣದಲ್ಲಿ ಎಲ್ಲಿಯೂ ಜಾತಿನಿಂದನೆ ವಿಚಾರ ಪ್ರಸ್ತಾಪ ಮಾಡಿರುವುದಿಲ್ಲ ಹೀಗಾಗಿ ಕೂಡಲೇ ಅಟ್ರಾಸಿಟಿ ಕೇಸ್ ಹಿಂಪಡೆಯಬೇಕೆಂದು ಒತ್ತಾಯಿಸಿದರು. ಜಿಲ್ಲೆಯಲ್ಲಿ ನಿರಂತರವಾಗಿ ನಮ್ಮ ಸಮುದಾಯದ ಮೇಲೆ, ಅಪ್ತಾಪ್ರ ಬಾಲಕಿಯರ ಮೇಲೆ ಅತ್ಯಾಚಾರ, ಪ್ರಚೋದಿತ ಆತ್ಮಹತ್ಯೆಗಳು, ಸರಣಿ ಕೊಲೆಗಳು, ಸುಳ್ಳು ಕೇಸ್ಗಳನ್ನು ದಾಖಲಿಸುತ್ತಿದ್ದು, ಸಮಾಜವನ್ನು ಹತ್ತಿಕ್ಕುವ ಕೆಲಸ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಂದ ನಡೆಯುತ್ತಿದೆ. ಹೀಗಾಗಿ ಜೂ. 04 ರಂದು ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಿ ಸಮಾಜಕ್ಕೆ ಸೂಕ್ತ ರಕ್ಷಣೆ ಒದಗಿಸುವಂತೆ ಮನವಿ ಸಲ್ಲಿಸಲಾಗುವುದು ಎಂದರು.
ರವಿಕುಮಾರ್ ಮೇಲೆ ಸುಳ್ಳು ಅಟ್ರಾಸಿಟಿ ಕೇಸ್ ದಾಖಲಿಸಿದ ಹಿನ್ನಲೆಯಲ್ಲಿ ಅದನ್ನು ರದ್ದುಪಡಿಸುವಂತೆ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಪ್ರತಿಭಟನೆ ಮಾಡಿ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಲು ಎಲ್ಲಾ ತಾಲೂಕು ಮುಖಂಡರಿಗೆ ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.
ಇಷ್ಟೆಲ್ಲಾ ಬೆಳವಣಿಗೆಗಳ ನಂತರವೂ, ನ್ಯಾಯ ಸಿಗದಿದ್ದರೆ ಜೂನ್-15ರೊಳಗೆ ಪೊಲೀಸ್ ಇಲಾಖೆಗೆ ಗಡುವು ನೀಡಲಾಗುವುದು. ಅಷ್ಟರೊಳಗೆ ಸುಳ್ಳು ಕೇಸ್ ರದ್ದುಪಡಿಸದಿದ್ದರೆ ಜೂ. 15 ರಂದು ನಗರದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಸುರೇಶ ಹುಡಗಿ, ರಮೇಶ ಜಮಾದಾರ, ತರಣಪ್ಪ ಮಾಲಗತ್ತಿ, ಬಸವರಾಜ ಸಪ್ಪಣಗೋಳ, ತಮ್ಮಣ್ಣ ಡಿಗ್ಗಿ, ಪ್ರೇಮ್ ಕೋಳಿ, ಶಾಂತಪ್ಪ ಕೂಡಿ ಇತರರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Samarth biral