ಸಾಲ ವಿತರಣೆಯಲ್ಲಿ ಅಕ್ರಮ ; ಡಿಸಿಸಿ ಬ್ಯಾಂಕ್ ಕಚೇರಿಗಳ ಮೇಲೆ ಲೋಕಾಯುಕ್ತರ ದಾಳಿ
ಸಾಲ ವಿತರಣೆಯಲ್ಲಿ ಅಕ್ರಮ ; ಡಿಸಿಸಿ ಬ್ಯಾಂಕ್ ಕಚೇರಿಗಳ ಮೇಲೆ ಲೋಕಾಯುಕ್ತರ ದಾಳಿ
ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಕೇಂದ್ರ ಕಛೇರಿ


ಕೋಲಾರ, ೨೭ ಮೇ (ಹಿ.ಸ) :

ಆ್ಯಂಕರ್ : ಕೋಲಾರ ಮತ್ತು ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಚುನಾವಣೆಯ ಬೆನ್ನಲ್ಲೆ ಮಂಗಳವಾರ ಲೋಕಾಯುಕ್ತ ಪೊಲೀಸರು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಏಕಕಾಲದಲ್ಲಿ ಡಿಸಿಸಿ ಬ್ಯಾಂಕ್ ಕೋಲಾರ ಕೇಂದ್ರ ಕಚೇರಿಗಳ ಹಾಗೂ ಚಿಂತಾಮಣಿಯ ಡಿಸಿಸಿ ಬ್ಯಾಂಕ್ ಶಾಖೆ ಮತ್ತು ಹಲವು ಪ್ರಾಥಮಿಕ ಸಹಕಾರ ಸಂಘಗಳ ಮೇಲೆ ದಾಳಿ ನಡೆಸಿದ್ದಾರೆ. ಬ್ಯಾಂಕಿನ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡರ ನಿವಾಸದ ಮೇಲೆ ಸಹ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

ಕೋಲಾರ ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿ ಯಲ್ಲಿ ಲೋಕಾಯುಕ್ತ ಹತ್ತು ಮಂದಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸಿದರು.

ಸ್ತ್ರೀಶಕ್ತಿ ಮಹಿಳಾ ಸಂಘಗಳಿಗೆ ಬ್ಯಾಂಕಿನಿ0ದ ಮಂಜೂರು ಮಾಡಿರುವ ಸಾಲಕ್ಕೆ ಸರ್ಕಾರದಿಂದ ಬರುವ ಬಡ್ಡಿ ಕ್ಲೆಮ್ ಹಣ ದುರುಪಯೋಗ ಆಗಿದೆ ಎಂದು ಆರೋಪಿಸಿ, ಚಿಂತಾಮಣಿಯ ಪ್ರತಾಪ್ ಎಂಬುವರು ಲೋಕಾಯುಕ್ತ ಸಂಸ್ಥಗೆ ಆರು ತಿಂಗಳ ಹಿಂದೆ ದೂರು ನೀಡಿದ್ದರು.

ದೂರು ಸಲ್ಲಿಕೆಯಾದ ನಂತರ ತನಿಖೆಗೆ ಅನುಮತಿ ಕೋರಿ ಲೋಕಾಯುಕ್ತ ಪೊಲೀಸರು ಸರ್ಕಾರದ ಅನುಮತಿ ಕೋರಿದ್ದರು. ಮೇ ೨೩ರಂದು ಸರ್ಕಾರವು ಅನುಮತಿ ನೀಡಿ ತನಿಖೆಗೆ ಆದೇಶಿಸಿತ್ತು.

ಅನುಮತಿ ಪಡೆದ ನಂತರ ಮಂಗಳವಾರ ಡಿಸಿಸಿ ಬ್ಯಾಂಕಿನ ಕೇಂದ್ರ ಕಚೇರಿ, ಬ್ಯಾಂಕಿನ ಮಾಜಿ ಅಧ್ಯಕ್ಷ ಗೋವಿಂದ ಗೌಡ, ಚಿಂತಾಮಣಿ ಶಾಖೆ ಸೇರಿದಂತೆ ಒಟ್ಟು ೧೦ ಕಡೆಗಳಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಸಲ್ಲಿಕೆಯಾಗಿರುವ ದೂರುಗಳ ಸಂಬ0ಧ ಕಡತಗಳನ್ನು ತರೆಸಿಕೊಂಡು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಕೆಲ ಸಿಬ್ಬಂದಿ, ಅಧಿಕಾರಿಗಳು ಲೋಕಾಯುಕ್ತ ಪೊಲೀಸರು ಕೇಳಿದ ದಾಖಲೆಗಳನ್ನು ಒದಗಿಸುವಲ್ಲಿ ವಿಳಂಬ ಮಾಡಿದರು. ಇದಕ್ಕೆ ಗರಂ ಆದ ಪೊಲೀಸರು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು, ಕೇಳಿದ ಮಾಹಿತಿ, ಕಡತಗಳನ್ನು ಸಕಾಲಕ್ಕೆ ಒದಗಿಸುವಂತೆ ತಾಕೀತು ಮಾಡಿದರು.

ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅವರ ನಿವಾಸದ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದಾಗ ಯಾವುದೇ ರೀತಿ ದಾಖಲೆಗಳು ಲಭ್ಯವಾಗಲಿಲ್ಲ. ಇದರಿಂದಾಗಿ ಬ್ಯಾಂಕಿನಲ್ಲಿ ದಾಖಲೆಗಳ ಶೋಧ ಕಾರ್ಯ ಸಂಜೆ ೫ ಗಂಟೆಯಾದರು ಮುಂದುವರೆದಿತ್ತು.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿ, ಚಿಂತಾಮಣಿ ಶಾಖೆ, ಬೊಮ್ಮನಹಳ್ಳಿ, ಹುಲ್ಲಗುಮನಹಳ್ಳಿ, ಕುರುಬೂರು, ಎನಮಲಪಡಿ, ನಂಬಿಗಾಹಳ್ಳಿ, ಟಿ.ಗೊಲ್ಲಹಳ್ಳಿ ಕೃಷಿ ಪತ್ತಿನ ಸಹಕಾರ ಸಂಗಳಿಗೆ ಭೇಟಿ ನೀಡಿ ದಾಖಲೆಗಳನ್ನು ಕಲೆ ಹಾಕಿ ವಶಪಡಿಸಿಕೊಂಡಿದ್ದಾರೆ.

ಡಿಸಿಸಿ ಬ್ಯಾಂಕಿನಲ್ಲಿ ಎರಡೂ ಜಿಲ್ಲೆಯ ಕೆಲ ರೈತರು ಪಡೆದುಕೊಂಡಿರುವ ಸಾಲದ ಮೇಲಿನ ಬಡ್ಡಿ ಮನ್ನಕ್ಕೆ ಬ್ಯಾಂಕಿನ ಮೂಲಕ ನೀಡುವ ಸಾಲದ ಬಡ್ಡಿ ಮನ್ನಾ ಹಣದಲ್ಲಿ ಹಾಗೂ ೭ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿ0ದ ಸಾಲ ವಸೂಲಿಯಾಗದೆ ಇದ್ದರೂ ಸಹ ೨೦೧೮-೧೯ನೇ ಸಾಲಿನ ಸಾಲ ಮನ್ನಾ ಜಿಎಲ್ ಖಾತೆಗೆ ಜಮಾ ಮಾಡದೆ ವಸೂಲಿಯಾದಂತೆ ತೋರಿಸಲಾಗಿದೆ.

ರೈತರ ಹೆಸರಿನಲ್ಲಿ ನಕಲಿ ವಿವರಗಳನ್ನು ಸೃಷ್ಟಿಸಿ ಸರ್ಕಾರದ ಹಣವನ್ನು ಕಬಳಿಸಿರುವುದು ಮತ್ತು ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ನಗದು ರೂಪದಲ್ಲಿ ಹಣ ಡ್ರಾ ಮಾಡಲು ಯಾವುದೇ ಅಧಿಕಾರವಿಲ್ಲ. ಆದರೂ ಸಹ ಕುರುಬೂರು, ಇಲ್ಲಿ ಹಣವನ್ನು ನಗದಾಗಿ ಡ್ರಾ ಮಾಡಿ ಅಕ್ರಮ ಎಸಗಿ ಅವ್ಯವಹಾರ ನಡೆದಿರುವ ಬಗ್ಗೆ ದೂರು ಸಲ್ಲಿಕೆಯಾಗಿದೆ.

ಪ್ರಕರಣದ ಪರಿಶೀಲನೆ ಕೈಗೊಂಡು, ಸಕ್ಷಮ ಪ್ರಾಧಿಕಾರದಿಂದ ಅಧಿಕಾರಿಗಳ ವಿರುದ್ಧ ಪೂರ್ವಾನುಮತಿಯನ್ನು ಪಡೆದು, ಬ್ಯಾಂಕಿನ ಮಾಜಿ ಅಧ್ಯಕ್ಷ ಗೋವಿಂದೇಗೌಡ ಹಾಗೂ ಇತರರ ವಿರುದ್ಧ ಕೋಲಾರ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಮೇ.೨೩ರಂದು ಕಲಂ ೧೩(೧)(ಎ) ಜೊತೆಗೆ ೧೩(೨) ಭ್ರಷ್ಟಾಚಾರ ಪ್ರತಿಬಂಧ ಕಾಯ್ದೆ ೧೯೮೮ ೨೦, ೪೦೯, ೪೨೦, ೪೬೮ ೩ ೧೨೦(೨೨) ದಾಖಲಾಗಿದೆ.

ಡಿಸಿಸಿ ಬ್ಯಾಂಕ್, ಕುರುಬೂರು, ಬೊಮ್ಮೇಪಲ್ಲಿ, ಯಗವಕೋಟೆ, ಹುಲ್ಲಗುಮ್ಮನಹಳ್ಳಿ, ಯನುಮಲಪಾಡಿ, ನಂದಿಗಾಣಹಳ್ಳಿ, ಟಿ.ಗೊಲ್ಲಹಳ್ಳಿ, ಬ್ಯಾಂಕಿನ ಮಾಜಿ ಅಧ್ಯಕ್ಷ ಗೋವಿಂದಗೌಡ ಗೋವಿಂದೇಗೌಡ ಅವರ ಮನೆಯನ್ನು ಒಳಗೊಂಡ0ತೆ ಒಟ್ಟು ೧೦ ಸ್ಥಳಗಳಲ್ಲಿ ೧೮ ಅಧಿಕಾರಿ ಮತ್ತು ಸಿಬ್ಬಂದಿಗಳ ಶೋಧ ನಡೆಸಿದ್ದಾರೆ.

ರೈತರ ಸಾಲದ ಮೇಲಿನ ಬಡ್ಡಿ ಮನ್ನಕ್ಕೆ ಡಿ.ಸಿ.ಸಿ. ಬ್ಯಾಂಕಿನ ಮೂಲಕ ನೀಡುವ ಸಾಲದ ಬಡ್ಡಿ ಮನ್ನಾ ಹಾಗೂ ೦೭ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿ0ದ ಸಾಲ ವಸೂಲಿ, ನಗದು ರೂಪದಲ್ಲಿ ಹಣ ಡ್ರಾ ಮಾಡಿರುವ ಅವ್ಯವಹಾರಕ್ಕೆ ಸಂಬ0ಧಿಸಿದ0ತೆ ಹಾಗೂ ಯನುಮಲಪಾಡಿ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಸಾಲ ಮನ್ನಾಗೆ ಸಂಬಂಧಿಸಿದಂತೆ ೨,೧೪,೦೦,೦೦೦ ರೂ. ಸೆಲ್ಫ್ ಡ್ರಾ ಮಾಡಿರುವ ಬಗ್ಗೆ ೨ ಚೆಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕುರುಬೂರು ಸಂಘದಲ್ಲಿ ೯,೦೦,೦೦,೦೦೦ ರೂ. ಸೆಲ್ಫ್ ಡ್ರಾ ಮಾಡಿರುವ ಬಗ್ಗೆ ಕಂಡುಬ0ದಿದ್ದು, ತನಿಖೆಗೆ ಅಗತ್ಯವಾಗಿ ಬೇಕಾಗಿರುವ ಕಡತಗಳು ವಶಪಡಿಸಿಕೊಂಡಿದ್ದಾರೆ.

ಗೋವಿಂದೇಗೌಡ ಮತ್ತು ಇತರರು ೧೧ಕೋಟಿ ರೂ. ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ದೂರುದಾರ ನೀಡಿರುವ ದೂರಿನಲ್ಲಿ ಉಲ್ಲೇಖೆಸಿದ್ದು, ದಾಖಲಾತಿಗಳನ್ನು ತನಿಖೆ ಸಂಬ0ಧ ಪರಿಶೀಲಿಸಿ ವಶಪಡಿಸಿಕೊಂಡಿದ್ದು, ಲೋಕಾಯುಕ್ತ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ದಾಳಿಯಲ್ಲಿ ಎರಡೂ ಜಿಲ್ಲೆಗಳ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದು, ಎಸ್ಪಿ ಧನಂಜಯ್, ಡಿವೈಎಸ್ಪಿಗಳಾದ ಎಸ್.ಸುಧೀರ್, ವಿರೇಂದ್ರ ಕುಮಾರ್, ಇನ್ಸ್ಪೆಕ್ಟರ್‌ಗಳಾದ ರೇಣುಕಾ, ಆಂಜಿನಪ್ಪ, ಯಶ್ವಂತ್, ನಿರ್ಮಲ ಮತಿತರರು ಪಾಲ್ಗೊಂಡಿದ್ದರು.

ಚಿತ್ರ : ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿ

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande