ಬೆಂಗಳೂರು, 27 ಮೇ (ಹಿ.ಸ.) :
ಆ್ಯಂಕರ್ : ಪಹಲ್ಗಾಮ್ನಲ್ಲಿ 26 ಮಹಿಳೆಯರ ಸಿಂಧೂರವನ್ನು ನಾಶ ಮಾಡಿದ ಉಗ್ರರಿಗೆ ತಕ್ಕ ಪಾಠ ಕಲಿಸಿದ 'ಆಪರೇಷನ್ ಸಿಂಧೂರ' ಯಶಸ್ಸಿನಿಂದ ದೇಶಾದ್ಯಂತ ಹೆಮ್ಮೆ ಮೂಡಿರುವ ಈ ಸಂದರ್ಭದಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುಜರಾತ್ನ ಭುಜ್ ಪ್ರವಾಸ ಕೈಗೊಂಡರು.
1971ರ ಯುದ್ಧದ ಸಮಯದಲ್ಲಿ ಭಾರತೀಯ ವಾಯುಪಡೆಯ ಹಾನಿಗೊಂಡ ರನ್ವೇಯನ್ನು ಕೇವಲ 72 ಗಂಟೆಗಳಲ್ಲಿ ದುರಸ್ತಿ ಮಾಡಿದ ಮಹಿಳೆಯರು ಪ್ರಧಾನ ಮಂತ್ರಿಗೆ ಅದ್ದೂರಿಯಾಗಿ ಸ್ವಾಗತ ನೀಡಿದರು.
ಭುಜ್ನ ಮಾಧಾಪಾರದ ಈ ಮಹಿಳೆಯರು, ಪ್ರಧಾನಿ ಮೋದಿಯವರಿಗೆ ಹೃತ್ಪೂರ್ವಕ ಆಶೀರ್ವಾದ ನೀಡಿ, ಸಿಂಧೂರ ಗಿಡವನ್ನು ಉಡುಗೊರೆಯಾಗಿ ನೀಡಿದರು. ಪ್ರಧಾನಿ ಅವರು ಈ ಗಿಡವನ್ನು ತಮ್ಮ ನಿವಾಸದಲ್ಲಿ ನೆಡುವುದಾಗಿ ಭರವಸೆ ನೀಡಿದರು. ‘‘ಈ ಸಸ್ಯ ಆಲದ ಮರದಂತೆ ಸದಾ ನನ್ನ ನಿವಾಸದಲ್ಲಿ ಉಳಿಯಲಿದೆ’’ ಎಂದು ಮೋದಿ ಅವರು ಹೇಳಿದರು.
1971ರಲ್ಲಿ ಪಾಕಿಸ್ತಾನಿ ಬಾಂಬ್ ದಾಳಿಯಿಂದ ಹಾನಿಗೊಂಡ ರನ್ವೇ ಅನ್ನು ಸರಿಪಡಿಸಿದ 300ಕ್ಕೂ ಹೆಚ್ಚು ಮಹಿಳೆಯರಲ್ಲಿ ಕಾನಾಬಾಯಿ ಹಿರಾನಿ (80), ಶಂಬಾಯಿ ಖೋಖಾನಿ (83), ಲಾಲಬಾಯಿ ಭೂರಿಯಾ (82) ಮತ್ತು ಸಮು ಭಂಡೇರಿ (75) ಮುಖ್ಯ ಪಾತ್ರವಹಿಸಿದ್ದರು. ಇವರು ನೀಡಿದ ಸಿಂಧೂರ ಗಿಡ ದೇಶಪ್ರೇಮ, ಧೈರ್ಯ ಮತ್ತು ಸಂಸ್ಕೃತಿಯ ಸಂಕೇತವಾಗಿ ಪರಿಣಮಿಸಿದೆ.
ಸಿಂಧೂರ ಗಿಡದ ಪೌಷ್ಟಿಕ ಮತ್ತು ಔಷಧೀಯ ಮೌಲ್ಯ:
ಸಿಂಧೂರವನ್ನು ತಯಾರಿಸುವ ಮಲ್ಲೋಟಸ್ ಫಿಲಿಪೆನ್ಸಿಸ್ (Mallotus philippensis) ಸಸ್ಯವು ‘ಕುಂಕುಮ್ ಟ್ರೀ’ ಅಥವಾ ‘ಲಿಪ್ಸ್ಟಿಕ್ ಟ್ರೀ’ ಎಂದೂ ಹೆಸರಾಗಿದೆ. ಇದರ ಹಣ್ಣುಗಳು ಹಸಿರಾಗಿ ಹುಟ್ಟಿ ನಂತರ ಕೆಂಪು ಬಣ್ಣಕ್ಕೆ ಬದಲಾಗುತ್ತವೆ. ಈ ಹಣ್ಣುಗಳೊಳಗಿನ ಬೀಜಗಳಿಂದ ನೈಸರ್ಗಿಕ ಕೆಂಪು ಬಣ್ಣದ ಪುಡಿ ತಯಾರಿಸಲಾಗುತ್ತದೆ. ಇದನ್ನು ಮಹಿಳೆಯರ ಶೃಂಗಾರಕ್ಕೂ, ಆಹಾರ ಬಣ್ಣಕ್ಕೂ, ಔಷಧೀಯ ಬಳಕೆಯಲ್ಲೂ ಉಪಯೋಗಿಸಲಾಗುತ್ತದೆ.
ಇದರ ಪುಡಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣಗಳಿದ್ದು, ಹಲವಾರು ಚರ್ಮದ ಕಾಯಿಲೆಗಳಿಗೆ ಈ ಸಸ್ಯ ಉಪಯುಕ್ತ. ಆಫ್ರಿಕನ್ ಜರ್ನಲ್ ಆಫ್ ಬಯೋ ಮೆಡಿಕಲ್ ರಿಸರ್ಚ್ ಅನ್ವಯ, ಈ ಸಸ್ಯದ ಬಿಕ್ಸಿನ್ ಎಂಬ ರಾಸಾಯನಿಕ ಸಂಯೋಗವೇ ಅದರ ಔಷಧೀಯ ಶಕ್ತಿಗೆ ಮೂಲ ಕಾರಣ.
ಸಾಂಸ್ಕೃತಿಕ ಸಂಕೇತವೆಂಬ ನೆಲೆಯಲ್ಲಿ ಸಿಂಧೂರ:
ಸಿಂಧೂರವು ಭಾರತೀಯ ಸಂಸ್ಕೃತಿಯಲ್ಲಿ ವಿವಾಹಿತ ಹೆಣ್ಣುಮಕ್ಕಳ ಪ್ರಮುಖ ಅಲಂಕಾರ. ಕೂದಲಿನ ವಿಭಜನೆಯಲ್ಲಿ ಇಳಿಯುವ ಈ ಕೆಂಪು ಬಣ್ಣದ ಚುಕ್ಕೆ ನಿಜಕ್ಕೂ ತಾಯ್ನಾಡಿನ ಗೌರವವನ್ನು ಪ್ರತಿಬಿಂಬಿಸುತ್ತದೆ. ಆಪರೇಷನ್ ಸಿಂಧೂರ ಇದನ್ನು ಶಸ್ತ್ರಶಕ್ತಿಯಾಗಿ ರೂಪಾಂತರಿಸಿದ ಬೆಳ್ಳಿಯ ಅಧ್ಯಾಯವಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa