ರಾಯಚೂರು, 26 ಮೇ (ಹಿ.ಸ.) :
ಆ್ಯಂಕರ್ : ರಾಯಚೂರು ಕೃಷಿ ವಿಶ್ವವಿದ್ಯಾಲಯವು ಶೈಕ್ಷಣಿಕ, ಸಂಶೋಧನೆ ಹಾಗೂ ವಿಸ್ತರಣಾ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದೆ ಎಂದು ರಾಯಚೂರ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಎಂ.ಹನುಮಂತಪ್ಪ ಅವರು ಹೇಳಿದ್ದಾರೆ.
ರಾಯಚೂರು ಕೃಷಿ ವಿವಿಯಲ್ಲಿ ಮೇ 26ರಂದು ನಡೆದ 14ನೇ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.
ರಾಯಚೂರು ವಿಶ್ವವಿದ್ಯಾಲಯವು ಶೈಕ್ಷಣಿಕ, ಸಂಶೋಧನೆ ಹಾಗೂ ವಿಸ್ತರಣಾ ಕ್ಷೇತ್ರಗಳಲ್ಲಿ ಸಲ್ಲಿಸುತ್ತಿರುವ ಅವಿರತ ಸೇವೆಯ ಫಲಪ್ರದವಾಗಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ ನಮ್ಮ ವಿಶ್ವವಿದ್ಯಾಲಯಕ್ಕೆ 25ನೇ ಶ್ರೇಣಿ ನೀಡಿರುವುದು ನಮಗೆ ಹೆಮ್ಮೆಯ ಹಾಗೂ ಸಂತಸದ ವಿಷಯವಾಗಿದೆ. ಅಲ್ಲದೇ, ಶಿಕ್ಷಣ, ಸಂಶೋಧನೆ, ವಿಸ್ತರಣೆ ಮತ್ತು ಆಡಳಿತದಲ್ಲಿನ ಗಮನಾರ್ಹ ಸಾಧನೆಗಳಿಗೆ ರಾಷ್ಟ್ರಮಟ್ಟದ ಎನ್ಐಆರ್ ಶ್ರೇಯಾಂಕಗನುಗುಣವಾಗಿ 39ನೇ ಅತ್ಯುತ್ತಮ ಕೃಷಿ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಅವರು ತಿಳಿಸಿದರು.
ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ವ್ಯಾಪ್ತಿಯನ್ನೊಳಗೊಂಡಂತೆ ಆರು ಮಹಾವಿದ್ಯಾಲಯಗಳಲ್ಲಿ ವಿಶ್ವವಿದ್ಯಾಲಯದ ಭೋಧನಾ ಚಟುವಟಿಕೆಗಳು ನಡೆಯುತ್ತಿವೆ. ಕೃಷಿಯಲ್ಲಿ ಸ್ನಾತಕ ಪದವಿಯನ್ನು ರಾಯಚೂರು, ಭೀಮರಾಯನಗುಡಿ, ಕಲಬುರಗಿ, ಗಂಗಾವತಿ ಮತ್ತು ಹಗರಿಗಳಲ್ಲಿ ಸ್ಥಾಪಿತವಾದ ಮಹಾವಿದ್ಯಾಲಯಗಳಲ್ಲಿಯೂ, ಕೃಷಿ ತಾಂತ್ರಿಕ ಸ್ನಾತಕ ಪದವಿಯನ್ನು ರಾಯಚೂರಿನ ಕೃಷಿ ತಾಂತ್ರಿಕ ಮಹಾವಿದ್ಯಾಲಯ ಆವರಣದಲ್ಲಿಯೂ ಅಭ್ಯಸಿಸಲಾಗುತ್ತಿದೆ. ರಾಯಚೂರು ಆವರಣದ ವಿಭಾಗಗಳಲ್ಲಿ 15 ಸ್ನಾತಕೋತ್ತರ ಹಾಗೂ 14 ಪಿ.ಹೆಚ್.ಡಿ ಪದವಿ ಕಾರ್ಯಕ್ರಮಗಳನ್ನು ನಿರ್ವಹಿಸಲಾಗುತ್ತಿದೆ ಎಂದರು.
2022-23ನೇ ಸಾಲಿನಲ್ಲಿ ಸ್ನಾತಕ ಪದವಿಗೆ 216 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 464 ವಿದ್ಯಾರ್ಥಿಗಳು ಪ್ರವೇಶ ಪಡೆದಿರುತ್ತಾರೆ. ಕೃಷಿ ಪದವಿಗೆ 387 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಬಿ.ಟಿಕ್ ಕೃಷಿ ತಾಂತ್ರಿಕ ಪದವಿಗೆ ಒಟ್ಟು 77 ವಿದ್ಯಾರ್ಥಿಗಳು ಪ್ರವೇಶ ಪಡೆದಿರುತ್ತಾರೆ. ಅಲ್ಲದೇ, ಸ್ನಾತಕೋತ್ತರ ಪದವಿಗಳಿಗೆ 132 ಕೃಷಿಯಲ್ಲಿ ಸ್ನಾತಕ ಪದವಿಯನ್ನು ರಾಯಚೂರು, ಭೀಮರಾಯನಗುಡಿ, ಕಲಬುರಗಿ, ಗಂಗಾವತಿ ಮತ್ತು ಹಗರಿಗಳಲ್ಲಿ ಸ್ಥಾಪಿತವಾದ ಮಹಾವಿದ್ಯಾಲಯಗಳಲ್ಲಿ ನಡೆಸಲಾಗುತ್ತಿದೆ ಎಂದರು.
ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ವಿಷಯಗಳಲ್ಲಿ ಗುಣಮಟ್ಟದ ಶಿಕ್ಷಣ, ಸಮಗ್ರ, ಅಭಿವೃದ್ಧಿಗೆ ಪೂರಕವಾದ ಸಂಶೋಧನೆ ಮತ್ತು ಸಂಶೋಧನೆಯ ಫಲಿತಾಂಶಗಳನ್ನು ರೈತ ಸಮುದಾಯಕ್ಕೆ ಒದಗಿಸಿ, ಅವುಗಳನ್ನು ಅಳವಡಿಸಲು ಯೋಗ್ಯ ವಿಸ್ತರಣಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ನಮ್ಮ ವಿಶ್ವವಿದ್ಯಾಲಯದ ಧೈಯೋದ್ದೇಶವಾಗಿದೆ. ವಿಶ್ವವಿದ್ಯಾಲಯವು 22 ನವಂಬರ್ 2008 ರಂದು ಸ್ಥಾಪನೆಗೊಂಡ ನಂತರ ತನ್ನ ಒಂದು ದಶಕಕ್ಕೂ ಹೆಚ್ಚಿನ ವಸಂತಗಳ ಸಾರ್ಥಕ ಸೇವೆಯನ್ನು ರೈತರ ಅಭ್ಯುದಯಕ್ಕಾಗಿ ಮುಡಿಪಾಗಿಟ್ಟಿದೆ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಹಾಲಿ ಕುಲ ಸಚಿವರಾದ ಡಾ.ಕೆ.ಆರ್.ದುರುಗೇಶ್, ನಿರ್ಗಮಿತ ಕುಲ ಸಚಿವ ಡಾ.ಗುರುರಾಜ್ ಸುಂಕದ ಹಾಗೂ ವಿವಿಯ ವ್ಯವಸ್ಥಾಪನಾ ಮಂಡಳಿ ಸದಸ್ಯರು ಸೇರಿದಂತೆ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿಗಳು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ