ಸಂಚಾರಿ ಪೊಲೀಸ್ ತಪಾಸಣೆ ವೇಳೆ ದುರ್ಘಟನೆ : ಮಗು ಸ್ಥಳದಲ್ಲೇ ಸಾವು
ಮಂಡ್ಯ, 26 ಮೇ (ಹಿ.ಸ.) : ಆ್ಯಂಕರ್ : ಸಂಚಾರಿ ಪೊಲೀಸ್ ಇಲಾಖೆ ನಡೆಸುತ್ತಿದ್ದ ಹೆಲ್ಮೆಟ್ ತಪಾಸಣೆಯ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿ ಮೂರೂವರೆ ವರ್ಷದ ಮಗುವೊಂದು ತನ್ನ ಪ್ರಾಣ ಕಳೆದುಕೊಂಡಿರುವ ದುರ್ಘಟನೆ ಮಂಡ್ಯ ಜಿಲ್ಲೆಯ ಸ್ವರ್ಣಸಂದ್ರ ಬಳಿ ಸಂಭವಿಸಿದೆ. ಮದ್ದೂರು ತಾಲೂಕಿನ ಗೊರವನಹಳ್ಳಿ ಗ್ರಾಮದ ಅಶೋಕ
Child death


ಮಂಡ್ಯ, 26 ಮೇ (ಹಿ.ಸ.) :

ಆ್ಯಂಕರ್ : ಸಂಚಾರಿ ಪೊಲೀಸ್ ಇಲಾಖೆ ನಡೆಸುತ್ತಿದ್ದ ಹೆಲ್ಮೆಟ್ ತಪಾಸಣೆಯ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿ ಮೂರೂವರೆ ವರ್ಷದ ಮಗುವೊಂದು ತನ್ನ ಪ್ರಾಣ ಕಳೆದುಕೊಂಡಿರುವ ದುರ್ಘಟನೆ ಮಂಡ್ಯ ಜಿಲ್ಲೆಯ ಸ್ವರ್ಣಸಂದ್ರ ಬಳಿ ಸಂಭವಿಸಿದೆ.

ಮದ್ದೂರು ತಾಲೂಕಿನ ಗೊರವನಹಳ್ಳಿ ಗ್ರಾಮದ ಅಶೋಕ್ ಮತ್ತು ವಾಣಿ ದಂಪತಿ ತಮ್ಮ ಮೂರೂವರೆ ವರ್ಷದ ಮಗಳು ಹೃತೀಕ್ಷಳಿಗೆ ನಾಯಿ ಕಡಿದಿರುವ ಕಾರಣ ವೈದ್ಯಕೀಯ ಚಿಕಿತ್ಸೆಗಾಗಿ ಬೈಕ್‌ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಸ್ವರ್ಣಸಂದ್ರದ ಬಳಿ ಸಂಚಾರಿ ಪೊಲೀಸರು ಹೆಲ್ಮೆಟ್ ತಪಾಸಣೆ ನಡೆಸುತ್ತಿದ್ದರು. ತಪಾಸಣೆಯ ವೇಳೆ ಬೈಕ್ ಅನ್ನು ತಡೆಹಿಡಿಯುತ್ತಿದ್ದಂತೆಯೇ, ಆಯತಪ್ಪಿ ದಂಪತಿ ಹಾಗೂ ಮಗು ರಸ್ತೆ ಮೇಲೆ ಬಿದ್ದರು. ಹಿಂದಿನಿಂದ ಬಂದ ವೇಗದ ಕ್ಯಾಂಟರ್‌ ವಾಹನ ಮಗುವಿನ ಮೇಲೆ ಹರಿದಿದೆ.

ಪರಿಣಾಮ, ತಲೆಗೆ ತೀವ್ರ ಪೆಟ್ಟು ಬಿದ್ದು, ರಕ್ತಸ್ರಾವದಿಂದ ಮಗು ಸ್ಥಳದಲ್ಲೇ ಮೃತಪಟ್ಟಿದೆ. ಈ ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ಮತ್ತು ಮೃತ ಮಗುವಿನ ಪೋಷಕರು ಮಂಡ್ಯ ಜಿಲ್ಲಾ ಆಸ್ಪತ್ರೆಯ ಮುಂದೆ ರಾಷ್ಟ್ರೀಯ ಹೆದ್ದಾರಿ-275ರ ಮೇಲೆ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಪೋಲೀಸರ ನಿರ್ಲಕ್ಷ್ಯದಿಂದ ಇಂತಹ ಅನಾಹುತ ಸಂಭವಿಸಿದೆ, ಇದಕ್ಕೆ ನ್ಯಾಯ ದೊರೆಯ ಬೇಕು ಎಂದು ಆಗ್ರಹಿಸಿದರು.

ಘಟನೆ ತೀವ್ರ ಸ್ವರೂಪಕ್ಕೆ ತಿರುಗುತ್ತಿದ್ದಂತೆಯೇ ಮಂಡ್ಯ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಘಟನೆಗೆ ಕಾರಣವಾದ ಮೂವರು ಸಿಬ್ಬಂದಿಯನ್ನು‌ ಅಮಾನತು ಮಾಡುವುದಾಗಿ ತಿಳಿಸಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande