ಕೋಲಾರ, ೨೪ ಮೇ (ಹಿ.ಸ) :
ಆ್ಯಂಕರ್ : ಮಕ್ಕಳು ಸಾಮಾಜಿಕ ಮತ್ತು ಕಾನೂನಿನ ಜ್ಞಾನ ಪಡೆಯುವ ಮೂಲಕ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಸಮಾಜ ಗುರುತಿಸುವ ಸಾಧಕರಾಗಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾಗಿದ್ದು, ಇದೀಗ ತುಮಕೂರು ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿರುವ ನ್ಯಾಯಾಧೀಶರಾದ ಸುನಿಲ್ ಎಸ್.ಹೊಸಮನಿ ಕರೆ ನೀಡಿದರು.
ನಗರದ ಪಾಲಸಂದ್ರ ಬಡಾವಣೆಯಲ ನವನಳಂದ ಶಾಲೆಯಲ್ಲಿ ಕೋಲಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾಗಿ ಕೊನೆಯ ಕಾನೂನು ಶಿಬಿರದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಅತಿ ಸಣ್ಣ ವಯಸ್ಸಿನಲ್ಲೇ ಸಾಧನೆ ಮಾಡಿದ ವಿವೇಕಾನಂದರು ಸಮಾಜದಲ್ಲಿ ಅಜರಾಮರವಾಗಿ ಉಳಿದಿದ್ದಾರೆ ಎಂದರು.
ಮಕ್ಕಳಿಗೆ ಶಾಲೆಯಲ್ಲಿ ಶಿಕ್ಷಣದೊಂದಿಗೆ ವಿವೇಕಾನಂದರ ಜೀವನ ಚರಿತ್ರೆಯ ಪುಸ್ತಕಗಳನ್ನು ಓದಲು ಅವಕಾಶ ನೀಡಬೇಕು ಎಂದ ಅವರು, ಸಂಸ್ಕಾರ,ಸAಸ್ಕೃತಿ ಶಿಕ್ಷಣದೊಂದಿಗೆ ಇದ್ದರೆ ಮಾತ್ರ ಯಾವುದೇ ವ್ಯಕ್ತಿ ಪರಿಪೂರ್ಣನಾಗಲು ಸಾಧ್ಯ ಎಂದು ತಿಳಿಸಿದರು.
ಗುರುಹಿರಿಯರಿಗೆ ಗೌರವ ನೀಡುವ ಸಂಸ್ಕಾರ ಮೊದಲು ಕಲಿಯಿರಿ ಎಂದ ಅವರು ವಿದ್ಯೆಗೆ ವಿನಯವೇ ಭೂಷಣವಾಗಿದೆ, ಮಕ್ಕಳು ದುಶ್ಚಟಗಳಿಂದ ದೂರವಿರಿ, ವಿದ್ಯೆಗೆ ಮುನ್ನಾ ಸಮಾಜದಲ್ಲಿ ಬದುಕುವ ಶಿಕ್ಷಣ ಪಡೆಯಿರಿ ಎಂದು ಸಲಹೆ ನೀಡಿದರು.
ಕಾನೂನಿನ ಅರಿವು ಇಲ್ಲವಾದಲ್ಲಿ ಎದುರಾಗುವ ಸಮಸ್ಯೆಗಳ ಕುರಿತು ತಿಳಿಸಿದ ಅವರು, ತಪ್ಪು ಮಾಡಿ ನನಗೆ ಕಾನೂನಿನ ಅರಿವಿರಲಿಲ್ಲ ಎಂದರೆ ಒಪ್ಪಲಾಗದು ಶಿಕ್ಷೆ ಖಚಿತ ಎಂದು ಎಚ್ಚರಿಸಿದ ಅವರು, ಸಮಾಜದಲ್ಲಿ ಎಲ್ಲರೊಂದಿಗೆ ಸೌಹಾರ್ದತೆಯಿಂದ ಬದುಕು ನಡೆಸುವ ಸಂಸ್ಕಾರ ಇಂದು ಅಗತ್ಯವಿದೆ ಎಂದರು.
ಮಾದಕ ವಸ್ತುಗಳ ಬಳಕೆ,ಮಾರಾಟ ಕ್ಷಮಿಸಲಾರದ ಅಪರಾಧ ಇಂತಹ ಕೃತ್ಯಗಳಲ್ಲಿ ತೊಡಗಿ ಜೀವನ ಹಾಳು ಮಾಡಿಕೊಳ್ಳದಿರಿ ಎಂದು ಕಿವಿಮಾತು ಹೇಳಿ, ಕನಿಷ್ಟ ದೈನಂದಿನ ಕಾನೂನುಗಳ ಅರಿತಾಗ ನಿಮ್ಮ ಜೀವನ ಸುಖಮಯವಾಗಿರುತ್ತದೆ, ಅಪರಾಧ ಮುಕ್ತ ಜೀವನ ನಡೆಸಬಹುದು ಎಂದರು.
ಚಾಕೋಲೇಟ್ಗಳಲ್ಲಿ ಹೇರಾಯಿನ್, ಕೋಕಾ, ಮುಂತಾದ ಅಮಲು, ನಿಶೆ ಬರುವ ವಸ್ತುಗಳನ್ನು ಮಿಶ್ರಣ ಮಾಡಿ ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಮಾದಕ ವ್ಯಸನಿಗಳನ್ನಾಗಿ ಮಾಡಿ ಕೊನೆಗೆ ಅವರನ್ನು ಸಮಾಜಘಾತುಕ, ಕಾನೂನು ಬಾಹಿರಾ ಕೃತ್ಯಗಳಲ್ಲಿ ತೊಡಗುವಂತೆ ಮಾಡುವ ಷಡ್ಯಂತ್ರ ನಡೆದಿದೆ ಎಂದು ವಿಷಾದಿಸಿ, ಬಾಲ್ಯವಿವಾಹ, ಬಾಲಕಾರ್ಮಿಕತೆ, ಸಂಚಾರಿ ನಿಯಮಗಳ ಕುರಿತು ಅರಿವು ನೀಡಿದರು.
ವಕೀಲರ ಸಂಘದ ಅಧ್ಯಕ್ಷ ಎಂ.ಮುನೇಗೌಡ ಮಾತನಾಡಿ, ನ್ಯಾಯಾಧೀಶರಾದ ಸುನಿಲಹೊಸಮನಿ ಸಾರ್ ಅವರು, ಕೇವಲ ೩ ವರ್ಷಗಳಲ್ಲಿ ೭೨೫೦ ಕಾನೂನು ಅರಿವು ಕಾರ್ಯಕ್ರಮಗಳನ್ನು ನಡೆಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ, ಅವರ ಕುರಿತು ಜಿಲ್ಲೆಯ ಪ್ರತಿ ಶಾಲೆ,ಕಾಲೇಜು ವಿದ್ಯಾರ್ಥಿಗಳಿಗೂ ಪರಿಚಯವಿದೆ, ಅವರ ಸರಳತೆ,ಸಜ್ಜನಿಗೆ ವಿದ್ಯಾರ್ಥಿ ಸಮುದಾಯಕ್ಕೆ ಆದರ್ಶವಾಗಿದೆ ಎಂದರು.
ಕಾಯಕ್ರಮದ ಅಧ್ಯಕ್ಷತೆಯನ್ನು ನಳಂದ ವಿದ್ಯಾನಿಕೇತನದ ಕಾರ್ಯದರ್ಶಿ ಟಿ.ಆರ್.ಜಯರಾಂ ವಹಿಸಿ ಮಾತನಾಡಿ, ಸುನಿಲ ಹೊಸಮನಿ ಹೆಸರು ಕೇಳದ ವಿದ್ಯಾರ್ಥಿಗಳಿಲ್ಲ, ಪ್ರತಿ ಶಾಲೆ,ಕಾಲೇಜಿಗೂ ಹೋಗಿ ಕಾನೂನು ಅರಿವು ನೀಡುವ ಕೆಲಸವನ್ನು ಮಾಡಿದ್ದಾರೆ, ಅವರ ಸೇವೆ ಮರೆಯಲಾಗದು ಎಂದ ಅವರು ಶಾಲೆಯೊಂದಿಗೆ ಅವರ ನಂಟು ಮುಂದುವರೆಯಲಿದ್ದು, ತುಮಕೂರಿನಲ್ಲಿದ್ದರೂ ಅವರ ಸೇವೆಯ ನೆನಪು ಇಲ್ಲಿ ಉಳಿದಿದೆ ಎಂದರು.
ಇದೇ ಸಂದರ್ಭದಲ್ಲಿ ಎನ್ಎಲ್ಎಸ್ಎ ಸಹಾಯಾಣಿ ೧೫೧೦೦, ಮಕ್ಕಳ ಸಹಾಯವಾಣಿ ೧೦೯೮ ಕುರಿತ ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಖಜಾಂಚಿ ಮಮತಾ ಜಯರಾಂ ಉಪಸ್ಥಿತರಿದ್ದರು.
ಚಿತ್ರ : ವರ್ಗಾವಣೆಗೊಂಡಿರುವ ಕೋಲಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನಿಲ್ ಎಸ್.ಹೊಸಮನಿ ಯವರನ್ನು ಕೋಲಾರ ನಗರದ ನವನಳಂದ ಶಾಲೆಯಲ್ಲಿ ಬೀಳ್ಕೊಡಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್