ಗದಗ, 24 ಮೇ (ಹಿ.ಸ.) :
ಆ್ಯಂಕರ್ : ನೈಸರ್ಗಿಕ ಕೃಷಿಯು ಜಾನುವಾರು ಮತ್ತು ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳ ಬಳಕೆಯ ಆಧಾರದ ಮೇಲೆ ಅವಲಂಬಿತವಾಗಿರುವ ರಾಸಾಯನಿಕ ಮುಕ್ತ ಕೃಷಿ ವ್ಯವಸ್ಥೆಯಾಗಿದ್ದು, ಭಾರತೀಯ ಸಂಪ್ರದಾಯದಲ್ಲಿ ಬೇರೂರಿರುವ ಸಮಗ್ರ ನೈಸರ್ಗಿಕ ಕೃಷಿ ಹಾಗೂ ವೈವಿಧ್ಯ ಬೆಳೆ ಪದ್ಧತಿಯಾಗಿರುತ್ತದೆ. ಸದರಿ ಪದ್ಧತಿಯು ಹವಾಮಾನ ಸ್ಥಿತಿ ಸ್ಥಾಪಕತ್ವದೊಂದಿಗೆ ಮಣ್ಣಿನ ಆರೋಗ್ಯವನ್ನು ಸುಧಾರಿಸುವ ಮತ್ತು ಕೃಷಿ ಪರಿಕರಗಳ ವೆಚ್ಚವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.
ನೈಸರ್ಗಿಕ ಕೃಷಿಯು ದೇಸಿ ತಳಿಯ ಜಾನುವಾರುಗಳು, ಜೀವಾಮೃತ, ಬೀಜಾಮೃತ, ಘನ ಜೀವಾಮೃತ, ದಶಪರ್ಣಿ ಮುಂತಾದ ಜೈವಿಕ ಕೃಷಿ ಪರಿಕರಗಳ ಬಳಕೆ, ಬಹುಬೆಳೆ ಪದ್ಧತಿಗಳು, ಮುಂಗಾರು ಪೂರ್ವ ಒಣ ಬಿತ್ತನೆ, ಹೊದಿಕೆ , ಸಾಂಪ್ರದಾಯಿಕ ಬೀಜಗಳ ಬಳಕೆಯೊಂದಿಗೆ ಸ್ಥಳೀಯ, ಸಾಂಪ್ರದಾಯಿಕ ಬೇಸಾಯ ಪದ್ಧತಿಗಳನ್ನು ಒಳಗೊಂಡಿರುತ್ತದೆ.
ಈ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ಸಮಗ್ರ ಪೋಷಕಾಂಶ ನಿರ್ವಹಣೆ ವಿಭಾಗದ ವತಿಯಿಂದ “ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ” ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಯೋಜನೆಯನ್ನು ಪ್ರಮುಖವಾಗಿ ಅರಿವು ಮೂಡಿಸುವ ವಿಧಾನಗಳ ಮೇಲೆ ರೂಪಿಸಲಾಗಿದ್ದು, ಅಂತಿಮವಾಗಿ ಯೋಜನಾ ಪ್ರದೇಶದ ರೈತರನ್ನು ನೈಸರ್ಗಿಕ ಕೃಷಿಯ ವ್ಯಾಪ್ತಿಗೆ ತರುವುದು ಮುಖ್ಯ ಉದ್ದೇಶವಾಗಿರುತ್ತದೆ.
ಯೋಜನೆಯ ಉದ್ದೇಶಗಳು:
ಬಾಹ್ಯವಾಗಿ ಖರೀದಿಸುವ ಪರಿಕರಗಳ ಅವಲಂಬನೆಯನ್ನು ಕಡಿಮೆ ಮಾಡಲು, ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳ ಬಳಕೆಯ ಮೂಲಕ ಪ್ರಕೃತಿ ಆಧಾರಿತ ಸುಸ್ಥಿರ ಕೃಷಿ ಪದ್ಧತಿಗಳ ಉತ್ತೇಜನೆ. ಜಾನುವಾರು ಆಧಾರಿತ ಸಮಗ್ರ ಕೃಷಿ ಪದ್ಧತಿಗಳ ಪ್ರಚಾರ. ನೈಸರ್ಗಿಕ ಕೃಷಿಯ ಹೆಚ್ಚಿನ ಅಳವಡಿಕೆ ಮತ್ತು ಪ್ರಚಾರಕ್ಕಾಗಿ ಆಯಾ ಸ್ಥಳೀಯ ಪ್ರದೇಶಕ್ಕೆ ಸೂಕ್ತವಾದ ನೈಸರ್ಗಿಕ ಕೃಷಿ ಪದ್ಧತಿಗಳನ್ನು ಅಭಿವೃದ್ಧಿಪಡಿಸಲು ನೈಸರ್ಗಿಕ ಕೃಷಿ ನಿರತ ರೈತರ ಅನುಭವ ಹಾಗೂ ವೈಜ್ಞಾನಿಕ ಪರಿಣಿತಿಯನ್ನು ಒಟ್ಟುಗೂಡಿಸುವುದು.
ಕೃಷಿ ವಿಶ್ವ ವಿದ್ಯಾನಿಲಯಗಳ ಸಂಶೋಧನೆ ಮತ್ತು ವಿಸ್ತರಣಾ ಸಾಮರ್ಥ್ಯದ ಬಲವರ್ಧನೆ. ನೈಸರ್ಗಿಕವಾಗಿ ಬೆಳೆದ ರಾಸಾಯನಿಕ ಮುಕ್ತ ಉತ್ಪನ್ನಗಳಿಗೆ ವೈಜ್ಞಾನಿಕ ಮಾನದಂಡಗಳು ಮತ್ತು ರೈತ ಸ್ನೇಹಿ ಪ್ರಮಾಣೀಕರಣ ಪ್ರಕ್ರಿಯೆಗಳನ್ನು ಸಿದ್ಧಪಡಿಸುವುದು. ನೈಸರ್ಗಿಕವಾಗಿ ಬೆಳೆದ ರಾಸಾಯನಿಕ ಮುಕ್ತ ಉತ್ಪನ್ನಗಳಿಗೆ ಪ್ರತ್ಯೇಕ ರಾಷ್ಟ್ರೀಯ ಬ್ರಾಂಡ್ ರಚನೆ ಹಾಗೂ ಪ್ರಚಾರ. ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳುವ ರೈತರಿಗೆ ನೇರ ನಗದು ವರ್ಗಾವಣೆ ಮೂಲಕ ಪ್ರತಿ ಎಕರೆಗೆ ಪ್ರತಿ ವರ್ಷಕ್ಕೆ ರೂ.4000/-ದಂತೆ ಪ್ರೋತ್ಸಾಹಧನ ನೀಡಲು ಅವಕಾಶವಿರುತ್ತದೆ. ಯೋಜನೆಯನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ 50 ಹೆ. ಪ್ರದೇಶದ ಗುಚ್ಛ ಮಾದರಿಯಲ್ಲಿ ಅನುಷ್ಠಾನಗೊಳಿಸಬೇಕಿರುತ್ತದೆ. ಪ್ರತಿ 50 ಹೆ. ಪ್ರದೇಶ ಅಥವಾ ಸುಮಾರು 125 ರೈತರನ್ನೊಳಗೊಂಡ ಗುಚ್ಛಗಳಲ್ಲಿ ಮಾರ್ಗಸೂಚಿಯನ್ವಯ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದೆ.
ಆಯ್ಕೆಯಾದ ಪ್ರತಿ ರೈತರಿಗೆ ಗರಿಷ್ಠ 1 ಎಕರೆ ಪ್ರದೇಶದಲ್ಲಿ ಅನುಷ್ಠಾನಗೊಳಿಸಲು ಯೋಜಿಸಲಾಗಿದೆ. ಗುರುತಿಸಲಾದ ಗುಚ್ಛಗಳಲ್ಲಿ ಪ್ರತಿ ಗುಚ್ಛಕ್ಕೆ 2 ಕೃಷಿ ಸಖಿಯರನ್ನು ಯೋಜನೆಯನ್ನು ಅನುಷ್ಠಾನಗೊಳಿಸಲು ಆಯ್ಕೆ ಮಾಡಲಾಗಿದೆ. ಸ್ಥಳೀಯ ಮಟ್ಟದಲ್ಲಿ ಜೈವಿಕ ಪರಿಕರಗಳ ಉತ್ಪಾದನೆ ಮತ್ತು ಪೂರೈಕೆಗಾಗಿ 3 ಗುಚ್ಛಗಳಿಗೆ 2 ಜೈವಿಕ ಪರಿಕರಗಳ ಸಂಪನ್ಮೂಲ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಸದರಿ ಜೈವಿಕ ಪರಿಕರಗಳ ಸಂಪನ್ಮೂಲ ಕೇಂದ್ರಗಳನ್ನು ಪ್ರಾರಂಭಿಸಲು ರೂ.1.00ಲಕ್ಷ ಸಹಾಯಧನವನ್ನು ನೀಡಲಾಗುವುದು.
ಯೋಜನೆಯ ಮಾಹಿತಿ ಪಡೆಯಲು ಆಸಕ್ತ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಲು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Lalita MP