ಕಾರವಾರ, 22 ಮೇ (ಹಿ.ಸ.) :
ಆ್ಯಂಕರ್ : ಕಾರವಾರ ಜಿಲ್ಲೆಯಲ್ಲಿ ಬುಧವಾರವೂ ಮಳೆ ಆರ್ಭಟ ಮುಂದುವರೆದಿದೆ. ದಿನವಿಡಿ ಸುರಿದ ಮಳೆಯಿಂದಾಗಿ ಶಿರಸಿ ಕುಮಟಾ ರಸ್ತೆಯ ದೇವಿಮನೆ ಘಟ್ಟ ಹಾಗೂ ಬರಗದ್ದೆ ಬಳಿ ಗುಡ್ಡ ಕುಸಿತವಾಗಿದೆ. ಬರಗದ್ದೆ ಮಾರ್ಗದಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ಬಂದ್ ಮಾಡಲಾಗಿದೆ.
ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆ ಮುಂದುವರಿದೆ. ಬುಧವಾರ ಜಿಲ್ಲೆಯ ಘಟ್ಟದ ಮೇಲ್ಭಾಗದ ಹಾಗೂ ಕರಾವಳಿಯ ಎಲ್ಲ ತಾಲೂಕುಗಳಲ್ಲಿಯೂ ಮಳೆಯಾಗಿದೆ.
ಮರ, ವಿದ್ಯುತ್ ಕಂಬಗಳು ಮುರಿದುಬಿದ್ದು ಕೆಲವೆಡೆ ವಿದ್ಯುತ್ ವ್ಯತ್ಯಯವಾಗಿದೆ. ಗಾಳಿ ಮಳೆ ಇರುವ ಹಿನ್ನೆಲೆಯಲ್ಲಿ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಯನ್ನು ಕೂಡ ಸಂಪೂರ್ಣ ಬಂದ್ ಮಾಡಲಾಗಿದೆ.
ಇನ್ನು ರಾತ್ರಿ ಹಗಲು ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಶಿರಸಿ ಕುಮಟಾ ರಸ್ತೆಯ ದೇವಿಮನೆ ಘಟ್ಟದಲ್ಲಿ ಸಣ್ಣ ಪ್ರಮಾಣದಲ್ಲಿ ಗುಡ್ಡ ಕುಸಿತವಾಗಿತ್ತು. ಕೆಲ ಹೊತ್ತಿನ ಬಳಿಕ ಹೆದ್ದಾರಿಯಲ್ಲಿ ಬಿದ್ದಿದ್ದ ಕಲ್ಲುಮಣ್ಣುಗಳನ್ನು ತೆರವು ಮಾಡಲಾಗಿದೆ. ಇದಾದ ಬಳಿಕ ಅದೇ ಹೆದ್ದಾರಿಯಲ್ಲಿ ಕುಮಟಾದ ಬರಗದ್ದೆ ಬಳಿ ಹೆದ್ದಾರಿ ಕುಸಿತವಾಗಿದೆ.
ಮುಂಜಾನೆಯಿಂದಲೇ ಸಣ್ಣದಾಗಿ ಕುಸಿಯುತ್ತಿದ್ದ ಹೆದ್ದಾರಿ ಮಧ್ಯಾಹ್ನದ ಬಳಿಕ ಅಪಾಯದ ಮಟ್ಟದಲ್ಲಿ ಕುಸಿದಿದ್ದು, ಖೈರೆಕ್ರಾಸ್ನಿಂದ ಕತಗಾಲ್ ತೆರಳುವ ಹೆದ್ದಾರಿ ಮಾರ್ಗವನ್ನು ಬಂದ್ ಮಾಡಲಾಗಿದೆ. ಈ ಮಾರ್ಗದಲ್ಲಿ ಸಂಚಾರ ಮಾಡುವವರು ಇದೀಗ ದಿವಗಿ ಮಾರ್ಗವಾಗಿ ಶಿರಸಿಗೆ ತೆರಳಬೇಕಾಗಿದೆ.
ಮುಂಡಗೋಡ ಪಟ್ಟಣದ ನಂದೀಶ್ವರ ಕೆರೆಯ ಒಡ್ಡು ಕುಸಿದು ಅಪಾರ ಪ್ರಮಾಣದ ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗುರುವಾರವೂ ಮಳೆ ಮುಂದುವರಿಯುವ ಬಗ್ಗೆ ಹವಮಾನ ಇಲಾಖೆ ಮುನ್ಸೂಚನೆ ನೀಡಿದ್ದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa