ಡಿಸಿಸಿ ಬ್ಯಾಂಕ್ ಚುನಾವಣೆಗೆ ಶಾಸಕರ ಸ್ಪರ್ಧೆಗೆ ದಲಿತ ಸಿಂಹ ಸೇನೆ ವಿರೋಧ
ಡಿಸಿಸಿ ಬ್ಯಾಂಕ್ ಚುನಾವಣೆಗೆ ಶಾಸಕರ ಸ್ಪರ್ಧೆಗೆ ದಲಿತ ಸಿಂಹ ಸೇನೆ ವಿರೋಧ
ಕೋಲಾರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಲಿತ ಸಿಂಹ ಸೇನೆಯ ರಾಜ್ಯಾಧ್ಯಕ್ಷ ಹೂಹಳ್ಳಿ ಪ್ರಕಾಶ್ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ಶಾಸಕರು ಸ್ಪರ್ಧೆ ಮಾಡುವುದನ್ನು ತೀವ್ರವಾಗಿ ವಿರೋಧಿಸಿದರು.


ಕೋಲಾರ, ಮೇ.೨೨ (ಹಿ.ಸ) :

ಆ್ಯಂಕರ್ : ಅಧಿಕಾರ ಎಂಬುದು ಕೆಲವೇ ಜನರ ಕೈಯಲ್ಲಿ ಇರದೆ ಹಲವರಿಗೆ ದಕ್ಕ ಬೇಕೆಂಬುದೇ ಸಂವಿಧಾನದ ಆಶಯ ಆಗಿದೆ. ಪ್ರಸ್ತುತ ಡಿ.ಸಿ.ಸಿ.ಬ್ಯಾಂಕ್ ಮತ್ತು ಕೋಲಾರ ಹಾಲು ಒಕ್ಕೂಟದ ನಿರ್ದೇಶಕ ಸ್ಥಾನಗಳಿಗೆ ಶಾಸಕರು ಚುನಾವಣೆಗೆ ಸ್ಪರ್ಧೆ ಮಾಡುತ್ತಿರುವುದು ಸರಿಯಲ್ಲ. ಅವರು ಈಗಾಗಲೇ ಜನರಿಂದ ನೇರವಾಗಿ ಆಯ್ಕೆಯಾಗಿ ಶಾಸನ ಸಭೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ಹಲವಾರು ಮಂದಿ ಸಹಕಾರಿ ಧುರೀಣರಿದ್ದಾರೆ. ಅವರು ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಲು ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ರಾಜ್ಯ ದಲಿತ ಸಿಂಹ ಸೇನೆಯ ರಾಜ್ಯಾಧ್ಯಕ್ಷರಾದ ಹೂಹಳ್ಳಿ ಪ್ರಕಾಶ್ ಒತ್ತಾಯಿಸಿದರು.

ಮಾಧ್ಯಮದರೊಂದಿಗೆ ಮಾತನಾಡಿದ ಅವರು ಪ್ರಸ್ತುತ ಶಾಸಕರು ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡಿ ಕ್ಷೇತ್ರದ ಅಭಿವೃದ್ಧಿ ಮಾಡಲಿ ಸಾಕು,ಹಣ ಲೂಟಿ ಮಾಡವ ಉದ್ದೇಶ ಹೊಂದಿರುವ ಶಾಸಕರು ಸಹಕಾರ ಕ್ಷೇತ್ರದಲ್ಲಿ ಅವರ ಹಸ್ತಕ್ಷೇಪ ಮಾಡಲು ಹೊರಟಿರುವುದು ಎಷ್ಟು ಸರಿ,ಬಹಳಷ್ಟು ಸಾಮಾನ್ಯ ಜನರು ಹಾಗೂ ರೈತರು ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಕಾದುಕುಳಿತಿದ್ದು, ಅವರಿಗೆ ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದರು.

ಈಗಾಗಲೇ ಜಾತಿ ಕದ್ದು ದಲಿತರಿಗೆ ಮೋಸ ಮಾಡಿರುವ ಕೊತ್ತೂರು ಮಂಜುನಾಥ್ ಡಿ.ಸಿ.ಸಿ.ಬ್ಯಾಂಕ್‌ಗೆ ಸ್ಪರ್ಧೆ ಮಾಡುವ ಮೂಲಕ ರೈತರಿಗೂ ಮೋಸ ಮಾಡಲು ಹೊರಟಿರುವುದು ನಾಚಿಕೆಗೇಡಿನ ವಿಷಯವಾಗಿದೆ. ಇದಕ್ಕೆ ಕುಮ್ಮಕ್ಕು ನೀಡುತ್ತಿರುವ ಎಂ.ಎಲ್.ಸಿ ಅನಿಲ್ ಕುಮಾರ್ ತಮ್ಮ ಬೆಂಬಲಕ್ಕೆ ನಿಂತಿದ್ದ ಗೋವಿಂದ ಗೌಡರ ಬೆನ್ನಿಗೆ ಚೂರಿ ಹಾಕಿ ಶಾಸಕರ ಪರ ನಿಂತಿರುವುದು ಎಷ್ಟು ಸರಿ ಎಂದು ಅವರು ಆತ್ಮ ವಿಮರ್ಶೆ ಮಾಡಿಕೊಳ್ಳಲಿ ಎಂದರು.

ಮುಚ್ಚುವ ಹಂತಕ್ಕೆ ಹೋಗಿದ್ದ ಡಿ.ಸಿ.ಸಿ. ಬ್ಯಾಂಕ್ ಗೆ ಗೋವಿಂದ ಗೌಡರು ಜೀವ ತುಂಬಿ ಮುನ್ನೆಡಿಸಿದ್ದೂ ಅಲ್ಲದೆ ಹಲವು ಶಾಸಕರುಗಳ ಗೆಲುವಿಗೆ ಕಾರಣರಾದರು, ಅಂತಹ ವ್ಯಕ್ತಿಯನ್ನು ತುಳಿಯುವ ಪ್ರಯತ್ನ ಮಾಡುತ್ತಿರುವ ಶಾಸಕರುಗಳ ನಡೆ ಸರಿಯೆ ಎಂಬುದನ್ನು ಡಿ.ಸಿ.ಸಿ.ಬ್ಯಾಂಕ್ ಮತದಾರರು ಅರಿತು ಸೂಕ್ತ ವ್ಯಕ್ತಿಗಳಿಗೆ ಮತ ಚಲಾಯಿಸುವಂತೆ ಮನವಿ ಮಾಡಿದರು.

ಕೋಲಾರ ಹಾಲು ಒಕ್ಕೂಟದಲ್ಲಿ ಕೋಟ್ಯಾಂತರ ಹಣ ದುರುಪಯೋಗ ಆಗಿದೆ ಎಂದು ಶಾಸಕ ಕೆ.ವೈ.ನಂಜೇಗೌಡರ ವಿರುದ್ಧ ಅವರದೇ ಪಕ್ಷದ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಆರೋಪ ಮಾಡುತ್ತಿದ್ದು,ನಂಜೇಗೌಡರು ತಮ್ಮ ತಪ್ಪುಗಳನ್ನು ಮುಚ್ಚುಕೊಳ್ಳಲು ನಾರಾಯಣಸ್ವಾಮಿ ರವರ ಡಿಲಿಗೇಟ್ ಅನರ್ಹತೆ ಮಾಡಿರುವುದು ಅವರ ನಿಜ ಬಣ್ಣ ಜನತೆಗೆ ತಿಳಿದಿದೆ ಎಂದು ಟೀಕಿಸಿದರು.

ಹಿಂದೆ ಡಿ.ಸಿ.ಸಿ.ಬ್ಯಾಂಕ್ ಗೆ ಸ್ಪರ್ಧೆ ಮಾಡಿದ್ದ ಶ್ರೀನಿವಾಸಪುರದ ಬುಲೆಟ್ ವೆಂಕಟರೆಡ್ಡಿ ಮಾತನಾಡಿ ಎಲ್ಲಾ ಅಧಿಕಾರಗಳು ಶಾಸಕರುಗಳಿಗೆ ಅವರ ಮಕ್ಕಳಿಗೆ, ಅವರ ಸಂಬAಧಿಕರಿಗೆ ಸಿಗುವಂತಾದರೆ ಬೇರೆ ಸಾಮಾನ್ಯ ರೈತರು ಏನು ಮಾಡಬೇಕು ಎಂದು ಪ್ರಶ್ನಿಸಿದರು. ಈಗಾಗಲೇ ಮಹಿಳಾ ಸಂಘಗಳಿಗೆ ಸಾಲ ಸಿಗುತ್ತಿಲ್ಲ. ಬ್ಯಾಂಕ್‌ನಲ್ಲಿ ರೈತರು ಇಟ್ಟಿರುವ ಠೇವಣಿ ಗಳ ಮೇಲೆ ಕಣ್ಣು ಹಾಕಿರುವ ಶಾಸಕರು ಅದನ್ನೂ ಲೂಟಿ ಮಾಡಿ ಬ್ಯಾಂಕ್‌ನ್ನು ದಿವಾಳಿ ಮಾಡಿ ಮುಚ್ಚಲು ಈ ಬಾರಿ ಕಣಕ್ಕೆ ಇಳಿಯುತ್ತಿದ್ದಾರೆಂದು ಟೀಕಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವೆಂಕಟೇಶ್, ರೆಡ್ಡಿ, ವೆಂಕಟೇಶ್ ಗೌಡ, ಹಮ್ಜದ್ ಪಾಷ, ಚಂದ್ರು, ಅರುಣ್ ಕುಮಾರ್, ಪ್ರಕಾಶ್, ಮಧು, ಮಂಜುನಾಥ್, ಜಂಬಾಪುರ ವೆಂಕಟೇಶಪ್ಪ ಉಪಸ್ಥಿತರಿದ್ದರು.

ಚಿತ್ರ : ಕೋಲಾರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಲಿತ ಸಿಂಹ ಸೇನೆಯ ರಾಜ್ಯಾಧ್ಯಕ್ಷ ಹೂಹಳ್ಳಿ ಪ್ರಕಾಶ್ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ಶಾಸಕರು ಸ್ಪರ್ಧೆ ಮಾಡುವುದನ್ನು ತೀವ್ರವಾಗಿ ವಿರೋಧಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande