ಪರಮೇಶ್ವರ್‌ ಮೇಲೆ ಇಡಿ ದಾಳಿಗೆ ಮಾಹಿತಿ ನೀಡಿದ್ದೇ ಕಾಂಗ್ರೆಸ್‌: ಪ್ರಹ್ಲಾದ ಜೋಶಿ
ಗದಗ, 22 ಮೇ (ಹಿ.ಸ.) ಆ್ಯಂಕರ್: ಕರ್ನಾಟಕ ಗೃಹ ಸಚಿವ ಪರಮೇಶ್ವರ್‌ ಮೇಲೆ ಕ್ರಮಕ್ಕಾಗಿ ಇಡಿಗೆ ಕಾಂಗ್ರೆಸ್ಸಿನ ಒಂದು ಗುಂಪು ಮಾಹಿತಿ ನೀಡಿದೆ. ಅದರಂತೆ ಇಡಿ ತನ್ನ ಕರ್ತವ್ಯ ನಿಭಾಯಿಸುತ್ತಿದೆ ಅಷ್ಟೇ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ. ಗದಗದಲ್ಲಿಂದು ಗೃಹ ಸಚಿವ ಪರಮೇಶ್ವರ್ ಶಿಕ್ಷಣ ಸಂಸ್
ಪೋಟೋ


ಗದಗ, 22 ಮೇ (ಹಿ.ಸ.)

ಆ್ಯಂಕರ್:

ಕರ್ನಾಟಕ ಗೃಹ ಸಚಿವ ಪರಮೇಶ್ವರ್‌ ಮೇಲೆ ಕ್ರಮಕ್ಕಾಗಿ ಇಡಿಗೆ ಕಾಂಗ್ರೆಸ್ಸಿನ ಒಂದು ಗುಂಪು ಮಾಹಿತಿ ನೀಡಿದೆ. ಅದರಂತೆ ಇಡಿ ತನ್ನ ಕರ್ತವ್ಯ ನಿಭಾಯಿಸುತ್ತಿದೆ ಅಷ್ಟೇ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

ಗದಗದಲ್ಲಿಂದು ಗೃಹ ಸಚಿವ ಪರಮೇಶ್ವರ್ ಶಿಕ್ಷಣ ಸಂಸ್ಥೆ ಮೇಲೆ ಇಡಿ ದಾಳಿ ಕುರಿತ ಮಾದ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಗೃಹ ಸಚಿವರ ಮೇಲೆ ಕ್ರಮವಾಗಬೇಕೆಂದು ಇಡಿಗೆ ಮಾಹಿತಿ ನೀಡಿದ ಕಾಂಗ್ರೆಸ್ಸಿಗರು ಯಾರೆಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಗೊತ್ತಿದೆ. ಎಲ್ಲ ಗೊತ್ತಿದ್ದರೂ ಈಗ ಡ್ರಾಮಾ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪರಮೇಶ್ವರ್‌ ಒಬ್ಬ ಸಭ್ಯ ರಾಜಕಾರಣಿ. ಅವರ ಬಗ್ಗೆ ನಮಗೆ ಗೌರವವಿದೆ. ಅವರಿಗೆ ತೊಂದರೆ ಕೊಡಬೇಕು ಎಂಬ ಉದ್ದೇಶ ತಮ್ಮ ಸರ್ಕಾರಕ್ಕಿಲ್ಲ. ಆದರೆ, ಮಾಹಿತಿ ಸಿಕ್ಕ ಮೇಲೆ ಯಾರೇ ಆದರೂ ಸರಿ ಇಡಿ ತನ್ನ ಕೆಲಸವನ್ನು ತಾನು ಮಾಡುತ್ತದೆ ಎಂದರು.

ಬಂಗಾರವನ್ನು ಕಳ್ಳತನದಿಂದ ತರುವುದರಿಂದ ಹಿಡಿದು ಈಗಿನ ಎಲ್ಲ ಬೆಳವಣಿಗೆಗೂ ಕಾಂಗ್ರೆಸ್ಸಿನ ಆ ಒಂದು ಗುಂಪೇ ಕಾರಣ. ಕಾನೂನು ಪ್ರಕಾರ ಕ್ರಮವಾಗಲೇಬೇಕು ಎಂದು ಆ ಗುಂಪು ಎಲ್ಲಾ ಮಾಹಿತಿಯನ್ನು ಇಡಿಗೆ ಕಳಿಸುತ್ತಿದೆ. ಇದು ಸಿಎಂ ಸಿದ್ದರಾಮಯ್ಯ ಅವರಿಗೆ ಗೊತ್ತಿರುವ ವಿಚಾರವೆ. ಗೊತ್ತಿಲ್ಲದಿದ್ದರೆ ಅವರದ್ದೇ ಗುಪ್ತಚರ ಮೂಲಕ ತಿಳಿದುಕೊಳ್ಳಲಿ ಎಂದು ಹೇಳಿದರು.

2013ರಲ್ಲಿ ಪರಮೇಶ್ವರ್ ಅವರನ್ನು ಸೋಲಿಸಿದ್ದು ಯಾರು? ಎಂಬುದು ಜನಕ್ಕೆ ಗೊತ್ತಿದೆ. ಅಷ್ಟು ಸುಲಭಕ್ಕೆ ಇತಿಹಾಸ ಮರೆಯಲಾರರು. ಪರಮೇಶ್ವರ್ ಅವರನ್ನು ಸೋಲಿಸಿದ್ದು ಸಿದ್ದರಾಮಯ್ಯ ಅವರೆಂಬುದು ಜಗಜ್ಜಾಹಿರವಾದ ವಿಚಾರ ಎಂದು ಸಚಿವ ಪ್ರಲ್ಹಾದ ಜೋಶಿ ಟಾಂಗ್‌ ಕೊಟ್ಟರು.

ಪರಮೇಶ್ವರ್‌ ಗೃಹ ಸಚಿವರೆಂಬ ಕಾರಣಕ್ಕೆ, ಕಾಂಗ್ರೆಸ್ಸಿಗರೆಂಬ ಕಾರಣಕ್ಕೆ ಇಡಿ ದಾಳಿ ಮಾಡಿಲ್ಲ. ಕಾನೂನು ಪ್ರಕಾರ ತಪ್ಪು ಮಾಡಿದರೆ ಯಾರೇ ಆದರೂ ಇಡಿ ಕ್ರಮ ಕೈಗೊಳ್ಳುತ್ತದೆ. ಅದು ನಾನೇ ಆಗಲಿ, ಪರಮೇಶ್ವರ್‌ ಆಗಲಿ, ಸಿದ್ದರಾಮಯ್ಯ ಅವರಾಗಲಿ ಅಥವಾ ನಮ್ಮ ಪಾರ್ಟಿಯವರೇ ಆಗಲಿ ಯಾರನ್ನೂ ಬಿಡುವುದಿಲ್ಲ ಎಂದು ಸಚಿವ ಜೋಶಿ ಸ್ಪಷ್ಟಪಡಿಸಿದರು.

ಇಡಿ ದಾಳಿ ನಡೆಸಿದರೆ ರಾಜಕಾರಣ ಬೆರೆಸುವುದು ಸರಿಯಲ್ಲ. ಯಾರೇ ತಪ್ಪು ಮಾಡಿದರೂ ಅವರ ಮೇಲೆ ಕಾನೂನು ಪ್ರಕಾರ ಕ್ರಮ ಆಗುತ್ತದೆ. ನಿಮ್ಮ ಪಕ್ಷದವರು ಏನೇನು ಮಾಡಿದ್ದಾರೆ? ಎಂಬುದನ್ನು ಬಿಚ್ಚಿಟ್ಟರೆ ಮುಂದೆ ನಿಮಗೇ ತೊಂದರೆ ಆಗುತ್ತದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ಕೊಟ್ಟರು.

ರಾಜ್ಯದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜನೌಷಧಿ ಕೇಂದ್ರ ತೆಗೆಯುವ ರಾಜ್ಯ ಸರ್ಕಾರದ ಆದೇಶ ಕುರಿತು ಪ್ರತಿಕ್ರಿಯಿಸಿದ ಸಚಿವರು, ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧಿ ಕೊಡುತ್ತೇವೆ ಎನ್ನುತ್ತಿದ್ದಾರೆ. ಎಲ್ಲಾ ಆಸ್ಪತ್ರೆಗಳಲ್ಲಿ ಎಲ್ಲಾ ಔಷಧಿ ಉಚಿತವಾಗಿ ಸಿಗುತ್ತದೆಯೇ? ಎಂದು ಪ್ರಶ್ನಿಸಿದರು.

ಜನೌಷಧಿ ಕೇಂದ್ರ ಬಂದ್‌, ಮರುಪರಿಶೀಲಿಸಲಿ:

ಉತ್ತರ ಕರ್ನಾಟಕದ ಪ್ರತಿಷ್ಠಿತ ಕಿಮ್ಸ್‌ನಲ್ಲಿ ವೈದ್ಯರು ಔಷಧವನ್ನು ಹೊರಗಡೆ ಬರೆದುಕೊಡುತ್ತಾರೆ. ರಾಜ್ಯ ಸರ್ಕಾರ ಉಚಿತ ಔಷಧಿ ಕೊಟ್ಟರೆ ಜನರೇಕೆ ಬೇರೆ ಕಡೆ ಔಷಧಿ ಖರೀದಿಸುತ್ತಿದ್ದಾರೆ? ಬಡವರಿಂದ ದುಬಾರಿ ಔಷಧಿ ಖರೀದಿಸಲಾಗದೆ ಪ್ರಧಾನಮಂತ್ರಿ ಜನೌಷಧಿ ಕೇಂದ್ರಕ್ಕೆ ತೆರಳುತ್ತಿದ್ದಾರೆ. ಕಡಿಮೆ ಬೆಲೆಗೆ ಸಿಗುವ ಔಷಧಕ್ಕೂ ಈ ಸರ್ಕಾರ ಕಲ್ಲು ಹಾಕುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಜನೌಷಧಿ ಕೇಂದ್ರ ಬಂದ್ ಮಾಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ವಿರೋಧಿಸುತ್ತೇನೆ. ಜನೌಷಧಿ ಕೇಂದ್ರ ಪ್ರಧಾನಮಂತ್ರಿ ಹೆಸರಲ್ಲಿರುವುದಕ್ಕೆ ಇವರು ದ್ವೇಷ ಮಾಡುತ್ತಿದ್ದಾರೆ. ಇಂಥದ್ದನ್ನು ಬಿಟ್ಟು ಬಡವರ ಹಿತದೃಷ್ಟಿಯಿಂದ ಜನೌಷಧಿ ಕೇಂದ್ರದ ಬಗ್ಗೆ ಮರು ಪರಿಶೀಲನೆ ಮಾಡಬೇಕು ಎಂದು ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande