
ಶಿವಮೊಗ್ಗ, 07 ಡಿಸೆಂಬರ್ (ಹಿ.ಸ.) :
ಆ್ಯಂಕರ್ : 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಕೇಂದ್ರ ಸರ್ಕಾರ ನಿಗದಿಪಡಿಸಿದ ಬೆಲೆಯಂತೆ ಶಿವಮೊಗ್ಗ ಜಿಲ್ಲೆಯ ರೈತರಿಂದ ಭತ್ತವನ್ನು ಖರೀದಿಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ
ಕೇಂದ್ರ ಸರ್ಕಾರವು ಭತ್ತವನ್ನು ಖರೀದಿಸಲು ಕನಿಷ್ಟ ಬೆಂಬಲವನ್ನು ಬೆಲೆ ನಿಗದಿಪಡಿಸಿದ್ದು ಸಾಮಾನ್ಯ ಭತ್ತ ಪ್ರತಿ ಕ್ವಿಂಟಾಲ್ಗೆ ರೂ.2369, ಗ್ರೇಡ್ ಎ ಭತ್ತ ಪ್ರತಿ ಕ್ವಿಂಟಾಲ್ಗೆ ರೂ.2389 ರಂತೆ ಖರೀದಿಸಲಾಗುವುದು. ಈ ಯೋಜನೆಯಡಿ ಭತ್ತ ಖರೀದಿಸಲು ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ಮತ್ತು ನಿಯಮಿತ ವತಿಯಿಂದ ನೇಮಿಸಲಾಗುವ ಉಪ ಏಜೆನ್ಸಿಗಳಾದ ಟಿಎಪಿಸಿಎಂಎಸ್/ಪಿಎಸಿಎಸ್/ಎಫ್ಪಿಓ/ಎಸ್ಜಿಎಸ್ ಗಳನ್ನು ಸಂಗ್ರಹಣಾ ಏಜೆನ್ಸಿಗಳನ್ನಾಗಿ ನೇಮಿಸಲಾಗಿದೆ.
ಪ್ರತಿ ರೈತರಿಂದ ಪ್ರತಿ ಎಕರೆಗೆ 25 ಕ್ವಿಂಟಾಲ್ನಂತೆ ಗರಿಷ್ಟ 50 ಕ್ವಿಂಟಾಲ್ ಭತ್ತವನ್ನು ಖರೀದಿಸಲಾಗುವುದು. ಜಿಲ್ಲೆಯ ಎಲ್ಲಾ 7 ತಾಲ್ಲೂಕುಗಳ ಎಪಿಎಂಸಿ ಯಾರ್ಡ್ಗಳಲ್ಲಿರುವ ಕೆಎಫ್ಸಿಎಸ್ಸಿ ಸಗಟು ಮಳಿಗೆಗಳಲ್ಲಿ ಭತ್ತ ಖರೀದಿ ಕೇಂದ್ರ ತೆರೆದು ರೈತರಿಂದ ಭತ್ತ ಖರೀದಿಸಲಾಗುವುದು.
ರೈತರು ಕೃಷಿ ಇಲಾಖೆಯಿಂದ ಜಾರಿಗೊಳಿಸಿರುವ ಫ್ರ್ರೂಟ್ಸ್ ಐಡಿಯೊಂದಿಗೆ ಖರೀದಿ ಕೇಂದ್ರಗಳಲ್ಲಿ ದಿ:31-12-2025 ರವರೆಗೆ ಭತ್ತವನ್ನು ನೊಂದಾಯಿಸಿಕೊಳ್ಳಬಹುದು. ಹಾಗೂ ದಿ:28-02-2026 ರ ಅವಧಿಯವರೆಗೆ ರೈತರಿಂದ ಭತ್ತವನ್ನು ಖರೀದಿ ಮಾಡಲಾಗುವುದು. ರೈತ ಬಾಂಧವರು ಈ ಯೋಜನೆಯ ಸದುಪಯೋಗ ಪಡೆಯಬೇಕೆಂದು ಪ್ರಕಟಣೆ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa