
ನವದೆಹಲಿ, 06 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಜಾಗತಿಕವಾಗಿ ಭಾರತ ಪ್ರಮುಖ ಪಾತ್ರ ವಹಿಸಿದ್ದು, 2025-26ನೇ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು 31.25 GW ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯ ಸೇರ್ಪಡೆಯಾಗಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಒಡಿಶಾದ ಪುರಿಯಲ್ಲಿ ನಡೆದ ಗ್ಲೋಬಲ್ ಎನರ್ಜಿ ಲೀಡರ್ಸ್ ಶೃಂಗಸಭೆ ಉದ್ದೇಶಿಸಿ ಮಾತನಾಡಿ, ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತ 24.28 GW ಸೌರಶಕ್ತಿ ಸೇರಿದಂತೆ 31.25 GW ಪಳೆಯುಳಿಕೆಯೇತರ ಸಾಮರ್ಥ್ಯವನ್ನು ದಾಖಲಿಸಿದೆ ಎಂದರು.
2022 ರಲ್ಲಿ 1 TW ನವೀಕರಿಸಬಹುದಾದ ಇಂಧನ ಸಾಮರ್ಥ್ಯಕ್ಕೆ 70 ವರ್ಷಗಳನ್ನು ತೆಗೆದುಕೊಂಡಿದ್ದರೆ, ಎರಡೇ ವರ್ಷದಲ್ಲಿ ಅಂದರೆ 2024ರ ವೇಳೆಗೆ 2 TW ಅನ್ನು ಸಾಧಿಸಲಾಗಿದೆ. ಜಾಗತಿಕವಾಗಿ ಈ ಸ್ಫೋಟಕ ಏರಿಕೆಗೆ ಭಾರತ ಪ್ರಮುಖ ಚಾಲಕವಾಗಿದೆ ಎಂದು ಪ್ರತಿಪಾದಿಸಿದರು.
ಕಳೆದ 11 ವರ್ಷಗಳಲ್ಲಿ ದೇಶದ ಸೌರ ಸಾಮರ್ಥ್ಯ ಕೇವಲ 2.8 GW ಇತ್ತು. ಇದೀಗ ಸುಮಾರು 130 GW ಗೆ ಬೆಳೆದಿದೆ. ಇದು 4,500%ಕ್ಕಿಂತ ಹೆಚ್ಚು ಏರಿಕೆಯಾಗಿದೆ. 2022 ಮತ್ತು 2024ರ ನಡುವೆ, ಭಾರತ ಜಾಗತಿಕ ಸೌರ ಸೇರ್ಪಡೆಗಳಿಗೆ 46 GW ಕೊಡುಗೆ ನೀಡಿದ್ದು, ಮೂರನೇ ಅತಿದೊಡ್ಡ ಕೊಡುಗೆದಾರ ರಾಷ್ಟ್ರವಾಗಿದೆ ಎಂದು ಹೇಳಿದರು.
ಭಾರತ ವಿಶ್ವದ 5ನೇ ಅತಿದೊಡ್ಡ ಕಲ್ಲಿದ್ದಲು ನಿಕ್ಷೇಪಗಳನ್ನು ಹೊಂದಿದ್ದಲ್ಲದೆ, ಕಲ್ಲಿದ್ದಲಿನ ಎರಡನೇ ಅತಿದೊಡ್ಡ ಬಳಕೆದಾರ ರಾಷ್ಟ್ರವಾಗಿದೆ. ಹೇರಳ ಕಲ್ಲಿದ್ದಲು ಇದ್ದರೂ ನವೀಕರಿಸಬಹುದಾದ ಇಂಧನ ಪರಿವರ್ತನೆ ವೇಗ ಪಡೆಯುತ್ತಿದೆ. ಕಲ್ಲಿದ್ದಲು ಮತ್ತು ನವೀಕರಿಸಬಹುದಾದ ಶಕ್ತಿಯೊಂದಿಗೆ ಸ್ಥಿರವಾಗಿ ಸಮತೋಲನಗೊಳಿಸುತ್ತಿದೆ ಎಂದರು.
2025ರ ಜಾಗತಿಕ ಇಂಧನ ನಾಯಕರ ಶೃಂಗಸಭೆ :
ಪುರಿಯಲ್ಲಿ ನಡೆಯುವ ಜಾಗತಿಕ ಇಂಧನ ನಾಯಕರ ಶೃಂಗಸಭೆ (GELS) ಭಾರತದ ಶುದ್ಧ ಇಂಧನ ಪರಿವರ್ತನೆಯನ್ನು ವೇಗಗೊಳಿಸಲು ನೀತಿ ನಿರೂಪಕರು, ನಾವೀನ್ಯಕಾರರು ಮತ್ತು ಉದ್ಯಮ ನಾಯಕರನ್ನು ಒಟ್ಟುಗೂಡಿಸುವಲ್ಲಿ ಮಹತ್ತರ ಹೆಜ್ಜೆಯಾಗಿದೆ ಎಂದರು.
ಒಡಿಶಾ ಬಲವಾದ ಶುದ್ಧ ಇಂಧನ ಅಳವಡಿಕೆಯನ್ನು ಪ್ರದರ್ಶಿಸುತ್ತಿದೆ. 3.1 GW ಗಿಂತ ಹೆಚ್ಚು ನವೀಕರಿಸಬಹುದಾದ ಸಾಮರ್ಥ್ಯದೊಂದಿಗೆ ಈಗ ರಾಜ್ಯದ ಒಟ್ಟು ಸ್ಥಾಪಿತ ವಿದ್ಯುತ್ ಸಾಮರ್ಥ್ಯದ ಶೇ.34ಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ ಎಂದು ಸಚಿವ ಜೋಶಿ ಸಂತಸ ವ್ಯಕ್ತಪಡಿಸಿದರು.
ಪಿಎಂ ಸೂರ್ಯ ಘರ್ ಯೋಜನೆಯಡಿ 1.6 ಲಕ್ಷ ಮನೆಗಳು ಮೇಲ್ಛಾವಣಿ ಸೌರಶಕ್ತಿಗಾಗಿ ಅರ್ಜಿ ಸಲ್ಲಿಸಿದ್ದು, 23,000ಕ್ಕೂ ಹೆಚ್ಚು ಸ್ಥಾಪನೆಗಳು ಪೂರ್ಣಗೊಂಡಿವೆ ಮತ್ತು 19,200ಕ್ಕೂ ಹೆಚ್ಚು ಕುಟುಂಬಗಳು ₹147 ಕೋಟಿಗಿಂತ ಹೆಚ್ಚಿನ ಸಬ್ಸಿಡಿಯನ್ನು ನೇರವಾಗಿ ಬ್ಯಾಂಕ್ ಖಾತೆಗೆ ಪಡೆದಿವೆ ಎಂದು ಹೇಳಿದರು.
ಹೊಸ ಯುಟಿಲಿಟಿ-ಲೆಡ್ ಅಗ್ರಿಗೇಷನ್ (ಯುಎಲ್ಎ) ಮಾದರಿಯಡಿ ಒಡಿಶಾದಲ್ಲಿ ಮುಂದಿನ ದಿನಗಳಲ್ಲಿ 1.5 ಲಕ್ಷ ರೂಫ್ಟಾಪ್ ಸೌರ ಘಟಕಗಳು ಸ್ಥಾಪನೆಯಾಗಲಿದ್ದು, 7-8 ಲಕ್ಷ ನಾಗರಿಕರನ್ನು ಸಬಲೀಕರಣಗೊಳಿಸುತ್ತದೆ ಎಂದು ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa