ಜನರ ನೋವಿಗೆ ಅಧಿಕಾರ ಶಾಹಿ ಮಿಡಿಯಬೇಕು : ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ
ಜನರ ನೋವಿಗೆ ಅಧಿಕಾರ ಶಾಹಿ ಮಿಡಿಯಬೇಕು ; ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ
ಕೋಲಾರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಬುಧವಾರ ಪತ್ರಕರ್ತರೊಂದಿಗೆ ಸಂವಾದ ನಡೆಸಿದರು.


ಕೋಲಾರ, 31 ಡಿಸೆಂಬರ್ (ಹಿ.ಸ) :

ಆ್ಯಂಕರ್ : ಆಡಳಿತ ವ್ಯವಸ್ಥೆಯಲ್ಲಿ ಶಿಕ್ಷಣ, ಎಂಪತಿ (ಸಂವೇದನಾಶೀಲತೆ) ಹಾಗೂ ಎನ್ಫೋರ್ಸ್ಮೆಂಟ್ (ಕಠಿಣ ಜಾರಿ) ಎಂಬ ಮೂರು 'ಇ' ಮಂತ್ರಗಳು ಅತ್ಯಗತ್ಯ. ಕೇವಲ ದಂಡನೆ ಅಥವಾ ಕಾನೂನು ಕ್ರಮದಿಂದ ಬದಲಾವಣೆ ಸಾಧ್ಯವಿಲ್ಲ, ಜನರ ನೋವಿಗೆ ಮಿಡಿಯುವ ಗುಣ ಅಧಿಕಾರಶಾಹಿಯಲ್ಲಿ ಬಂದಾಗ ಮಾತ್ರ ಜನಪರ ಆಡಳಿತ ನೀಡಲು ಸಾಧ್ಯ, ಎಂದು ಕೋಲಾರ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅಭಿಪ್ರಾಯಪಟ್ಟರು.

ಜಿಲ್ಲಾಧಿಕಾರಿಯಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ವರ್ಷದ ಕೊನೆಯ ದಿನವಾದ ಇಂದು ಕೋಲಾರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ, ಮೀಟ್ ದಿ ಪ್ರೆಸ್ –ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಅಧಿಕಾರಿಗಳು ಸವಾಲು, ಸಮಸ್ಯೆಗಳನ್ನು ಮುಕ್ತವಾಗಿ ಸ್ವೀಕರಿಸಿ ಅದಕ್ಕೇ ಸೂಕ್ತ ಪರಿಹಾರ ಕಂಡುಕೊಳ್ಳಬೇಕು, ಇವರಲ್ಲಿ ವಿಶ್ವಾಸಾರ್ಹತೆ, ಸಮಗ್ರತೆ ಹಾಗೂ ಕೆಲಸದಲ್ಲಿ ಬದ್ದತೆ ಇರಬೇಕಿದೆ. ಸರ್ಕಾರದ ಯೋಜನೆಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದರ ಜೊತೆಗೆ ಅವುಗಳನ್ನು ಜಿಲ್ಲೆಯ ಕಟ್ಟಕಡೆಯ ವ್ಯಕ್ತಿಗೆ ತಲುಪುವಂತೆ ಮಾಡುವುದು ಸಹ ಬಹಳ ಮುಖ್ಯ. ನಾವು ನಮ್ಮ ಬಗ್ಗೆ ಯೋಚಿಸುವುದಕ್ಕಿಂತ ಇತರ ಕಷ್ಟಗಳಿಗೆ ಸ್ಪಂದಿಸಿ ಸಂವೇದನಾಶೀಲ ವ್ಯಕ್ತಿಗಳಾಗಬೇಕೆಂದು ಅಭಿಪ್ರಾಯಪಟ್ಟರು

ಜಿಲ್ಲೆಯಲ್ಲಿನ ಕಂದಾಯ ಸಮಸ್ಯೆಗಳ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿಗಳು, ರೈತರ ಆಸ್ತಿ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಡಳಿತ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ಈವರೆಗೆ ಸುಮಾರು ೮,೯೨೩ ದರ್ಖಾಸ್ತು ಭೂಮಿಗಳ ಪಿ ಸಂಖ್ಯೆ ಸರಿಪಡಿಸುವ ಪ್ರಕ್ರಿಯೆ ನಡೆಯುತ್ತಿದ್ದು, ೧,೭೨೭ ಆರ್.ಟಿ.ಸಿಗಳನ್ನು ಈಗಾಗಲೇ ವಿತರಿಸಲಾಗಿದೆ. ವಾರಸುದಾರರ ಹೆಸರಿಗೆ ಖಾತೆ ಬದಲಾಯಿಸುವ 'ಇ-ಪೌತಿ' ಅಭಿಯಾನದಡಿ ೩೮,೦೦೦ ಅರ್ಹ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ, ಎಂದು ಮಾಹಿತಿ ನೀಡಿದರು. ಮಿಸ್ಸಿಂಗ್ ಫೈಲ್ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾ ಮಟ್ಟದ ಸಮಿತಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಕೋಲಾರವನ್ನು 'ಕೆರೆಗಳ ನಾಡು' ಎಂದು ಬಣ್ಣಿಸಿದ ಅವರು, ಜಿಲ್ಲೆಯ ೩,೨೩೨ ಕೆರೆಗಳ ಪೈಕಿ ಈಗಾಗಲೇ ೨,೯೩೨ ಕೆರೆಗಳ ಸರ್ವೇ ಪೂರ್ಣಗೊಂಡಿದೆ. ೧,೩೭೯ ಕೆರೆಗಳಲ್ಲಿನ ಒತ್ತುವರಿಯನ್ನು ಬಹುತೇಕ ತೆರವುಗೊಳಿಸಲಾಗಿದ್ದು, ಇನ್ನುಳಿದ ೫೦ ಕೆರೆಗಳಲ್ಲಿ ಬೆಳೆ ಅಥವಾ ಮಳೆಯ ಕಾರಣದಿಂದ ಪ್ರಕ್ರಿಯೆ ಬಾಕಿ ಇದೆ. ತೆರವುಗೊಳಿಸಿದ ಕೆರೆಗಳಿಗೆ ಶಾಶ್ವತವಾಗಿ ಫೆನ್ಸಿಂಗ್ ಅಥವಾ ಟ್ರೆಂಚ್ ನಿರ್ಮಿಸಲು ತಹಸೀಲ್ದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಭೂಸುರಕ್ಷಾ ಯೋಜನೆಯಡಿ ಜಿಲ್ಲಾ ಮತ್ತು ಉಪವಿಭಾಗಾಧಿಕಾರಿಗಳ ಕಚೇರಿಯ ಲಕ್ಷಾಂತರ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ದಾಖಲೆಗಳು ಆನ್‌ಲೈನ್‌ನಲ್ಲಿ ಸುಲಭವಾಗಿ ಲಭ್ಯವಾಗಲಿವೆ. ಇದಲ್ಲದೆ, ಮೂಲಸೌಕರ್ಯದಿಂದ ವಂಚಿತವಾದ ೧೪೫ ವಾಸಸ್ಥಳಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುವ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ ಎಂದು ಅವರು ವಿವರಿಸಿದರು.

ನಗರ ಸ್ವಚ್ಛತೆ ಕೇವಲ ನಗರಸಭೆಯ ಕೆಲಸವಲ್ಲ, ಅದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಕಸಮುಕ್ತ ನಗರ ನಿರ್ಮಾಣಕ್ಕೆ ಸಾರ್ವಜನಿಕರ ಭಾಗವಹಿಸುವಿಕೆ ಅತ್ಯಗತ್ಯ. ಅಧಿಕಾರಿಗಳಲ್ಲಿ ಸಂವೇದನಾಶೀಲತೆ ಕಡಿಮೆಯಾದಾಗ ಸಮಾಜವೇ ಅವರನ್ನು ಬದಲಿಸುವ ಶಕ್ತಿ ಹೊಂದಿದೆ ಎಂದು ಎಚ್ಚರಿಸಿದ ಅವರು ನಾನು ಮಾಡುವ ಕೆಲಸಕ್ಕೆ ಮೊದಲು ನನ್ನ ಆತ್ಮಸಾಕ್ಷಿಗೆ ಉತ್ತರಿಸಬೇಕಿದೆ. ಮಾಡಿದ ಕೆಲಸಗಳ ಬಗ್ಗೆ ಇತಿಹಾಸವೇ ಮಾತನಾಡಲಿ ಎಂಬುದು ನನ್ನ ಆಶಯ, ಎಂದು ನುಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಎ.ಜಿ ಸುರೇಶ್ ಕುಮಾರ್, ಖಜಾಂಚಿ ಬಿ.ಎಲ್.ರಾಜೇಂದ್ರ ಸಿಂಹ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ವಿ. ಮುನಿರಾಜು, ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ಬಿ.ವಿ.ಗೋಪಿನಾಥ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಡಾ. ಕೆ. ಎನ್. ಕವನ ಹಾಗೂ ವಿವಿಧ ಪತ್ರಕರ್ತರು ಉಪಸ್ಥಿತರಿದ್ದರು.

ಚಿತ್ರ : ಕೋಲಾರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಬುಧವಾರ ಪತ್ರಕರ್ತರೊಂದಿಗೆ ಸಂವಾದ ನಡೆಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande