
ಬಳ್ಳಾರಿ, 31 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ (ಕೇಂದ್ರ ತನಿಖಾ ದಳ)ದ ಸಿಬ್ಬಂದಿ ಮಾಜಿ ಸಚಿವ, ಶಾಸಕ ಬಿ. ನಾಗೇಂದ್ರ ಅವರ ಇಬ್ಬರು ಆಪ್ತರ ಮನೆಗಳ ಮೇಲೆ ಬುಧವಾರ ದಾಳಿ ನಡೆಸಿ, ತನಿಖೆ ನಡೆಸಿದೆ.
ಬಿ. ನಾಗೇಂದ್ರ ಅವರ ಆಪ್ತರಾದ ತೇರು ಬೀದಿ ನಿವಾಸಿ ವಿಶ್ವನಾಥ ಅವರ ಮನೆ ಹಾಗೂ ಹುಸೇನ್ ನಗರದಲ್ಲಿ ಇರುವ ಮಾರುತಿ ಅವರ ಮನೆ ಮೇಲೆ ಸಿಬಿಐ ದಾಳಿ ನಡೆಸಿದೆ. ಸಿಬಿಐ ಅಧಿಕಾರಿಗಳ ದಾಳಿಯಲ್ಲಿ ಅಧಿಕಾರಿಗಳು ದಾಖಲೆಗಳು, ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳು ಹಾಗೂ ಇತರೆ ಮಹತ್ವದ ಮಾಹಿತಿಯನ್ನು ವಶಕ್ಕೆ ಪಡೆದು, ಪರಿಶೀಲನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ವಿಶ್ವನಾಥ ಹಾಗೂ ಮಾರುತಿ ಇಬ್ಬರೂ ಮಾಜಿ ಸಚಿವ ನಾಗೇಂದ್ರ ಅವರ ಅತ್ಯಂತ ಆಪ್ತರಾಗಿ ರಾಜಕೀಯ ಹಾಗೂ ಆಪ್ತವಲಯದಲ್ಲಿ ಗುರುತಿಸಿಕೊಂಡು ಹಣಕಾಸು ವ್ಯವಹಾರಗಳನ್ನು - ವೈಯಕ್ತಿಕ ಕೆಲಸಗಳನ್ನು ನಿರ್ವಹಿಸುತ್ತಿದ್ದರು ಎಂದು ಹೇಳಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್