
ಹೊಸಪೇಟೆ, 22 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ವಿಜಯನಗರ ರೈಲ್ವೆ ಬಳಕೆದಾರರ ಸಂಘದ ಪದಾಧಿಕಾರಿಗಳು ಬಳ್ಳಾರಿ ಲೋಕ ಸಭಾ ಸದಸ್ಯರಾದ ಈ.ತುಕಾರಾಂ ಅವರನ್ನು ಸೋಮವಾರ ಭೇಟಿಯಾಗಿ ರೈಲ್ವೆ ಬೇಡಿಕೆಗಳ ಕುರಿತು ಮನವಿ ಸಲ್ಲಿಸಿದ್ದಾರೆ.
ಬೆಳಗಾವಿ-ಹೊಸಪೇಟೆ-ರಾಯಚೂರು-ಹೈದರಾಬಾದ್ (ಮಣಗೂರು) ರೈಲುನ್ನು ಪುನರಾರಂಭಿಸಲು ಕೋರಿ ಮನವಿ ಸಲ್ಲಿಸಿದರು.
8 ವರ್ಷಗಳಿಂದ ಸಂಚರಿಸುತ್ತಿದ್ದ ಈ ರೈಲುನ್ನು ಕಳೆದ 6 ತಿಂಗಳ ಹಿಂದೆ ಸಕಾರಣವಿಲ್ಲದೆ ರದ್ದುಗೊಳಿಸಲಾಗಿದೆ. ಇದರಿಂದಾಗಿ ವಿಶೇಷವಾಗಿ ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳಿಂದ ಪ್ರತಿನಿತ್ಯ ಮಂತ್ರಾಲಯಕ್ಕೆ ಹೋಗುವ ಭಕ್ತಾದಿಗಳಿಗೆ ಅನಾನುಕೂಲವಾಗಿದೆ. ಕಾರಣ ಸದ್ರಿ ರೈಲನ್ನು ಮೊದಲಿದ್ದಂತೆ ಪುನರಾರಂಭಿಸಿ. ಇಲ್ಲವಾದಲ್ಲಿ ಹುಬ್ಬಳ್ಳಿ-ರಾಯಚೂರು ನಡುವೆ ನೂತನ ರೈಲು ಆರಂಭಿಸಿದಲ್ಲಿ ಮಂತ್ರಾಲಯಕ್ಕೆ ಹೋಗುವ ಭಕ್ತರಿಗೆ ಅನುಕೂಲವಾಗುತ್ತದೆ.
ಹೊಸಪೇಟೆ-ಕೊಟ್ಟೂರು-ದಾವಣಗೇರ ಮಾರ್ಗವಾಗಿ ಮಂಗಳೂರಿಗೆ ನೇರ ರೈಲು ಓಡಿಸಲು ಕೋರಿದರು. ಈ ರೈಲು ಆರಂಭಿಸಿದರೆ ವಿಶ್ವ ಪಾರಂಪರಿಕ ತಾಣವಾದ ಹಂಪಿ, ಹಾಸನ, ಬೇಲೂರು, ಹಳೇಬೀಡು, ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ ಇತರೆ ಪ್ರವಾಸಿ ಹಾಗೂ ಧಾರ್ಮಿಕ ಕೇಂದ್ರಗಳ ನಡುವೆ ಸಂಪರ್ಕ ಸಿಗಲಿದೆ. ಶೈಕ್ಷಣಿಕ ಮತ್ತು ಬೃಹತ್ ಆಸ್ಪತ್ರೆ ಸ್ಥಳಗಳಾದ ಉಡುಪಿ, ಕರಾವಳಿ ಬಂದರು ನಗರ ಮಂಗಳೂರು ಹಾಗೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ನಡುವೆ ಸಂಪರ್ಕ ಉಂಟಾಗಿ ಉನ್ನತ ವಿದ್ಯಾಭ್ಯಾಸಕ್ಕಾಗಿ ಆ ಜಿಲ್ಲೆಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಅನುಕೂಲವಾಗಿ, ಪ್ರವಾಸೋದ್ಯಮ ಮತ್ತು ಆರ್ಥಿಕ ಬೆಳವಣಿಗೆಗೆ ಉತ್ತೇಜನ ದೊರೆಯುತ್ತದೆ.
ಪ್ರಸ್ತುತ ಹೊಸಪೇಟೆ-ಸೊಲ್ಲಾಪುರದ ನಡುವೆ ಸಂಚರಿಸುತ್ತಿರುವ ರೈಲನ್ನು ಪಂಢರಾಪುರದವರೆಗೆ ವಿಸ್ತರಣೆ ಮಾಡಬೇಕು. ಈ ರೈಲು ಪ್ರಾರಂಭವಾದಲ್ಲಿ ಪಾಂಡುರಂಗ ವಿಠಲ ಭಕ್ತಾದಿಗಳ ಕೋರಿಕೆಯಾಗಿದ್ದು ಈ ನಿಟ್ಟಿನಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಭಕ್ತಾದಿಗಳ ಆಗ್ರಹವಾಗಿದೆ.
ಹೊಸಪೇಟೆ ರೈಲು ನಿಲ್ದಾಣದ ಆಧುನಿಕರಣ, ಪಿಟ್ಲೈನ್ ನಿರ್ಮಾಣ ಹಾಗೂ 2 ನೂತನ ಪ್ಲಾಟ್ ಫಾರಂಗಳ ನಿರ್ಮಾಣ. ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಹಾಗೂ ಉತ್ತರ ಕರ್ನಾಟಕದ ಪ್ರಮುಖ ನಗರವಾದ ಹೊಸಪೇಟೆಯು ಪ್ರವಾಸೋದ್ಯಮ ಮತ್ತು ಕೈಗಾರಿಕೆ ಬೆಳವಣಿಗೆ ಕೇಂದ್ರವಾಗಿದ್ದು ದೇಶ ವಿದೇಶಗಳಿಂದ ಅಸಂಖ್ಯಾತ ಜನರು ರೈಲು ಮಾರ್ಗದ ಮೂಲಕ ಇಲ್ಲಿಗೆ ಆಗಮಿಸುತ್ತಿದ್ದಾರೆ. ಆದುದರಿಂದ ರೈಲು ಗಾಡಿಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ 2 ಹೊಸದಾಗಿ ಪ್ಲಾಟ್ ಫಾರಂ ಹಾಗೂ ಪಿಟ್ಲೈನ್ ನಿರ್ಮಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು.
ವಿಜಯನಗರ ರೈಲು ಬಳಕೆದಾರರ ಸಂಘದ ಅಧ್ಯಕ್ಷರಾದ ವೈ. ಯಮುನೇಶ್, ಕಾರ್ಯದರ್ಶಿ ಮಹೇಶ್ ಕುಡತಿನಿ, ಮುಖಂಡರಾದ ದೀಪಕ್ಉಳ್ಳಿ, ಜೀರಕಲ್ಲೇಶ್, ಪ್ರಭಾಕರ್, ಎಂ. ಶಂಕ್ರಪ್ಪ, ಕೆ.ವಿ. ರಾಮಾಲಿ, ಆರ್. ರಮೇಶ್ಗೌಡ, ನಜೀರ್ಸಾಬ್, ಶ್ರವಣ್ಕುಮಾರ್, ಜೆ. ವರುಣ್, ಮನೋಹರ್, ಕೃಷ್ಣಮೂರ್ತಿರಾವ್, ನಾಗರಾಜರಾವ್, ಅರುಣ್ಕುಮಾರ್, ಶ್ರೀನಿವಾಸರಾವ್, ಅಮರನಾಥ್ ಕಟಾರೆ, ಹರಿಶಂಕರರಾವ್, ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್