


ರಾಯಚೂರು, 22 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಬಹುವರ್ಷಗಳ ನಂತರ ಜಿಲ್ಲೆಯಲ್ಲಿ 2026ರ ಜನವರಿ 29, 30 ಹಾಗೂ 31ರಂದು ಮೂರು ದಿನಗಳ ಕಾಲ ರಾಯಚೂರು ಉತ್ಸವ ನಿಗದಿಯಾಗಿದೆ. ಈ ಉತ್ಸವ ರಾಯಚೂರು ನಗರಕ್ಕಷ್ಟೇ ಸೀಮಿತವಲ್ಲ; ಇಡೀ ಜಿಲ್ಲೆಯ ಉತ್ಸವವಾಗಿದೆ. ಜಿಲ್ಲೆಯಲ್ಲಿನ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಒಗ್ಗೂಡಿ ಮಾಡಬೇಕಾದ ಕಾರ್ಯಕ್ರಮವಾಗಿದ್ದು, ಸಿದ್ದತಾ ಕಾರ್ಯವು ಇಂದಿನಿ0ದಲೇ, ಈ ಕ್ಷಣದಿಂದಲೇ ಆರಂಭವಾಗಬೇಕು ಎಂದು ರಾಯಚೂರು ಉತ್ಸವದ ಸ್ವಾಗತ ಮತ್ತು ಶಿಷ್ಟಾಚಾರ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಡಿಸೆಂಬರ್ 22ರ ಸೋಮವಾರ ದಂದು ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ರಾಯಚೂರು ಉತ್ಸವ-26ರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉತ್ಸವದ ಎಲ್ಲ ಕೆಲಸ-ಕಾರ್ಯಗಳ ಸುಗಮವಾಗಿ ನಡೆಯಲು ಅನುಕೂಲವಾಗುವಂತೆ ಉತ್ಸವದ ಮೊದಲನೇ ಸಭೆಯ ಪೂರ್ವದಲ್ಲಿಯೇ ನಾವು ಸಮಿತಿಗಳನ್ನು ರಚಿಸಿದ್ದೇವೆ. ಆಯಾ ಸಮಿತಿಗಳು ನಿರ್ವಹಿಸಬೇಕಾದ ಕಾರ್ಯಗಳನ್ನು ಪಟ್ಟಿ ಮಾಡಿದ್ದೇವೆ. ಅದರಂತೆ ಎಲ್ಲ ಕೆಲಸ ಕಾರ್ಯಗಳು ಅಚ್ಚುಕಟ್ಟಾಗಿ ನಡೆಯಬೇಕು ಎಂದು ಸೂಚನೆ ನೀಡಿದರು.
ಉತ್ಸವ ಮೂರು ದಿನಗಳ ಕಾಲ ಅದ್ದೂರಿ ಆಗಿ ನಡೆಯಬೇಕು. ರಾಯಚೂರು ಸಿಟಿ ಜೊತೆಗೆ ದೇವದುರ್ಗ, ಸಿರವಾರ, ಅರಕೇರಾ, ಲಿಂಗಸಗೂರು, ಮಸ್ಕಿ, ಸಿಂಧನೂರ, ಮಾನವಿ ಸೇರಿದಂತೆ ಎಲ್ಲ ತಾಲೂಕಿನ ಜನತೆ ಉತ್ಸವದಲ್ಲಿ ಭಾಗಿಯಾಗಬೇಕು. ಇದಕ್ಕಾಗಿ ಈಗಿನಿಂದಲೇ ಬಸ್ ಗಳ ವ್ಯವಸ್ಥೆಗೆ ಯೋಜನೆ ರೂಪಿಸಬೇಕು. ಮುಖ್ಯವಾಗಿ ಪೊಲೀಸ್ ಇಲಾಖೆಯು ಈಗಿನಿಂದಲೇ ಜಾಗೃತಿ ವಹಿಸಿ ಜನವರಿ 29, 30 ಹಾಗೂ 31ರಂದು ಅದ್ದೂರಿಯಾಗಿ ಜರುಗುವ ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಅವಘಡಗಳಾಗಿ ಜಿಲ್ಲೆಯ ಹೆಸರು ಕೆಡದಂತೆ ಜಣಸಂದಣಿ ನಿರ್ವಹಣೆಗೆ ಶಿಸ್ತುಬದ್ಧ ಯೋಜನೆ ರೂಪಿಸಬೇಕು. ವಾಹನಗಳ ಪಾರ್ಕಿಂಗಗೆ ಮಾರ್ಗಸೂಚಿ ರೂಪಿಸಿ ವಾಹನ ಮತ್ತು ಜನ ಸಂಚಾರಕ್ಕೆ ಸುಗಮ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಪೊಲೀಸ್ ಇಲಾಖೆಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಿಇಓ ಈಶ್ವರ ಕಾಂದೂ ಮಾತನಾಡಿ, ಜಿಲ್ಲಾ ಉತ್ಸವವು ಅರ್ಥಪೂರ್ಣವಾಗಿ ಹಾಗೂ ವ್ಯವಸ್ಥಿತವಾಗಿ ನಡೆಯಲು ಈಗಾಗಲೇ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ವಹಿಸಿದ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ಸೂಚನೆ ನೀಡಿದರು.
ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ ಅವರು ಮಾತನಾಡಿ, ಅಧಿಕಾರಿಗಳು ಮತ್ತು ಸಿಬ್ಬಂದಿ ಜಾಗೃತೆಯಿಂದ ಕೆಲಸ ಮಾಡಬೇಕು. ಗೊಂದಲಗಳಿದ್ದರೆ ಕೇಳಿ ಈಗಿನಿಂದಲೇ ಕೆಲಸ ಆರಂಭಿಸಬೇಕು. ಯಾರು ಸಹ ನಿರ್ಲಕ್ಷ್ಯ ಮಾಡಬಾರದು ಎಂದು ಎಚ್ಚರಿಕೆ ನೀಡಿದರು.
ಸ್ವಾಗತ ಮತ್ತು ಶಿಷ್ಟಾಚಾರ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಅವರು ಮಾತನಾಡಿ, ಆಯಾ ಸಮಿತಿಗಳ ವಿವರ, ನೇಮಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿ ವಿವರ ಹಾಗೂ ಕೆಲಸದ ಹಂಚಿಕೆಯ ವಿವರದ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಸಹಾಯಕ ಆಯುಕ್ತರಾದ ಗಜಾನನ ಬಾಳೆ, ಬಸವಣ್ಣೆಪ್ಪ ಕಲಶೆಟ್ಟಿ, ಪಾಲಿಕೆಯ ಸಮಿತಿ ಕಾರ್ಯದರ್ಶಿ ಶ್ರೀ ಕೃಷ್ಣ ಶಾವಂತಗೇರಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಈರಣ್ಣ, ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಸಂತೋಷರಾಣಿ, ಆಯಾ ತಾಲೂಕಿನ ತಹಸೀಲ್ದಾರರು ಮತ್ತು ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್