
ಬಳ್ಳಾರಿ, 11 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಿಡಾಡಿ ದನಕರುಗಳ ಮಾಲೀಕರು ತಮ್ಮ ದನಕರುಗಳನ್ನು ಮನೆಯಲ್ಲಿಯೇ ಕಟ್ಟಿಕೊಳ್ಳಬೇಕು. ಇಲ್ಲದಿದ್ದಲ್ಲಿ ಸಾರ್ವಜನಿಕ ಉಪದ್ರವದಡಿ ನಿಯಮಾನುಸಾರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ನಗರದಲ್ಲಿ ಬಿಡಾಡಿ ದನಕರುಗಳು ಮುಖ್ಯರಸ್ತೆಗಳಲ್ಲಿ ಅಡ್ಡಲಾಗಿ ತಿರುಗಾಡುವುದು, ಮಲಗಿರುವುದು ಮತ್ತು ಸಾರ್ವಜನಿಕರಿಗೆ ವಾಹನ ಸಂಚಾರಕ್ಕೆ ತೊಂದರೆಯುಂಟು ಮಾಡುತ್ತಿರುವುದು ಕಂಡುಬಂದಿದ್ದು, ಇದರಿಂದ ಬಿಡಾಡಿ ದನಗಳಿಗೂ ತೊಂದರೆಯಾಗುತ್ತಿದೆ.
ಬಿಡಾಡಿ ದನಗಳ ಮಾಲೀಕರು ಈ ಕುರಿತು ಗಮನ ಹರಿಸದೇ ದನಕರುಗಳನ್ನು ರಸ್ತೆಗಳ ಮೇಲೆ ಬಿಡುತ್ತಿರುವುದನ್ನು ಪಾಲಿಕೆಯು ಗಂಭೀರವಾಗಿ ಪರಿಗಣಿಸಿದೆ. ಹಾಗಾಗಿ ಬಿಡಾಡಿ ದನಕರುಗಳ ಮಾಲೀಕರು ತಮ್ಮ ದನಕರುಗಳನ್ನು ತಮ್ಮ ಸುಪರ್ದಿಯಲ್ಲಿಯೇ ಕಟ್ಟಿಕೊಳ್ಳಬೇಕು.
ಇಲ್ಲವಾದಲ್ಲಿ ಪಾಲಿಕೆಯಿಂದ ಕಾರ್ಯಾಚರಣೆ ನಡೆಸಿ ಎಲ್ಲಾ ಬಿಡಾಡಿ ದನಕರುಗಳನ್ನು ಸೆರೆಹಿಡಿದು ನಿಯಮಾನುಸಾರ ನಗರದಿಂದಾಚೆ ಸ್ಥಳಾಂತರಿಸಲಾಗುತ್ತದೆ. ಮರಳಿ ನೀಡಲಾಗುವುದಿಲ್ಲ ಹಾಗೂ ಅಂತಹ ಮಾಲೀಕರನ್ನು ಗುರುತಿಸಿ ಅವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತರು ಎಚ್ಚರಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್