
ಕೊಪ್ಪಳ, 09 ನವೆಂಬರ್ (ಹಿ.ಸ.) :
ಆ್ಯಂಕರ್ : ನಗರಕ್ಕೆ ಹೊಂದಿಕೊಂಡು ಆರಂಭವಾಗಲು ತವಕಿಸುತ್ತಿರುವ ಬಲ್ಡೋಟಾ ಸೇರಿ ಅನೇಕ ಕಾರ್ಖಾನೆಗಳ ಯಾವ ಪುಂಡಾಟಿಕೆಯೂ ನಡೆಯಲ್ಲ, ಇಲ್ಲಿಂದ ಕಾಲ್ಕಿತ್ತುವದು ಗ್ಯಾರಂಟಿ ಎಂದು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ವಿಭಾಗೀಯ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಭರವಸೆ ನೀಡಿದರು.
ಅವರು ನಗರಸಭೆ ಸಂಕೀರ್ಣದ ಮುಂದೆ ನಡೆದಿರುವ ಅನಿರ್ಧಿಷ್ಟಾವಧಿ ಧರಣಿಯ 10ನೇ ದಿನದ ಹೋರಾಟದಲ್ಲಿ ಮಾತನಾಡಿದರು. ಮೇದಾರ್ ಮಹಿಳಾ ಸಂಘದ ಬೆಂಬಲದೊಂದಿಗೆ ನಡೆದ ಹೋರಾಟದಲ್ಲಿ ಮಹಿಳಾ ಶಕ್ತಿ ಒಂದು ಬಾರಿ ಎದ್ದುನಿಂತರೆ ಸಾಕು ಮತ್ತೊಂದು ಕ್ರಾಂತಿ ಸಂಭವಿಸುತ್ತದೆ, ಪ್ರತಿ ಮನೆಯ ತಾಯಿ ಜಾಗೃತಳಾಗಬೇಕಿದೆ. ಹಲವರಿಗೆ ಕೇವಲ ಕಾರ್ಖಾನೆ ಹೂಡುವ ಹಣ ನೋಡಿ ಭಯವಾಗುತ್ತಿದೆ, ಅವರ ಮುಂದೆ ಏನು ನಡೆಯಲ್ಲ ಎಂಬ ಆತಂಕದಲ್ಲಿದ್ದು, ಅದೆಲ್ಲವೂ ಕೇವಲ ಒಂದು ಕಲ್ಪನೆ, ಕಾರ್ಖಾನೆ ಮಾಲೀಕರೆ ಈಗಾಗಲೇ ಬೇರೆ ಉದ್ಯಮ ಸ್ಥಾಪಿಸುವ ಯೋಚನೆ ಮಾಡಿದ್ದಾರೆ. ಧರಣಿ ಯಾವುದೇ ಕಾರಣಕ್ಕೂ ನಿಲ್ಲುವದಿಲ್ಲ, ನಾಲ್ಕು ಜನ ದೂರವಾದರೆ ನಲವತ್ತು ಜನ ಜೊತೆಯಾಗಬೇಕು ಆಗ ಅದು ಜನಸಂಗ್ರಾಮವಾಗುತ್ತದೆ, ನವ ಸ್ವಾತಂತ್ರ್ಯ ಹೋರಾಟವಾಗುತ್ತದೆ ಎಂದರು.
ಇಲ್ಲಿನ ಅವಳಿ ನಗರದ 1.5 ಲಕ್ಷ ಜನರಿಗೆ ಆರೋಗ್ಯ ದುಷ್ಪರಿಣಾಮ ಬೀರುವ ಧಾವಂತದಲ್ಲಿರುವ ಬಲ್ಡೋಟ (ಬಿಎಸ್ಪಿಎಲ್)ವಿಸ್ತರಣೆ ಬೇಡ ಬಸಾಪುರ ಕೆರೆ ಜನರ ಬಳಕೆಗೆ ಮುಕ್ತವಾಗಿಡಬೇಕು, 20ಕಾರ್ಖಾನೆ ದೂಳುಬಾಧಿತ ಜನರ ಆರೋಗ್ಯ ರಕ್ಷಿಸಬೇಕೆಂದು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆಯಿಂದ ನಡೆಯುತ್ತಿರುವ ಅನಿರ್ದಿಷ್ಟಾವ ಧಿಧರಣಿ 10ನೇ ದಿನ ಪೂರೈಸಿತು.
ಧರಣಿ ನಿರತ ಮಹಿಳೆಯರು ತಮ್ಮ ಕುಲಕಸುಬಿನ ಭಾಗವಾದ ಕರಕುಶಲ ಬಿದರಿನ ಬುಟ್ಟಿ, ಅಡ್ಡಲಿಗೆ ಹೆಣೆದು, ಅಲಂಕಾರಿಕ ವಸ್ತುಗಳನ್ನು ತಯಾರಿಸಿ ಪ್ರದರ್ಶನಕ್ಕೆ ಇಟ್ಟರು. ಮಹಿಳೆರನ್ನು ಉದ್ದೇಶಿಸಿ ಅಧ್ಯಕ್ಷೆ ವಿಜಯಲಕ್ಷ್ಮೀ ಮೇದಾರ ಮಾತನಾಡಿ ನಾವು ನಗರದ ಮಧ್ಯಭಾಗದಲ್ಲಿದ್ದರೂ ಕಾರ್ಖಾನೆಯ ದೂಳು, ಹಾರು ಬೂದಿ ಮನೆಯೊಳಗೆ ಬಂದು ಬೀಳುತ್ತದೆ. ದಿನಕ್ಕೆ 3-4 ಬಾರಿ ನೆಲಹಾಸು ತೊಳೆಯುತ್ತೇವೆ. ಚಳಿಗಾಲ ಮತ್ತು ಬೇಸಿಗೆಯಲ್ಲಿ ಇದು ಹೆಚ್ಚಾಗುತ್ತದೆ. ಹೊರಗೆ ಈ ರೀತಿ ಬೀಳುವ ದೂಳು ಉಸಿರಾಡುವಾಗ ಎಷ್ಟು ಸೇವಿಸುತ್ತೇವೆ ಗೊತ್ತಿಲ್ಲ ಎಂದರು.
ವಿಸ್ತರಣೆ ಬೇಡ ಎಂದು ಹೋರಾಟ ಮಾಡಿದರೂ ಇತ್ತ ಗಮನ ಕೊಡದ ಸರಕಾರದ ನಿಲುವನ್ನು ಖಂಡಿಸಿದರು. ಸರಕಾರ ಹಗುರವಾಗಿ ಪರಿಗಣಿಸಬಾರದು. ಜನಪ್ರತಿನಿದಿನಗಳು ಕಿವುಡಾಗಿ, ಕುರುಡಾಗಿ ಕೂಡಬಾರದು ಎಂದರು. ಧರಣಿಯಲ್ಲಿ ಲತಾ ನಾ. ಮೇದಾರ, ಲಕ್ಷ್ಮೀ ಮೆದಾರ, ಸುಮಾ ಓಂಕಾರಿ, ಕಸ್ತೂರಿ, ಭಾಗ್ಯಮ್ಮ,, ಮಾಳಮ್ಮ, ಹುಲಿಗೆಮ್ಮ ವಿಜಯಲಕ್ಷ್ಮೀ ಮೇದಾರ, ರೆಣುಕಾ, ಯಶೋಧ, ಮಂಜವ್ವ, ಶೇಖಮ್ಮ, ವೀಣಾ ಎಚ್. ಗುಂಡಮ್ಮ, ನಾಗರತ್ನ, ಮಂಜುಳಾ, ಪದ್ಮಾ ಶ್ರೀನಿವಾಸ. ಇಂದ್ರಮ್ಮ, ಲಕ್ಷ್ಮೀ, ದಿವ್ಯಾ, ನಾಗಮ್ಮ, ಗಂಗಮ್ಮ, ಚಂದ್ರಯ್ಯ ಇಟಗಿಮಠ, ಶಂಭುಲಿಂಗಪ್ಪ ಮೇದಾರ ಇದ್ದರು.
ಅಲ್ಲಮಪ್ರಭು ಬೆಟ್ಟದೂರು, ಕೆ.ಬಿ.ಗೋನಾಳ, ಮಹಾಂತೇಶ ಕೊತಬಾಳ, ಮಖಬೂ¯ ರಾಯಚೂರು, ಬಸವರಾಜ ನರೇಗಲ್, ಮಹಾದೇವಪ್ಪ ಎಸ್. ಮಾವಿನಮಡು, ಪ್ರಕಾಶ ಮೇದಾರ, ದುರುಗೇಶ ಎಂ ಹಿರೇಮನಿ, ಬಸವರಾಜ ಶೀಲವಂತರ, ಬಸವರಾಜ ಹೂಗಾರ ಹಿರೇಸಿಂದೋಗಿ, ರಾಮಲಿಂಗಯ್ಯ ಶಾಸ್ತ್ರಿಮಠ ಧರಣಿ ನೇತೃತ್ವ ವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್