


ಬಳ್ಳಾರಿ, 06 ನವೆಂಬರ್ (ಹಿ.ಸ.) :
ಆ್ಯಂಕರ್ : ಕಬ್ಬು ಬೆಳೆಗಾರರ ಬೆಳೆಗೆ ಸೂಕ್ತ ಬೆಲೆ ಘೋಷಣೆ ಮಾಡಬೇಕು ಬೇಡಿಕೆ ಸೇರಿ ರೈತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ ಬಳ್ಳಾರಿ ಜಿಲ್ಲಾ ಘಟಕವು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಗುರುವಾರ ಮನವಿ ಸಲ್ಲಿಸಿದೆ.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ ಬಳ್ಳಾರಿ ಜಿಲ್ಲಾ ಘಟಕದ ಜಿಲ್ಲಾ ಸಂಚಾಲಕ ಕೆ. ದಿಲೀಪ್ ಕುಮಾರ್ ಅವರು ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿ, ರೈತರು ಬೆಳೆದ ಬೆಳೆಗಳಿಗೆ ಸೂಕ್ತ ದರವನ್ನು ಬೆಳೆ ಕಟಾವಿಗಿಂತಲೂ ಮೊದಲೇ ಘೋಷಣೆ ಮಾಡಬೇಕು. ರೈತರಿಗೆ ಅಗತ್ಯವಿರುವ ಕೃಷಿ ಚಟುವಟಿಕೆಯ ಯಂತ್ರೋಪಕರಣಗಳನ್ನು ಮತ್ತು ವಿದ್ಯುತ್ ಅನ್ನು ಸೂಕ್ತ ಪ್ರಮಾಣದಲ್ಲಿ ಪೂರೈಕೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
ರೈತರ ಮಕ್ಕಳಿಗೆ ಅನುಕೂಲವಾಗುವ ದೃಷ್ಟಿಯಿಂದ `ರೈತ ವಿದ್ಯಾನಿಧಿ’ಯನ್ನು ಘೋಷಣೆ ಮಾಡಬೇಕು. ರೈತರು, ಕೃಷಿಕರು ಮತ್ತು ಕೃಷಿ ಚಟುವಟಿಕೆಗಳ ಮೇಲೆ ಆಧಾರವಾಗಿರುವ ಕುಟುಂಬಗಳ ವಿದ್ಯಾರ್ಥಿಗಳಿಗೆ ರೈತ ವಿದ್ಯಾನಿಧಿಯಿಂದ ಶಿಕ್ಷಣಕ್ಕೆ ವಿಶೇಷ ಆರ್ಥಿಕ ನೆರವು ನೀಡಬೇಕು.ಈ ಮೂಲಕ ಕೃಷಿ ಮತ್ತು ಕೃಷಿ ಪೂರಕ ಚಟುವಟಿಕೆಗಳಲ್ಲಿ ಜನರು ಸಕ್ರಿಯವಾಗಿ ಪಾಲ್ಗೊಂಡು ಭವಿಷ್ಯಕ್ಕೂ ಕೃಷಿಯನ್ನು ಸಂರಕ್ಷಿಸಲು ನೆರವಾಗಬೇಕು ಎಂದು ಅವರು ಆಗ್ರಹಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್