


ಹೊಸಪೇಟೆ, 25 ನವೆಂಬರ್ (ಹಿ.ಸ.) :
ಆ್ಯಂಕರ್ : ಹೊಸಪೇಟೆ ನಗರದ ಹಂಪಿ ರಸ್ತೆಯಿಂದ-ಭಟ್ರಳ್ಳಿ ಆಂಜನೇಯ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿರುವ ಗುಜ್ಜಲ್ ಜಯಲಕ್ಷ್ಮಿ ಲೇಔಟ್ ಪಕ್ಕದಲ್ಲಿರುವ ರುದ್ರಭೂಮಿಯ ಆವರಣದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೂ.4.30 ಕೋಟಿ ಅನುದಾನದಲ್ಲಿ ಆಧುನಿಕ ವಿದ್ಯುತ್, ಅನಿಲ ಚಿತಗಾರದ ವೈಕುಂಠಧಾಮ ನಿರ್ಮಾಣ ಕಾಮಗಾರಿಗೆ ಶಾಸಕ ಹೆಚ್.ಆರ್.ಗವಿಯಪ್ಪ ಅವರು ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು ಕೇಂದ್ರದ ನಗರಾಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ರಾಜ್ಯದ ಗಂಗಾವತಿ, ದಾವಣಗೆರೆ, ಗದಗ ಸೇರಿದಂತೆ ಐದು ನಗರಗಳಿಗೆ ಮಾತ್ರ ಈ ಆಧುನಿಕ ಚಿತಗಾರ ಕಾಮಗಾರಿಗೆ ಅನುದಾನ ಮಂಜೂರು ದೊರೆತಿದ್ದು ಅದರಲ್ಲಿ ಹೊಸಪೇಟೆ ನಗರ ಸೇರಿರುವುದು ವಿಶೇಷವಾಗಿದೆ ಎಂದರು.
ಸತತ ಒಂದುವರೆ ವರ್ಷಗಳ ಪ್ರಯತ್ನದ ಫಲವಾಗಿ ನಗರಕ್ಕೆ ಈ ಸೌಲಭ್ಯ ದೊರಕುತ್ತಿದ್ದು, 4.5 ಎಕರೆ ಪ್ರದೇಶದಲ್ಲಿ ಈ ಆಧುನಿಕ ಚಿತ್ರಗಾರ ನಿರ್ಮಾಣವಾಗಲಿದೆ. ಇದರಿಂದ ಸಾರ್ವಜನಿಕರಣ ಹಣ ಉಳಿತಾಯವಾಗಲಿದೆ ಹಾಗೂ ಅಗತ್ಯ ಸ್ಥಳದಲ್ಲಿ ಕಾಂಪೌಂಡ್, ಶೌಚಾಲಯ, ವಿಶ್ರಾಂತಿ ಕೊಠಡಿ, ಕುಡಿಯುವ ನೀರು ಸಹಿತ ಅಗತ್ಯ ಮೂಲ ಸೌಲಭ್ಯಗಳನ್ನು ಶೀಘ್ರ ಕಲ್ಪಿಸಲಾಗುವುದು.
ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ದೊರೆತಿದ್ದು, ನ.25 ರಂದು ಇಂಧನ ಖಾತೆ ಸಚಿವರಾದ ಕೆ.ಜೆ.ಜಾರ್ಜ್ ಅವರ ಉಪಸ್ಥಿತಿಯಲ್ಲಿ ಬೈಲವದ್ದಿಗೆರೆಯ ರೂ.9.15 ಕೋಟಿ ವೆಚ್ಚದ 110/11 ಕೆ.ವಿ ವಿದ್ಯುತ್ ಉಪಕೇಂದ್ರ ಲೋಕಾರ್ಪಣೆ ಹಾಗೂ ನಾಗೇನಹಳ್ಳಿ ರೂ.22.00 ಕೋಟಿ ರೂ ವೆಚ್ಚದಲ್ಲಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಬಳಿ ರೂ.27.65 ಕೋಟಿ ರೂ ವೆಚ್ಚದಲ್ಲಿ ಎರಡು 110/11 ಕೆ.ವಿ ವಿದ್ಯುತ್ ಉಪ ಕೇಂದ್ರಗಳಿಗೆ ಭೂಮಿಪೂಜೆ ಕಾರ್ಯಕ್ರಮವನ್ನು ಹೊಸಪೇಟೆ ತಾಲೂಕಿನ ಬೈಲುವದ್ದಿಗೇರಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ, ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು ಹಾಗೂ ಮಾಜಿ ಸದಸ್ಯರುಗಳು, ನಗರಸಭೆಯ ಸಿಬ್ಬಂದಿಗಳು ಸೇರಿದಂತೆ ರೈತರು, ಸ್ಥಳೀಯರು ಹಾಗೂ ಮುಖಂಡರುಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್