ಹೆಣ್ಣು ಸಂಕುಲವೇ ಒಂದು ಜಾತಿ : ಡಾ.ನಾಗಲಕ್ಷ್ಮಿ ಚೌದರಿ
ಶಿವಮೊಗ್ಗ, 24 ನವೆಂಬರ್ (ಹಿ.ಸ.) : ಆ್ಯಂಕರ್ : ಹೆಣ್ಣನ್ನು ಯಾವುದೇ ಜಾತಿಗೆ ಸೇರಿಸಬೇಡಿ. ಯಾಕೆಂದರೆ ಹೆಣ್ಣು ಸಂಕುಲವೇ ಒಂದು ಜಾತಿ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮಿ ಚೌದರಿ ಹೇಳಿದರು. ಸಹ್ಯಾದ್ರಿ ಕಲಾ ಮತ್ತು ವಿಜ್ಞಾನ ಕಾಲೇಜು ಹಾಗೂ ಕರ್ನಾಟಕ ರಾಜ್ಯ ಮಹಿಳಾ ಆಯೋಗ
Choudari


ಶಿವಮೊಗ್ಗ, 24 ನವೆಂಬರ್ (ಹಿ.ಸ.) :

ಆ್ಯಂಕರ್ : ಹೆಣ್ಣನ್ನು ಯಾವುದೇ ಜಾತಿಗೆ ಸೇರಿಸಬೇಡಿ. ಯಾಕೆಂದರೆ ಹೆಣ್ಣು ಸಂಕುಲವೇ ಒಂದು ಜಾತಿ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮಿ ಚೌದರಿ ಹೇಳಿದರು.

ಸಹ್ಯಾದ್ರಿ ಕಲಾ ಮತ್ತು ವಿಜ್ಞಾನ ಕಾಲೇಜು ಹಾಗೂ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಸಹಯೋಗದೊಂದಿಗೆ ಸೋಮವಾರ ನಗರದ ಸಹ್ಯಾದ್ರಿ ಕಲಾ ಕಾಲೇಜಿನ ಜಯಚಾಮರಾಜೇಂದ್ರ ಸಭಾಂಗಣದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳೊಂದಿಗಗಿನ ಸಂವಾದ ಮತ್ತು ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹೆಣ್ಣಿಗೆ ಅಸಾಧ್ಯ ಎನ್ನವುದು ಯಾವುದು ಇಲ್ಲ. ಆಕೆ ವಿಭಿನ್ನ, ಧೈರ್ಯವಂತೆ. ಮಾತೃತ್ವದ ಶಕ್ತಿಯನ್ನು ಹೊಂದಿರುವ ಆಕೆ ಸಾವನ್ನೇ ಗೆದ್ದು ಮನುಜಕುಲವನ್ನು ಸೃಷ್ಟಿಸುತ್ತಾಳೆ. ಆದರೂ ಕೂಡ ಯಾವುದೇ ಧರ್ಮ, ಜಾತಿ ಮಹಿಳೆಗೆ ಸಮಾನತೆ ಕೊಟ್ಟಿಲ್ಲ. ಅನಾದಿಕಾಲದಿಂದಲೂ ತಳ ಸಮುದಾಯಕ್ಕಿಂತ ಕೀಳಾಗಿ ಆಕೆಯ ಮೇಲೆ ಶೋಷಣೆ ಹಾಗೂ ತಾರತಮ್ಯ ನಡೆಸುತ್ತಾ ಬರಲಾಗಿದೆ. ಆದ್ದರಿಂದ ಆಕೆ ಯಾವ ಜಾತಿಗೆ ಸೇರಿಲ್ಲ, ಅವಳದ್ದೇ ಒಂದು ಜಾತೆ ಎಂದು ಅಭಿಪ್ರಾಯಪಟ್ಟರು.

ಹೆಣ್ಣು ಎಲ್ಲವನ್ನು ಧೈರ್ಯದಿಂದ ಎದುರಿಸುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಈ ಮಣ್ಣಿನ ಗಟ್ಟಿಗಿತ್ತಿಯಾದ ಕೆಳದಿ ಚೆನ್ನಮ್ಮನ ರಕ್ತ ನಿಮ್ಮಲ್ಲೂ ಹರಿಯಬೇಕು. ಅನ್ಯಾಯವಾದಾಗ ಸುಮ್ಮನೆ ಇರದೆ ಧ್ವನಿ ಎತ್ತಬೇಕು. ಮಹಿಳೆಯರು ರಾಜಕಾರಣಕ್ಕೆ ಬಂದು ಈ ದೇಶದ ಬದಲಾವಣೆಗೆ ಕಾರಣರಾಗಬೇಕು.

ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ನಲ್ಲಿ ಮೂಕ್ಕಾಲು ಭಾಗ ಮಹಿಳೆಯರನ್ನು ಗುರಿಯಾಗಿಸುವ ಪ್ರಕರಣಗಳೇ ಇವೆ. ಮಹಿಳೆ ಭಾವನೆಗಳಲ್ಲಿ ಎಷ್ಟು ಬಲಶಾಲಿಯೋ ಅದು ಅಷ್ಟೇ ದುರ್ಬಲವಾಗಿರುವುದೂ ಇದಕ್ಕೆ ಕಾರಣವಾಗಿದ್ದು, ಅತಿ ಎಚ್ಚರಿಕೆಯಿಂದಿರಬೇಕು.

ಕಾಲೇಜುಗಳಲ್ಲಿ ಮಹಿಳೆಯರೊಂದಿಗೆ, ವಿದ್ಯಾರ್ಥಿನಿಯರೊಂದಿಗೆ ಉಪನ್ಯಾಸಕರು ಗೌರವದಿಂದ ನಡೆದುಕೊಳ್ಳಬೇಕು. ಸರ್ಕಾರಿ ಸೌಲಭ್ಯವನ್ನು ಸರಿಯಾಗಿ ತಲುಪಿಸಬೇಕು. ಇಲ್ಲದಿದ್ದಲಿ ಕಾಲೇಜಿನ ಆಂತರಿಕ ದೂರು ಸಮಿತಿಗೆ ದೂರ ನೀಡಿ ಎಂದು ತಿಳಿಸಿದರು.

ಇಂದಿನ ಯುವ ಮನಸ್ಸುಗಳು ಸಕ್ರಿಯವಾದ ರಾಜಕಾರಣವನ್ನು ತಿಳಿದುಕೊಳ್ಳಬೇಕು. ಹೋರಾಟಗಾರರೆಲ್ಲಾ ಸೇರಿ ಈ ರಾಜ್ಯವನ್ನು ಕಟ್ಟಿದ್ದಾರೆ. ಈ ದೇಶದ ಭವಿಷ್ಯವನ್ನು ಬದಲಾಯಿಸಲು ರಾಜಕಾರಣ ಒಂದು ಪ್ರಗತಿಯ ಬೀಗವಾಗಿದೆ. ರಾಜಕಾರಣದಲ್ಲಿ ಮಾತ್ರ ಜಾತಿ ಇರುವುದು. ಯುವ ಮನಸ್ಸುಗಳಲ್ಲಿ ಅಂತಹ ಯಾವುದೇ ಕಲ್ಮಶ ಇಲ್ಲ. ಅವರಿಗೆ ಬೇಕಾಗಿರುವುದು ಉದ್ಯೋಗ, ಶಿಕ್ಷಣ ಹಾಗೂ ಉಜ್ವಲ ಭವಿಷ್ಯ ಮಾತ್ರ ಎಂದರು.

ಶಿವಮೊಗ್ಗ ಜಿಲ್ಲೆ ಶೈಕ್ಷಣಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಹಾಗೂ ಕೃಷಿ ಕ್ಷೇತ್ರದಲ್ಲಿ ತುಂಬಾ ಮುಂದುವರೆದಿದೆ. ಇಂತಹ ಜಿಲ್ಲೆಯಲ್ಲಿ ಹುಟ್ಟಿರುವ ನೀವೆಲ್ಲರೂ ಪುಣ್ಯವಂತರು. ಸಹ್ಯಾದ್ರಿ ಕಾಲೇಜಿನಲ್ಲಿ ಓದಿರುವ ಅನೇಕ‌ ಮಹನೀಯರು ನಾಡಿನ ಕಲೆ, ಸಾಹಿತ್ಯ, ಹೋರಾಟಕ್ಕೆ ಹಲವಾರು ಕೊಡುಗೆ ನೀಡಿದ್ದಾರೆ.

ಯಾವ ವಿಶ್ವವಿದ್ಯಾಲಯ ಕಲಿಸದ ಪಾಠವನ್ನು ಬದುಕು ಕಲಿಸುತ್ತದೆ. ಅವಮಾನ, ಸೋಲು ಹಸಿವಿನ ಮಹತ್ವವನ್ನು ಹೇಳಿ ಕೊಡುತ್ತದೆ. ಅವೆಲ್ಲವನ್ನೂ ಗೆದ್ದು ಮುಂದೆ ಸಾಗುವುದು ಮುಖ್ಯ. ಕುವೆಂಪು ಅವರ ವಿಶ್ವಮಾನವ ಪರಿಕಲ್ಪನೆ ನಾವೆಲ್ಲಾ ಪಾಲಿಸಬೇಕು ಆಗ ಮಾತ್ರ ಉಜ್ವಲ ನಾಡನ್ನು ಕಟ್ಟಲು ಸಾಧ್ಯವಾಗುತ್ತದೆ ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಡಾ.ಸಿರಾಜ್ ಅಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕರ್ನಾಟಕ ಮಹಿಳಾ ವಕೀಲರ ರಾಜ್ಯ ಒಕ್ಕೂಟದ ಜಿಲ್ಲಾಧ್ಯಕ್ಷೆ ಸರೋಜ ಪಿ.ಚೆಂಗೊಳ್ಳಿ, ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ರಾಜೇಶ್ವರಿ, ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ.ಕೆ.ಎನ್.ಮಂಜುನಾಥ್, ಐಕ್ಯೂಎಸಿ ಸಂಚಾಲಕರುಗಳಾದ ಪ್ರೊ. ಜಿ.ಕೃಷ್ಣಮೂರ್ತಿ, ಡಾ.ಮಂಜುನಾಥ್ ಹೆಚ್.ಪಿ., ಕಾಲೇಜಿನ ಮಹಿಳಾ ಸಬಲೀಕರಣದ ಘಟಕದ ಸಂಚಾಲಕರಾದ ಡಾ.ಹಾಲಮ್ಮ ಎಂ., ಡಾ.ಕೆ.ಎನ್. ಮಹಾದೇವಸ್ವಾಮಿ, ಸಂಗೀತ, ಉಪನ್ಯಾಸಕರುಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande